ಹುಳಿಯಾರು:
ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಿಸಿಯೂಟದ ಅನ್ನದ ಗಂಜಿಯನ್ನು ಚರಂಡಿಗೆ ಚೆಲ್ಲುತ್ತಿದ್ದು ಇದರಿಂದ ಬರುತ್ತಿರುವ ದುರ್ನಾತದಿಂದ ದಾರಿಹೋಕರಿಗೆ ತೀವ್ರ ತೊಂದರೆಯಾಗಿದೆ ಎಂದು ಇಲ್ಲಿನ ನಿವಾಸಿ ರಾಮದೇವ್ ಅವರು ಆರೋಪಿಸಿದ್ದಾರೆ.
ಇಲ್ಲಿನ ಸರ್ಕಾರಿ ಶಾಲೆಗೆ ಮುನ್ನೂರಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು ನಿತ್ಯ ಇಷ್ಟು ಮಂದಿಗೆ ಬಿಸಿಯೂಟ ಮಾಡುವಾಗ ಅನ್ನದ ಗಂಜಿ ನೀರು, ಪಾತ್ರೆ ತೊಳೆದಾಗ ಬರುವ ಕೊಳಚೆ ನೀರು, ಅಲ್ಲದೆ ಉಳಿದ ಅನ್ನ, ಸಾಂಬಾರ್ ಸಹ ರಾಜ್ಕುಮಾರ್ ರಸ್ತೆಯ ತೆರೆದ ಚರಂಡಿಗೆ ಚೆಲ್ಲುತ್ತಾರೆ.
ಈ ಚರಂಡಿಯಲ್ಲಿ ಬಿಸಿಯೂಟದ ತ್ಯಾಜ್ಯ ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ದುರ್ನಾತ ಬೀರುತ್ತದೆ. ಅಲ್ಲದೆ ಹಂದಿ, ನಾಯಿ, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಪರಿಣಾಮ ಶಾಲಾ ಮಕ್ಕಳು, ಈ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು, ಹಾಗೂ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಕರಿಗೆ, ಶಾಲಾಭಿವೃದ್ಧಿ ಸಮಿತಿಗೆ ಹಾಗೂ ಪಪಂ ಅಧಿಕಾರಿಗಳಿಗೆ ಹೇಳಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಅರಿತು ಬಿಸಿಯೂಟದ ತ್ಯಾಜ್ಯವನ್ನು ಬೇರೆಡೆ ವಿಲೆ ಮಾಡುವಂತೆ ಸೂಚಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ನೆರವಾಗುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
