ಪಾವಗಡ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೆರೆಕುಂಟೆಗಳ ದುರಸ್ಥಿ, ರೈತರ ಸಾಲ ಮನ್ನಾ ಸೇರಿದಂತೆ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಕೂಡಲೆ ತಾತ್ವಿಕ ಅಂತ್ಯ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿಯ ಮುಂದೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕೆಲವರಿಗೆ ಒಂದು ಕಂತು, ಕೆಲವರಿಗೆ ಎರಡು ಕಂತಿನ ಹಣ ಮಾತ್ರ ಬಿಡುಗಡೆಯಾಗಿರುತ್ತದೆ. ಈ ವರ್ಷದ ಕೊನೆಯಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಕೆರೆಕುಂಟೆಗಳು ತುಂಬಿದ್ದವು. ಹಲವು ವರ್ಷಗಳಿಂದ ನೀರು ಕಾಣದ ಕೆರೆಗಳು ಬಿರುಕು ಬಿಟ್ಟು ಹೊಡೆದಿವೆ. ಇಂತಹ ಕೆರೆಗಳನ್ನು ಕೂಡಲೆ ದುರಸ್ಥಿಗೊಳಿಸಿ ಅಂತರ್ಜಲ ಮಟ್ಟ ವೃದ್ದಿಯಾಗುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಮುಂದಾಗಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಲ್ಲಿ ಬಹಳ ತಾರತಮ್ಯವಾಗಿದ್ದು, ಕೆಲ ರೈತರಿಗೆ ಸಾಲಮನ್ನಾ ಯೋಜನೆ ಸಿಗದೆ ಬ್ಯಾಂಕ್ ಆಧಿಕಾರಿಗಳು ಕೂಡ ರೈತರಿಗೆ ಸೂಕ್ತ ಮಾಹಿತಿ ನೀಡದ ಕಾರಣ ತಾಲ್ಲೂಕಿನ ಸಾವಿರಾರು ರೈತರಿಗೆ ಸಾಲ ಮನ್ನಾ ಆಗಿಲ್ಲ. ಸಂಬಂಧ ಪಟ್ಟವರು ಕೂಡಲೆ ಲೀಡ್ ಬ್ಯಾಂಕ್ ಆಧಿಕಾರಿಗಳ ಸಭೆ ಕರೆದು ರೈತರಿಗೆ ಯೋಜನೆಯಲ್ಲಿ ಸಿಕ್ಕ ಸಾಲಮನ್ನಾ ಪೂರ್ಣವಾಗಿ ಬಳಕೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ತಹಸೀಲ್ದಾರ್ ಎಲ್.ಎಂ. ನಂದೀಶ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೆರೆ ಕುಂಟೆಗಳ ದುರಸ್ಥಿ, ರೈತರ ಸಾಲಮನ್ನಾ, ಬೆಳೆವಿಮೆ ಹಾಗೂ ಶುದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಂಬಂಧ ಪಟ್ಟ ಆಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದರು. ತಾಲ್ಲೂಕು ರೈತ ಸಂಘದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
