ಚಿಕ್ಕನಾಯಕನಹಳ್ಳಿ :
ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಪರಿಹರಿಸುತ್ತೇನೆ, ಉಳಿದಂತೆ ಪಹಣಿಗಳನ್ನು ಪಡೆದು ತಾಲ್ಲೂಕಿನಲ್ಲಿ ಸಾಲ ಪಡೆಯದಂತಹ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಶ್ರಮವಹಿಸಿ ಸಿಂಗದಹಳ್ಳಿರಾಜ್ಕುಮಾರ್ ಸಾಲ ಕೊಡಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಾಣಿಜ್ಯ ಮಳಿಗೆಗಳು ಹಾಗೂ ಗೋದಾಮು ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು, ತಾಲ್ಲೂಕಿನಲ್ಲಿ ಬಾಕಿ ಇದ್ದಂತಹ 24ಸಾವಿರ ಬಗರ್ಹುಕುಂ ಅರ್ಜಿಗಳನ್ನು 4ಸಾವಿರಕ್ಕೆ ಇಳಿಸಿ, ರೈತರು ತಾಲ್ಲೂಕು ಕಛೇರಿಯನ್ನು ಅಲೆಸುವುದನ್ನು ತಪ್ಪಿಸಲಾಗಿದೆ, ಉಳಿದವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕಂದಾಯ ಅದಾಲತ್, ಪಹಣಿ ಅದಾಲತ್, ಪೌತಿ ಆಂದೋಲನದಂತೆ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಂದಾಯ ಇಲಾಖೆಗೆ ಸೇರಿದ ಶೇ.80ರಷ್ಟು ಸಮಸ್ಯೆಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ನಾವು ಹೋರಾಟ ಮಾಡಿದ್ದಂತಹ ಹಲವು ಕಾರ್ಯಕ್ರಮಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
2014ನೇ ಇಸವಿವರೆಗೆ ಇರುವ ಬಗರ್ಹುಕುಂನ ಅರ್ಜಿದಾರರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರಲ್ಲದೆ, ಬಗರಹುಕುಂನಲ್ಲಿ ಹೊಸ ಕಮಿಟಿ ರಚಿಸಲಾಗುವುದು ಎಂದರು, ಈಗಾಗಲೇ ಪ್ರಧಾನಮಂತ್ರಿಗಳ ಯೋಜನೆಯ ರೈತರ ಖಾತೆಗೆ ಬರುವ 6ಸಾವಿರ ಹಣದ ಯೋಜನೆಯನ್ನು ತಾಲ್ಲೂಕಿನ 32ಸಾವಿರ ರೈತರು ಈ ಯೋಜನೆಗೆ ಆಯ್ಕೆಯಾಗಿದ್ದಾರೆ ಎಂದರು.
ಬ್ಯಾಂಕ್ಗಳು ಗ್ರಾಮೀಣ ಭಾಗದ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದಲೇ ಸಹಕಾರ ಬ್ಯಾಂಕ್ಗಳು ಗ್ರಾಮ ಮಟ್ಟದಲ್ಲಿರುವುದು, ಜನರು ಸಾಲ ಪಡೆಯುವುದನ್ನೇ ಗುರಿಯಾಗಿಸಿಕೊಳ್ಳಬೇಡಿ, ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು, ಜೀವನ ನಡೆಸಿಕೊಂಡು ಹೋಗುವಂತಹ ಸ್ಥಿತಿ ಬರಬೇಕು, ತಾಲ್ಲೂಕಿನಲ್ಲಿ ಹೆಚ್ಚಿನ ಜನ ಸಾಲ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದ ಅವರು ತಾಲ್ಲೂಕಿನಲ್ಲಿ ಕೆ.ಇ.ಬಿ ವ್ಯವಸ್ಥೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವತ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೆಶಕ ಸಿಂಗದಹಳ್ಳಿರಾಜ್ಕುಮಾರ್ ಮಾತನಾಡಿ, ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರ ಆದೇಶದಂತೆ ತಾಲ್ಲೂಕಿನ ರೈತರೆಲ್ಲರಿಗೂ ಸಾಲ ನೀಡಲಾಗಿದೆ, ಮುಂದೆಯೂ ಬಗರ್ಹುಕುಂನಲ್ಲಿ ಸಚಿವರು ರೈತರನ್ನು ಆಯ್ಕೆ ಮಾಡಿ ಅವರಿಗೂ ಪಹಣಿ ನೀಡಿದ ತಕ್ಷಣ ಇನ್ನಷ್ಟು ರೈತರನ್ನು ಆಯ್ಕೆ ಮಾಡಿ ಸಾಲ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ನಿರ್ದೆಶಕ ಹಳೆಮನೆಶಿವನಂಜಪ್ಪ, ಟ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎನ್.ಎನ್.ಶ್ರೀಧರ್, ಕುಪ್ಪೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎ.ಎಸ್.ಶಿವಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ಕುಪ್ಪೂರು ಪ್ರಾ.ಕೃ.ಪ.ಸಂಘಧ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.