ತುಮಕೂರು
ಜಯಚಾಮರಾಜೇಂದ್ರ ಒಡೆಯರ್ ಅವರು ಮಹಾರಾಜರಾಗಿ ಅರಮನೆಯಲ್ಲಿ ಕುಳಿತು ಅಧಿಕಾರಕ್ಕೆ ಸೀಮಿತವಾಗಲಿಲ್ಲ. ಬದಲಾಗಿ, ಜನರ ಜೊತೆ ಬೆರೆತು, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಾ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡರು. ಈ ಕಾರ್ಯಗಳನ್ನು ಇಂದಿಗೂ ಕರ್ನಾಟಕದ ಉದ್ದಗಲಕ್ಕೂ ಅಲ್ಲಲ್ಲಿ ಕಾಣಬಹುದಾಗಿದೆ ಎಂದು ಒಡೆಯರ್ ಅವರ ಮೊಮ್ಮಗ ಆದಿ-ಹೊನ್ನನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರ ಮಳವಳ್ಳಿಯ ಶ್ರೀ ಮಂಟೇಸ್ವಾಮಿ ಮಠದ ಮಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ತಿಳಿಸಿದರು.
ಇಲ್ಲಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಒಡೆಯರ್ ಅವರ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸಿ ಮಾತನಾಡುತ್ತಿದ್ದ ಅವರು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ಆಡಳಿತಗಳನ್ನು ನೋಡಿದ್ದರು. ಪ್ರಜಾಪ್ರಭುತ್ವ ಮಾದರಿಯ ಆಡಳಿತ ಅವರಿಗೆ ಇಷ್ಟವಾಗಿತ್ತು.
ರಾಜಮನೆತನದ ಆಡಳಿತವಾಗಿದ್ದರೂ ನಾಗರಿಕರಿಗೆ ಹಕ್ಕುಗಳನ್ನು ನೀಡುವತ್ತ ಆಸಕ್ತಿ ವಹಿಸಿದರು. ಇದರ ಪರಿಣಾಮವಾಗಿ ಯಾವುದೇ ತಾರತಮ್ಯ ಇಲ್ಲದೆ ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶ ನೀಡುವಂತಹ ಆದೇಶವೊಂದನ್ನು ಅವರು ಹೊರಡಿಸಿದರು. ಆ ಮೂಲಕ ಸಮಾನತೆಯ ಪ್ರತಿಪಾದನೆಯನ್ನು ಎತ್ತಿ ಹಿಡಿದಿದ್ದರು ಎಂದು ವಿವರಿಸಿದರು.
21ನೆ ವಯಸ್ಸಿಗೆ ಜವಾಬ್ದಾರಿ ಹೊತ್ತುಕೊಂಡ ಒಡೆಯರ್ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದರು. ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಜೈಲುಗಳನ್ನು ವೀಕ್ಷಿಸಿ ಅಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣರಾದರು. ಕೃಷಿಗೆ ಒತ್ತು ನೀಡಿದರು. ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿಯೂ ಇವರ ಕೊಡುಗೆ ಅಪಾರ. ಇಂದಿಗೂ ಸಹ ಸಿಂಗಪುರದಲ್ಲಿ ಮೈಸೂರು ಯೋಧರ ಸ್ಮರಣೆಗಳಿವೆ ಎಂದರು.
ವನ್ಯಜೀವಿ ಸಂರಕ್ಷಣೆಗೆ ಒತ್ತು ಕೊಟ್ಟ ಒಡೆಯರ್, ಪ್ರಾಣಿಗಳನ್ನು ಕೊಲ್ಲುವ ಬದಲು ಅವುಗಳನ್ನು ಸಂರಕ್ಷಿಸಲು ಮುಂದಾದರು . ಹಲವು ಯೋಜನೆಗಳಿಗೆ ಭೂಮಿಯನ್ನು ನೀಡಿದರು. ಸ್ವಾತಂತ್ರ್ಯಾ ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲ ರಾಗಿ ಕಾರ್ಯನಿರ್ವಹಿಸಿದರು. ಇಷ್ಟಾಗಿಯೂ ಇವರು ಸಂಸಾರಿಯಾಗಿದ್ದರು. ಸಾಂಸಾರಿಕ ಜೀವನವನ್ನು ಉತ್ತಮವಾಗಿಯೆ ನಡೆಸಿಕೊಂಡು ಬಂದಿದ್ದರು. ಅಂತಹ ಜವಾಬ್ದಾರಿಯನ್ನು ಹೊತ್ತು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದರು ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಒಡೆಯರ್ ಅವರ ಅಳಿಯ ಆರ್.ರಾಜಚಂದ್ರ ಮಾತನಾಡಿ, ತುಮಕೂರು ಜಿಲ್ಲೆಗೆ ಒಡೆಯರ್ ಅವರ ಕೊಡುಗೆ ಅಪಾರವಿದೆ. 1837 ರಲ್ಲಿ ತುಮಕೂರು ಡಿಸ್ಟ್ರಿಕ್ಟ್ ಆಯಿತು. ಆ ಸಂದರ್ಭದಲ್ಲಿ 8 ತಾಲ್ಲೂಕುಗಳು ಇದ್ದು, ಕೇವಲ 5 ಲಕ್ಷ ಜನಸಂಖ್ಯೆ ಇತ್ತು. ಮೈಸೂರು ಸಂಸ್ಥಾನದ ಅನೇಕ ರಾಜರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕುಣಿಗಲ್, ತುರುವೇಕೆರೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ದೇವರಾಯನದುರ್ಗ ಕ್ಕೆ ಚಿಕ್ಕದೇವರಾಯರು ಭೇಟಿ ನೀಡಿ ಅಲ್ಲಿ ದೇವಸ್ಥಾನ ಕಟ್ಟಲು ನೆರವಾಗಿದ್ದರು. ಅದನ್ನು ಚಿಕ್ಕದೇವರಾಯನದುರ್ಗ ಎಂದು ಕರೆಯಲಾಗುತ್ತಿತ್ತು. ಆನಂತರ ದೇವರಾಯನದುರ್ಗವಾಗಿ ಹೆಸರುವಾಸಿಯಾಯಿತು ಎಂದು ವಿವರಿಸಿದರು.
1942 ಜುಲೈ 8 ರಂದು ಜಯಚಾಮರಾಜೇಂದ್ರ ಒಡೆಯರ್ ತುಮಕೂರಿಗೆ ಪ್ರಥಮ ಭೇಟಿ ನೀಡಿದ್ದರು. ಅವರ ಕಾಲದಲ್ಲಿ ಮಾರ್ಕೋನಹಳ್ಳಿ, ನಾಗಿನಿ ನದಿ, ಜಯಮಂಗಲಿ ಮತ್ತಿತರ ನದಿಗಳಿಗೆ ಸೇತುವೆ ನಿರ್ಮಿಸಲಾಯಿತು. ಹಲವು ಶಾಲೆಗಳನ್ನು ತೆರೆದರು. ಇಂದಿಗೂ ಕೆಲವು ಕಡೆ ಇವುಗಳನ್ನು ಗಮನಿಸಬಹುದು ಎಂದರು. ತುಮಕೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರ ಕಾರ್ಯ ಶ್ಲಾಘನೀಯ ಎಂದರು.
ತುಮಕೂರು ವಿ.ವಿ. ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಅರಸರ ಕಾಲದಲ್ಲಿ ರಾಮರಾಜ್ಯವಾಗಿತ್ತು. ಒಡೆಯರ್ ಅವರು ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದರು. ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡುವ ಬದಲು ಜನರ ಬಳಿಗೆ ತೆರಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಲಹೆಯಂತೆಯೆ ಜಯಚಾಮರಾಜ ಒಡೆಯರ್ ಪ್ರಸಿದ್ಧಿಗೆ ಬಂದು ಬಹಳಷ್ಟು ಜನೋಪಯೋಗಿ ಕೆಲಸಗಳನ್ನು ಮಾಡಿದರು ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸಿದ ಮೈಸೂರು ಮಹಾರಾಜರ ಆಳ್ವಿಕೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಗೆ ಅವರ ಕೊಡುಗೆಯನ್ನು ದಾಖಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಮೈಸೂರು ಅರಸರು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ಕೊಟ್ಟು ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಿದ್ದರು. ಜಿಲ್ಲೆಯಲ್ಲಿ ಅವರ ಕಾಲದಲ್ಲಿ ಅನೇಕ ಕಟ್ಟಡಗಳು ಶಂಕುಸ್ಥಾಪನೆ ಗೊಂಡಿವೆ. ಆದರೆ ಸಿದ್ಧಗಂಗಾ ಹೈಸ್ಕೂಲ್ ಹೊರತುಪಡಿಸಿ ಉಳಿದ ಕೆಲವು ಕಡೆ ಅವರ ಹೆಸರು ಇರುವ ಶಂಕುಸ್ಥಾಪನಾ ಫಲಕಗಳು ಧೂಳು ಹಿಡಿದಿವೆ. ನಾವೆ ಕೆಲವು ಕಡೆ ಆ ಧೂಳು ಒರೆಸಿ ಬಂದಿದ್ದೇವೆ ಎಂದು ಇಷ್ಟು ದಿನಗಳ ಕಾರ್ಯದ ಅನುಭವ ಹಂಚಿಕೊಂಡರು.
ಜಯಚಾಮರಾಜೇಂದ್ರ ಒಡೆಯರ್ ಅವರ ಕುರಿತು ಕೃತಿ ರಚನೆಕಾರ ಕೆ.ಪಿ.ಲಕ್ಷ್ಮೀಕಾಂತರಾಜೆ ಅರಸ್ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಗೋವಿಂದಯ್ಯ, ಕೋಶಾಧ್ಯಕ್ಷ ರಾಕ್ಲೈನ್ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಒಡೆಯರ್ ಅವರ ಕಿರುಚಿತ್ರ ಪ್ರದರ್ಶಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
