ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡುವಲ್ಲಿ ಸರ್ಕಾರ ವಿಫಲ : ವಿ.ಎಸ್.ಉಗ್ರಪ್ಪ

ಬೆಂಗಳೂರು

    ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡದ ಬಿಜೆಪಿ ಸರ್ಕಾರ ಕರ್ತವ್ಯ ಮರೆತಿದ್ದು, ಪಕ್ಷದ ಹಿರಿಯ ನಾಯಕ ತನ್ವೀರ್ ಸೇಠ್ ಮೇಲಿನ ದಾಳಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಕರಣಗೊಳಿಸಲು ಯತ್ನಿಸುತ್ತಿದ್ದಾರೆ. ಪಕ್ಷ ಇದನ್ನು ಖಂಡಿಸುವುದಾಗಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

     ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಠ್ ಮೇಲಿನ ದಾಳಿಗೂ ಕೆಲವು ಸಂಘಟನೆಗಳಿಗೂ ಸಂಬಂಧ ಜೋಡಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸಂದರ್ಭದಲ್ಲಿ ಕ್ಯಾತಮಾರನಹಳ್ಳಿಯ ಪ್ರಕರಣದಲ್ಲಿ ಯುವಕರ ಮೇಲೆ ಅನೇಕ ಕೇಸ್ ಗಳಿದ್ದವು. ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದು, ಅವರ ಭವಿಷ್ಯದ ದೃಷ್ಟಿಯಿಂದ ಕೇಸ್ ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಒಪ್ಪಿತ್ತು. ಇದೆಲ್ಲ ಈಗ ಮುಗಿದ ಅಧ್ಯಾಯ ಎಂದರು.ರಕ್ಷಣೆ ಕೊಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ತಮ್ಮ ಕರ್ತವ್ಯವನ್ನು ಮರೆಮಾಚಿ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದೆ ಯಡಿಯೂರಪ್ಪ ಮೇಲೆ ಆರೋಪಿಸಿ, ಎಸ್ ಡಿ ಪಿ ಐನವರಿಗೆ ರಕ್ಷಣೆ ಕೊಟ್ಟಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

     ಮಂಗಳೂರು ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಸ್‌ಡಿಪಿಐ ಜೊತೆಯಾಗಿ ವಿಜಯೋತ್ಸವ ಆಚರಿಸಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇವರಿಗೆ ಎಸ್ ಡಿ ಪಿ ಐ ಬೆಂಬಲ ಇದೆ. ಕಾನೂನಿನ ಚೌಕಟ್ಟಿನಲ್ಲಿ ಹಿಂಪಡೆದ ಪ್ರಕರಣಗಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.

    ಶಾಸಕರಿಗೆ ರಕ್ಷಣೆ ನೀಡಲಾರದ ಸರ್ಕಾರ ಇದು. ಕೋತಿ ತಿಂದು ಮೇಕೆಗೆ ಸವರಿದ ಕೆಲಸ ಯಡಿಯೂರಪ್ಪ ಮಾಡಬಾರದು. ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿರುವ ಯುವಕನಿಗೂ ಬಿಜೆಪಿಗೂ ನಂಟಿದೆ. ಮಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಯುವಕ ಬಿಜೆಪಿ ಧ್ವಜ ಹಿಡಿದು ಪ್ರಚಾರದಲ್ಲಿ ಭಾಗಿಯಾಗಿದ್ದ. ಈ ಬಗ್ಗೆ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

   ಶ್ರೀರಾಮುಲುಗೆ ಇರುವ ವಿದ್ವತ್, ಜ್ಞಾನಕ್ಕೆ ಮುಖ್ಯಮಂತ್ರಿ ಅಲ್ಲ ಪ್ರಧಾನಿ ಆಗಬೇಕಿತ್ತು. ಆ ಯೋಗ್ಯತೆ ಅವರಿಗಿದೆ. ಆದರೆ ಅವರು ಸಿದ್ದರಾಮಯ್ಯ ತೊಡೆ ತಟ್ಟುವ ಮಟ್ಟಕ್ಕೆ ಹೋಗಿದ್ದು ಸರಿಯಲ್ಲ. ಸಿದ್ದರಾಮಯ್ಯ ವಿರುದ್ಧ ಸವಾಲು ಹಾಕಿ ತಮ್ಮನ್ನು ತಾವೇ ದೊಡ್ಡ ನಾಯಕ ಎಂಬ ಭ್ರಮೆಯಲ್ಲಿ ಶ್ರೀರಾಮುಲು ಇದ್ದಾರೆ.

  ವಿಧಾನಸಭಾ ಚುನಾವಣೆಗೂ ಮುನ್ನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗುತ್ತೇನೆ. ವಾಲ್ಮೀಕಿ ಜನಾಂಕ್ಕೆ ಶೇ.7.5 ಮೀಸಲಾತಿ ಜಾರಿ ಮಾಡುವುದಾಗಿ ಜನರಿಗೆ ಕೊಟ್ಟ ಭರವಸೆ ಏನಾಯಿತು?. ನಿಮ್ಮ ಸ್ನೇಹಿತ ಜನಾರ್ದನ ರೆಡ್ಡಿ ಎಲ್ಲಿದ್ದಾರೆ? ಅವರಿಗೆ ರಕ್ಷಣೆ ಕೊಡಲು ಏಕೆ ಆಗುತ್ತಿಲ್ಲ. ಜನರ ಆಶೋತ್ತರ ಈಡೇರಿಸದ ರಾಮುಲು ಮೊಣಕಾಲ್ಮೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮತ್ತೊಮ್ಮೆ ತಮ್ಮ ವಿರುದ್ಧವಾದರೂ ಸರಿಯೇ ಅಥವಾ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ವಿರುದ್ಧ ಗೆದ್ದು ಬಂದು ತೋರಿಸಲಿ. ನಂತರ ಸಿದ್ದರಾಮಯ್ಯ ವಿರುದ್ಧ ಮಾತನಾಡಲಿ ಎಂದು ಟೀಕಾಪ್ರಹಾರ ನಡೆಸಿದರು.

   ಗೋಕುಲಾಷ್ಟಮಿಗೂ ಇಮಾಮ್ ಸಾಬ್ ಗೂ ಇರುವ ಸಂಬಂಧ ಬಿಜೆಪಿಗೂ ಸಾಮಾಜಿಕ ನ್ಯಾಯಕ್ಕೂ ಇರುವ ಸಂಬಂಧ. ನೆರೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಜನರ ಮನಸನ್ನು ವಿಷಯಾಂತರಗೊಳಿಸಲು ಮೈಸೂರಿನ ತನ್ವೀರ್ ಸೇಠ್ ಹಲ್ಲೆ ಪ್ರಕರಣವನ್ನು ಬಿಜೆಪಿ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಉಗ್ರಪ್ಪ ಕಿಡಿಕಾರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link