ತಿರುಚಿರಾಪಳ್ಳಿ ;
ಕಳೆದ ಮೂರು ದಿನಗಳಿಂದ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕೊಳವೆ ಬಾವಿಯಲ್ಲಿ ಮಗು ಸಿಲುಕಿದ್ದ ಪ್ರಕರಣ ಕೊನೆಗೂ ದುರಂತ ಅಂತ್ಯ ಕಂಡಿದ್ದು, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು 88 ಅಡಿ ಆಳದಲ್ಲಿ ಸಿಲುಕಿದ್ದ 2 ವರ್ಷದ ಮಗು ಸುಜಿತ್ ದುರಾದೃಷ್ಟಕರವಾಗಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದು, ಮಗುವಿನ ರಕ್ಷಣೆಗಾಗಿ ಪ್ರಾರ್ಥನೆ ನಡೆಸಿದ್ದ ಇಡೀ ದೇಶದ ಜನರಿಗೆ ಆಘಾತವನ್ನುಂಟು ಮಾಡಿದೆ. ಬಾಲಕ ಸುಜಿತ್ ಸುರಕ್ಷಿತವಾಗಿ ಹೊರಬರಲಿ ಎಂದು ಲಕ್ಷಾಂತರ ಪ್ರಾರ್ಥಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಮಗುವಿನ ಜೀವ ಉಳಿಯಲಿ ಎಂದು ಪ್ರಾರ್ಥಿಸಿದ್ದರು.
My prayers are with the young and brave Sujith Wilson. Spoke to CM @EPSTamilNadu regarding the rescue efforts underway to save Sujith. Every effort is being made to ensure that he is safe. @CMOTamilNadu
— Narendra Modi (@narendramodi) October 28, 2019
ಈ ಕುರಿತು ಮಾತನಾಡಿರುವ ಕಂದಾಯ ಇಲಾಖೆ ಅಧಿಕಾರಿ ಜೆ. ರಾಧಾಕೃಷ್ಣನ್, “ಕೊಳವೆಬಾವಿ ಗುಂಡಿಯ ಒಳಗೆ ಸಿಲುಕಿದ್ದ ಮಗು ಮೃತಪಟ್ಟಿದ್ದು, ಈಗಾಗಲೇ ಶವ ಕೊಳೆಯುತ್ತಿದೆ. ಮಗುವಿನ ದೇಹದ ಅವಶೇಷಗಳನ್ನಾದರೂ ಪಡೆಯಲು ಮಂಗಳವಾರ ಕೆಲಸ ಮುಂದುವರೆಸಲಾಗುವುದು” ಎಂದು ತಿಳಿಸಿದ್ದಾರೆ.
“ಸೋಮವಾರ ರಾತ್ರಿ 10.30ರ ಸುಮಾರಿಗೆ ಕೊಳವೆ ಬಾವಿಯ ಬಳಿ ದುರ್ವಾಸನೆ ಬೀಸುತ್ತಿದ್ದು, ವೈದ್ಯಕೀಯ ಸಿಬ್ಬಂದಿಗಳು, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ರಕ್ಷಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿಗಳು ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಅಗೆಯುವ ಕಾರ್ಯಾಚರಣೆಯನ್ನು ನಿಲ್ಲಿಸಿದ್ಧೇವೆ” ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಸುಜಿತ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/352926.jpg)