ಚಿತ್ರದುರ್ಗ
ಗ್ರಂಥಾಲಯ ಒಂದು ವಿಶ್ವವಿದ್ಯಾಲಯವಿದ್ದಂತೆ, ಅಲ್ಲಿ ಪ್ರಪಂಚದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುವುದರ ಜೊತೆಗೆ ಎಲ್ಲರ ಜ್ಞಾನದಾಹ ತೀರಿಸುವ ಕೇಂದ್ರವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ನಗರದ ಮುರುಘರಾಜೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಮಕ್ಕಳಲ್ಲಿ ಓದುವ ಆಸಕ್ತಿ ಕುಂದುತ್ತಿದ್ದು, ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಸಮಯ ವ್ಯರ್ಥಮಾಡುತ್ತಿರುವುದು ಬೇಸರದ ಸಂಗತಿ.
ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ಓದುವ ಹವ್ಯಾಸವನ್ನು ರೂಡಿಸಬೇಕು. ಸರ್ಕಾರಿ ಕೆಲಸಕ್ಕಾಗಿಯೇ ಕಾಯುತ್ತ ನಿರುದ್ಯೋಗಿ ಗಳಾಗಬಾರದು. ತಮ್ಮಲ್ಲಿರುವ ಜ್ಞಾನವನ್ನು ಬಳಸಿ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬೇಕು. ಎಲ್ಲಾ ರೀತಿಯ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಓದುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ಸರ್ಕಾರಿ ಕೆಲಸ ಸೇರಿ ಕುಟುಂಬ ನಿರ್ವಹಣೆ ಮಾಡಿದರೇ ಸಾಲದು, ತಮ್ಮ ಜ್ಞಾನದಿಂದ ಸಮಾಜಮುಖಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸ್ವಾರ್ಥ ಬಿಟ್ಟು ದೇಶ ಕಟ್ಟುವತ್ತ ಸಾಗಬೇಕು. ಯಾವಾಗಲೂ ಕುಂದು ಕೊರತೆಯನ್ನೇ ಕೇಂದ್ರವಾಗಿಟ್ಟುಕೊಳುವ ಬದಲು ಧನಾತ್ಮಕವಾಗಿ ಯೋಚನೆ ಮಾಡಿ, ಸಮಾಜದಲ್ಲಿರುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಡಿಸಿ ವಿನೋತ್ ಪ್ರಿಯಾ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿ, ಗ್ರಂಥಾಲಯ ಒಂದು ದೇವಾಲಯವಿದ್ದಂತೆ, ಮಾನಸಿಕ ಒತ್ತಡ ನಿವಾರಿಸುವುದರ ಜೊತೆಗೆ ಬೇಸರವನ್ನು ನೀಗಿಸುತ್ತದೆ. ದಿನದಲ್ಲಿ ಒಂದು ಗಂಟೆಯಾದರೂ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಗ್ರಂಥಾಲಯ ನಿರ್ಮಿಸಿದರೆ, ಅಲ್ಲಿನ ರೋಗಿಗಳ ಒತ್ತಡ ನಿವಾರಿಸಿದಂತಾ ಗುತ್ತದೆ. ಬುಡಕಟ್ಟು ಹಾಗೂ ಗೊಲ್ಲ ಸಮುದಾಯದಂತಹ ಹಿಂದುಳಿದ ವರ್ಗಗಳ ಬಗ್ಗೆ ಹಾಗೂ ಮಾಸ್ತಿ ಕಲ್ಲುಗಳು ಮತ್ತು ಸಾವಿತ್ರಿ ಬಾ ಫುಲೆ ಅವರ ಬಗ್ಗೆ ಅಧ್ಯಯನ ಮಾಡಿ, ದಾಖಲೆಗಳನ್ನು ಕಲೆ ಹಾಕುವ ಕಾರ್ಯ ಆಗಬೇಕು ಎಂದರು.
ಗ್ರಂಥಪಾಲಕ ನಾರಾಯಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, 1948 ರಿಂದ ಗ್ರಂಥಾಲಯ ಸಪ್ತಾಹ ಜಾರಿಗೆ ಬಂದಿದ್ದು, ಓದುಗರನ್ನು ಸೆಳೆಯುವುದು, ಗ್ರಂಥಾಲಯ ಪ್ರಾಮುಖ್ಯತೆ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಮಾಯಣ, ಮಹಾಭಾರತ, ಬೈಬಲ್, ಕುರಾನ್ನಂತಹ ಗ್ರಂಥಗಳು ಹಿಂದೆ ಆಗಿರುವ ಘಟನೆ ಮುಂದೆ ನೀಡಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಮಾನವರ ನೈತಿಕತೆ ಹಾಗೂ ಭಾರತದ ಸಂವಿಧಾನ ಜನಸಮೂಹದ ಬದುಕಿನ ಬಗ್ಗೆ ತಿಳಿಸುತ್ತದೆ. ಇಂದಿನ ದಿನಮಾನದಲ್ಲಿ ಪುಸ್ತಕ ಓದುವವರ ಸಂಖ್ಯೆ ಕುಂದುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಪ್ರತಾಪ್ ಜೋಗಿ ಓ, ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್ ತಿಪ್ಪೇಸ್ವಾಮಿ, ಗ್ರಂಥಾಲಯ ಸಹಾಯಕ ಕೆ. ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
