ಹೊಳಲ್ಕೆರೆ:
ದನ ಕರುಗಳೊಂದಿಗೆ ರೈಲ್ವೆ ಹಳಿ ದಾಟಲು ಹೋದ ವ್ಯಕ್ತಿಯೋರ್ವ ಮೃತಪಟ್ಟಿರುವ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ರಾಮಗಿರಿ ಗ್ರಾಮದ ಕೆರೆಕೋಡಿ ಬಳಿ ಇರುವ ಹಳೆ ರೈಲ್ವೆ ಗೇಟ್ ಬಳಿ ಸಂಭವಿಸಿದೆ. ಘಟನೆ ಸಂಭವಿಸುತಿದ್ದಂತೆಯೇ ಸ್ಥಳದಲ್ಲಿಯೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮೃತ ವ್ಯಕ್ತಿ ಗೊಲ್ಲರಹಟ್ಟಿಯ ನಾಗರಾಜ್ (54) ಎಂದು ಗುರುತಿಸಲಾಗಿದೆ. ಮೃತರಿಗೆ ಕಿವಿ ಕೇಳುತ್ತಿರಲಿಲ್ಲ ಹಾಗೂ ಕಣ್ಣು ಕೂಡ ಸರಿಯಾಗಿ ಕಾಣುತ್ತಿರಲಿಲ್ಲ ಎಂದು ಅವರ ಅಣ್ಣ ದೇವೇಂದ್ರಪ್ಪ ಪತ್ರಿಕೆಗೆ ತಿಳಿಸಿದ್ದಾರೆ. ಹಾಗೆಯೇ ಒಂದು ಹಸು ಹಾಗೂ ಕರು ಕೂಡ ರೈಲಿಗೆ ಸಿಲುಕಿ ಮೃತಪಟ್ಟಿವೆ.
ಘಟನೆ ವಿವರ:
ಮೃತ ನಾಗರಾಜ್ ಅವರಿಗೆ ಸಂಭಂದಿಸಿದಂತೆ ಸುಮಾರು 60 ಕ್ಕೂ ಹೆಚ್ಚು ರಾಸುಗಳಿದ್ದವು. ನಿತ್ಯದಂತೆ ಅವುಗಳನ್ನು ಮೇಯಿಸಲೆಂದು ಹೊಡೆದುಕೊಂಡು ಹೋಗುವಾಗ ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ಬಹುತೇಕ ಎಲ್ಲಾ ರಾಸುಗಳು ರೈಲ್ವೆ ಹಳಿ ದಾಟಿವೆ. ಈತ ಕೈಯಲ್ಲಿ ಹಿಡಿದುಕೊಂಡು ಹೋಗುತಿದ್ದ ಹಸು ರೈಲ್ವೆ ರಸ್ತೆ ದಾಟುವಾಗ ದಿಡೀರನೆ ಬರುತಿದ್ದ ರೈಲನ್ನು ಗಮನಿಸಿದ್ದಾರೆ. ಆದರೆ ಪಾರಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಅವಘಡಕ್ಕೆ ಅವೈಜ್ಞಾನಿಕ ಅಂಡರ್ಪಾಸ್ ಕಾರಣ:
ಅವಘಡ ಸಂಭವಿಸಿರುವ ಸ್ಥಳದಲ್ಲಿ ಗ್ರಾಮದ ಜನರು ಹೊಲ, ತೋಟಗಳಿಗೆ ತೆರಳಲು ಹಾಗೂ ದನ ಕರುಗಳನ್ನು ಕಾವಲಿಗೆ ಹೊಡೆದುಕೊಂಡು ಹೋಗಲು ಈ ಹಿಂದೆ ಮಾನವ ಸಹಿತ ರೈಲ್ವೆ ಗೇಟ್ ಇತ್ತು. ನಂತರ ಡಬಲ್ಲೈನ್ ಕಾಮಗಾರಿ ಮಾಡುವಾಗ ಅಂಡರ್ಪಾಸ್ ಜನ ಜಾನುವಾರುಗಳಿಗೆ ಸಹಕಾರಿಯಾಗಲೆಂದು ಅಂಡರ್ಪಾಸ್ ನಿರ್ಮಿಸಲಾಗಿದೆ.
ಆದರೆ ಅದು ಅವೈಜ್ಞಾನಿಕತೆಯಿಂದ ಕೂಡಿದ್ದು, ಹೇಳಿ ಕೇಳಿ ಇದು ಅರೆಮಲೆನಾಡು ಮಳೆಗಾಲದಲ್ಲಿ ಇಲ್ಲಿ ಓಡಾಡುವುದೇ ಕಷ್ಠ ಸಾಧ್ಯ. ಅಂಡರ್ಪಾಸ್ ಕೆಸರು ಗದ್ದೆಯಂತಾಗುತ್ತದೆ. ಇನ್ನು ಅಂಡರ್ ಪಾಸ್ ನಲ್ಲಿ ಆಳುದ್ದ ನೀರು ನಿಲ್ಲುತ್ತದೆ. ಅಲ್ಲದೆ ನೀರು ಕಡಿಮೆಯಾಗುತಿದ್ದಂತೆ ಪಾಚಿ ಕಟ್ಟಿಕೊಂಡಿದ್ದು, ಜನ ಜಾನುವಾರುಗಳು ಬಿದ್ದು ಕಾಲು ಮುರಿದುಕೊಳ್ಳುತಿದ್ದಾರೆ. ಇದರಿಂದ ಬೇಸತ್ತು ಅನಿವಾರ್ಯವಾಗಿ ರೈಲ್ವೆ ಹಳಿ ಕ್ರಾಸ್ ಮಾಡಬೇಕಾದ ಸಂದರ್ಭ ಎದುರಾಗುತ್ತಿದೆ. ಹೀಗಾಗಿ ಅವಘಡಗಳು ಸಂಭವಿಸುತ್ತಿವೆ.
ದಿಡೀರ್ ಪ್ರತಿಭಟನೆ:
ಪದೇ ಪದೇ ಅವಘಡಗಳು ಸಂಭವಿಸುತಿದ್ದು ಇದಕ್ಕೆ ಅವೈಜ್ಞಾನಿಕ ಅಂಡರ್ ಪಾಸ್ ಕಾರಣ ಎಂದು ಗ್ರಾಮಸ್ಥರು ಆರೋಪಿಸಿ ದಿಡೀರ್ ಪ್ರತಿಭಟನೆ ನಡೆಸಿದರು. ಈ ಹಿಂದೆ ಇದ್ದ ಮಾನವ ಸಹಿತ ಲೆವೆಲ್ ಕ್ರಾಸಿಂಗ್ ಗೆ ಅನುಮತಿ ನೀಡಬೇಕು. ಮಳೆಗಾಲದಲ್ಲಿ ಜನ ಜಾನುವಾರುಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
