ಬೆಂಗಳೂರು
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸುಮಾರು 57 ದಿನಗಳ ಬಳಿಕ ಬೆಂಗಳೂರಿಗೆ ಬಂದಿಳಿದರು.ನವದೆಹಲಿಯಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಶಿವಕುಮಾರ್ ಟರ್ಮಿನಲ್ ನಿಂದ ಹೊರಬರುತ್ತಿದ್ದಂತೆ ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳತ್ತ ಕೈಬೀಸಿದರು.
ತಮ್ಮ ನಾಯಕನನ್ನು ಕಂಡೊಡನೆ ಅಭಿಮಾನಿಗಳು ಜೈಕಾರ, ಹರ್ಷೋಧ್ಘರಿಸಿ, ಹೂ ಮಳೆ ಸುರಿಸಿದರು.
ದೆಹಲಿ ಹೈಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿದ ಶಿವಕುಮಾರ್ರÀನ್ನು ನೂರಾರು ಕಾರ್ಯಕರ್ತರು ಸ್ವಾಗತ ಕೋರಿದರು. ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ನೇಹಿತನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಅಲ್ಲಿಂದ ತೆರೆದ ಕಾರಿನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸಿದ ಶಿವಕುಮಾರ್ ನೋಡಲು ಸಾವಿರಾರು ಜನರ ಜನಜಂಗುಳಿಯೇ ಸೇರಿತ್ತು. ಹೆಬ್ಬಾಳ ಮಾರ್ಗವಾಗಿ ಕೆಪಿಸಿಸಿ ಕಚೇರಿಗೆ ಆಗಮಿಸಿದ ನಾಯಕನನ್ನು ಅಭಿಮಾನಿಗಳು, ಕಾರ್ಯಕರ್ತರು ರಸ್ತೆ ಮಧ್ಯೆ ಅಲ್ಲಲ್ಲಿ ಭೇಟಿ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾರಿಗೂ ಕೇಡು ಬಯಸಿಲ್ಲ. ನನ್ನ ನಲ್ವತ್ತು ವರ್ಷದ ರಾಜಕಾರಣ ಕೊನೆಗಾಣಿಸಲು ಕೆಲವರು ಹೊರಟಿದ್ದರು.ಆದರೆ ಬೆಂಬಲವಾಗಿ ನಿಂತ ಅಭಿಮಾನಿಗಳ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಭಾವುಕರಾದರು.
ನನಗೆದುರಾದ ತೊಂದರೆಗಳನ್ನು ನಿಮ್ಮ ತೊಂದರೆ ಎಂದು ಭಾವಿಸಿ ಪ್ರೀತಿ ಕಾಳಜಿ ತೋರಿದಿರಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ. ಬಿಜೆಪಿಯಲ್ಲಿರುವ ನನ್ನ ಸ್ನೇಹಿತರಿಗೂ ಮತ್ತು ಜೆಡಿಎಸ್ ಕಾರ್ಯಕರ್ತರಿಗೂ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ಹೇಳಿದರು.ಜನರ ಆಶೀರ್ವಾದ ನನಗೆ ಮಾತ್ರ ಅಲ್ಲ. ನನ್ನ ಹಾಗೆ ನೊಂದವರಿಗೂ ಇರಲಿ. ಸತ್ಯ, ನ್ಯಾಯ, ಕಾಲ ಎಲ್ಲರಿಗೂ ಉತ್ತರ ನೀಡುತ್ತದೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಕಣ್ಣೀರು ಹಾಕುತ್ತೇನೆ. ದೇವರು ನಿಮ್ಮ ಋಣ ತೀರಿಸುವ ಶಕ್ತಿ ಕೊಡಲಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








