ಸ್ಮಾರ್ಟ್‍ಸಿಟಿ ಕಂಪನಿ ಈಗ ಖಾಲಿ…ಖಾಲಿ..!

ತುಮಕೂರು
    ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ವಿವಾದಗಳ ಸುತ್ತ ಗಿರಕಿ ಹೊಡೆಯುತ್ತಿರುವ ನಡುವೆಯೇ, ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಕಚೇರಿಯ ಪ್ರಮುಖ ಹುದ್ದೆಗಳೆಲ್ಲ ಈಗ ಖಾಲಿ..ಖಾಲಿಯಾಗಿವೆಯೆಂಬ ಸಂಗತಿ ಬೆಳಕಿಗೆ ಬಂದಿದೆ.ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಹುದ್ದೆಯಂತೂ ಸೆಪ್ಟೆಂಬರ್ ಮಧ್ಯಭಾಗದಿಂದಲೂ ಖಾಲಿಯಾಗಿಯೇ ಉಳಿದಿದೆ.
    ಈ ಹುದ್ದೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾಗಿದ್ದ ಐ.ಎ.ಎಸ್. ಅಧಿಕಾರಿ  ಟಿ.ಭೂಪಾಲನ್ ಅವರನ್ನು ಪ್ರಭಾರ ಆಗಿ ನೇಮಿಸಿದ್ದು,  ಅವರನ್ನು ಈ ಹುದ್ದೆಯಿಂದ ಸರ್ಕಾರವು ಹಠಾತ್ತನೆ ಬಿಡುಗಡೆಗೊಳಿಸಿದ ನಂತರ ಇಲ್ಲಿಗೆ ಯಾರನ್ನೂ ಖಾಯಂ ಆಗಿ ನೇಮಕ ಮಾಡಿಲ್ಲ. ಹೀಗಾಗಿ ಈ ಹುದ್ದೆ ಅಂದಿನಿಂದಲೂ ಖಾಲಿ ಉಳಿದಿದೆ.
      ಈ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ (ಜೆ.ಎಂ.ಡಿ.) ಹುದ್ದೆಗೆ ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳಾಗಿದ್ದ ಯುವ ಕೆ.ಎ.ಎಸ್.ಅಧಿಕಾರಿ (ಕಿರಿಯ ಶ್ರೇಣಿ) ವಿ.ಅಜಯ್ ಅವರನ್ನು ಪ್ರಭಾರ ಆಗಿ ನೇಮಿಸಲಾಗಿತ್ತು. ಭೂಪಾಲನ್ ಅವರು ವರ್ಗಾವಣೆ ಆದ ಬಳಿಕ ಅಜಯ್ ಅವರನ್ನೇ ಪ್ರಭಾರ ಎಂ.ಡಿ. ಆಗಿಯೂ ನಿಯುಕ್ತಿಗೊಳಿಸಲಾಗಿತ್ತು. ಆದರೆ ಡಿ.9 ರಂದು ರಾಜ್ಯ ಸರ್ಕಾರ ದಿಢೀರನೆ ಪ್ರಭಾರ ಜೆ.ಎಂ.ಡಿ. ಹುದ್ದೆಯಿಂದ ಅವರನ್ನು ವಿಮುಕ್ತಿಗೊಳಿಸಿ ಆದೇಶ ಹೊರಡಿಸಿದ್ದು, ಪ್ರಸ್ತುತ ಜೆ.ಎಂ.ಡಿ. ಹುದ್ದೆಯೂ ಖಾಲಿ ಆಗಿದೆ.
      ಕಂಪನಿಯಲ್ಲಿ ಮುಖ್ಯಇಂಜಿನಿಯರ್ (ಸಿ.ಇ.) ಹುದ್ದೆ ಇದೆ. ಈವರೆಗೆ ಈ ಹುದ್ದೆಯಲ್ಲಿದ್ದ ಶಾಂತರಾಜಣ್ಣ ಅವರು ಸಹ ಇದೀಗ ವರ್ಗಾವಣೆಗೊಂಡಿದ್ದು, ಮಹತ್ವದ ತಾಂತ್ರಿಕ ಹುದ್ದೆಯೂ ಈಗ ಖಾಲಿಯಾದಂತಾಗಿದೆ.
ಪ್ರಭಾರ ನೇಮಕ
      ಹೀಗೆ ಪ್ರಮುಖ ಹುದ್ದೆಗಳೆಲ್ಲ ಖಾಲಿ..ಖಾಲಿ ಆಗಿರುವ ಬೆನ್ನಲ್ಲೇ, ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿ.ಯು.ಡಿ.ಸಿ.)ದ ಯೋಜನಾ ನಿರ್ದೇಶಕ (ಪಿ.ಡಿ.) ಬಿ.ಟಿ.ರಂಗಸ್ವಾಮಿ ಅವರಿಗೆ ಸ್ಮಾರ್ಟ್‍ಸಿಟಿ ಕಂಪನಿಯ ಎಂ.ಡಿ. ಹುದ್ದೆಯ ಪ್ರಭಾರವನ್ನು ವಹಿಸಲಾಗಿದೆ. ಈ ಮೊದಲು ರಂಗಸ್ವಾಮಿ ಅವರು ಸ್ಮಾರ್ಟ್‍ಸಿಟಿ ಎಂ.ಡಿ. ಆಗಿ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. 
ಶೀಘ್ರವೇ ಮತ್ತೆ ಭೂಪಾಲನ್?
    ಇವೆಲ್ಲ ಬೆಳವಣಿಗೆಗಳ ನಡುವೆ, ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಆಗಿರುವ ಐ.ಎ.ಎಸ್. ಅಧಿಕಾರಿ ಟಿ.ಭೂಪಾಲನ್ ಅವರು ಪುನಃ ತುಮಕೂರು ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಮರಳುವರೆಂಬ ಸುದ್ದಿ ಜೀವ ಪಡೆದುಕೊಂಡಿದೆ. “ಗೋಕಾಕ್ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಭೂಪಾಲನ್‍ರವರು, ಅತಿ ಶೀಘ್ರದಲ್ಲೇ ಪಾಲಿಕೆಗೆ ಬರುವುದು ಖಚಿತ” ಎಂದು ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ (ಬಿಜೆಪಿ) ಅವರು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.
   “ತುಮಕೂರು ಜನತೆಗೆ ಮತ್ತು ನನಗೆ ತುಂಬ ಪ್ರೀತಿಪಾತ್ರರಾದ ಅಧಿಕಾರಿ ಸೋಮವಾರ ಮತ್ತೆ ಆಗಮನ’’ ಎಂದು ಮಲ್ಲಿಕಾರ್ಜುನಯ್ಯ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪಾಲಿಕೆಯ ಅಧಿಕಾರಿ ವಲಯದಲ್ಲೂ ಭೂಪಾಲನ್ ಸುದ್ದಿ ವ್ಯಾಪಕವಾಗಿ ಚರ್ಚೆಗೊಳ್ಳುತ್ತಿದೆ. ಅವರೇ ಬರಬೇಕೆಂದು ಪಾಲಿಕೆಯಲ್ಲಿ ಅನೇಕ ಅಧಿಕಾರಿ-ನೌಕರರು ಕಾತರದಲ್ಲಿದ್ದಾರೆ.
     ಇತ್ತ ಸ್ಮಾರ್ಟ್‍ಸಿಟಿ ಕಂಪನಿಯಲ್ಲಿರುವ ಕೆಲವು ದಕ್ಷ ಅಧಿಕಾರಿಗಳು ಸಹ, “ಭೂಪಾಲನ್ ಅವರೇ ಸ್ಮಾರ್ಟ್‍ಸಿಟಿ ಕಂಪನಿಗೆ ಮತ್ತೆ ಎಂ.ಡಿ. ಆದಲ್ಲಿ ಮಾತ್ರ ಸ್ಮಾರ್ಟ್‍ಸಿಟಿ ಕಂಪನಿಯ ಕಚೇರಿ ಕೆಲಸಗಳು ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಿಯಂತ್ರಣಕ್ಕೆ ಬರುತ್ತವೆ ಹಾಗೂ ಸಮರ್ಪಕವಾಗಿ ನಡೆಯುತ್ತವೆ” ಎಂದು ಅಭಿಪ್ರಾಯಪಡುತ್ತಿದ್ದಾರೆನ್ನಲಾಗಿದೆ. 
ಸಾರ್ವಜನಿಕ ಚರ್ಚೆ
     ಸ್ಮಾರ್ಟ್‍ಸಿಟಿ ಕಂಪನಿಯ ಪ್ರಮುಖ ಹುದ್ದೆಗಳೆಲ್ಲವೂ ಈ ರೀತಿ ಖಾಲಿ-ಖಾಲಿ ಆಗಿರುವ ವಿಚಾರ ಈಗ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಆಗತೊಡಗಿದ್ದು, ಸಾರ್ವಜನಿಕರ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿವೆ. ಭೂಪಾಲನ್ ಅವರು ಮತ್ತೆ ಬರಬೇಕೆಂಬುದೇ ಜನಾಪೇಕ್ಷೆಯಂತೆ ಕಾಣುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link