ಚಿತ್ರದುರ್ಗ:
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಭೂಮಿ ಗುರುತಿಸಿ, ಮಂಜೂರು ಮಾಡಿದ ಬಳಿಕ ಅರ್ಹ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ತ್ವರಿತವಾಗಿ ನೀಡಲು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ನಗರ ಹಾಗೂ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶಶಿಧರ್ ಅವರು ಪ್ರಾರಂಭದಲ್ಲಿ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ಗ್ರಾಮೀನ ಪ್ರದೇಶಗಳಲ್ಲಿನ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ಅನುಗುಣವಾಗಿ ನಿವೇಶನಕ್ಕಾಗಿ ಅಗತ್ಯವಿರುವ ಭೂಮಿಯ ಅವಶ್ಯಕತೆ ಕುರಿತು ಈಗಾಗಲೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 2055 ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ.
ಈ ಮೊದಲು 106 ಗ್ರಾಮಗಳಲ್ಲಿನ ನಿವೇಶನ ರಹಿತರಿಗಾಗಿ 447 ಎಕರೆ ಭೂಮಿ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 43 ಗ್ರಾಮಗಳಲ್ಲಿನ 217.37 ಎಕರೆ ಭೂಮಿ ಒದಗಿಸಲಾಗಿದೆ. ಇನ್ನೂ 63 ಗ್ರಾಮಗಳಿಗಾಗಿ 229 ಎಕರೆ ಭೂಮಿ ಬಾಕಿ ಇದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಕಳೆದ ನಾಲ್ಕೈದು ಸಭೆಗಳಿಂದಲೂ ಇದೇ ವರದಿಯನ್ನು ನೀಡುತ್ತಿದ್ದೀರಿ. ಬಾಕಿ ಇರುವ ಗ್ರಾಮಗಳು ಯಾವುವು, ಭೂಮಿ ನೀಡಲಾಗಿರುವ ಗ್ರಾಮಗಳು ಯಾವುವು, ಹಕ್ಕುಪತ್ರ ನೀಡಿಕೆ ಕುರಿತಂತೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಪ್ರತಿ ಸಭೆಗಳಿಗೂ ಇದೇ ರೀತಿ ಉತ್ತರ ನೀಡುತ್ತಿದ್ದೀರಿ. ಈ ರೀತಿ ಆದರೆ ಭೂಮಿ ನೀಡುವುದು ಯಾವಾಗ, ಜನರಿಗೆ ಹಕ್ಕುಪತ್ರ ದೊರೆಯುವುದು ಯಾವಾಗ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಜಿಲ್ಲಾಡಳಿತದಿಂದ ಜಮೀನು ನೀಡಲಾಗಿದ್ದರೂ, ಭೂಮಿ ವಶಕ್ಕೆ ಪಡೆದು, ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಗುಡಿಸಲು ವಾಸಿಗಳಾಗಿರುವ ಜನರು ಇನ್ನೂ ಗುಡಿಸಲುಗಳಲ್ಲೇ ವಾಸಿಸಬೇಕೆ? ಎಂದು ಕೇಳಿದರು ಜನರು ಹಕ್ಕುಪತ್ರ ಕೊಡಿ ಎಂದು ಹಲವೆಡೆಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪದೇ ಪದೇ ಬರುತ್ತಾರೆ. ಅವರಿಗೆ ಏನೆಂದು ಉತ್ತರ ಹೇಳಬೇಕು. ತಾ.ಪಂ. ಇಒ ಅವರ ಕೈಯಲ್ಲಿ ಆಗುವುದಿಲ್ಲ ಎಂದು ತಿಳಿಸಿದರೆ, ತಹಸಿಲ್ದಾರರಿಂದಲೇ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಭಾಮ ಅವರು ಮಾತನಾಡಿ, ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಹಾಗೂ ಅವಶ್ಯವಾಗಿರುವ ಭೂಮಿಯ ವಿವರ ಪರಿಷ್ಕರಣೆಯಾಗಿದ್ದು, ಇದೀಗ ಜಿಲ್ಲೆಯ 1040 ಗ್ರಾಮಗಳಲ್ಲಿ ಸುಮಾರು 22 ಸಾವಿರ ನಿವೇಶನ ರಹಿತರಿಗಾಗಿ 1742 ಎಕರೆ ಭೂಮಿ ಬೇಕಾಗಿದೆ. ಈಗಾಗಲೆ ಪರಿಷ್ಕøತ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಅಲ್ಲದೆ ಸಂಬಂಧಪಟ್ಟ ತಹಸಿಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ವಿವರ ಸಲ್ಲಿಸಲಾಗಿದೆ ಎಂದರು
ಕಳೆದ ನಾಲ್ಕು ವರ್ಷಗಳ ಹಿಂದೆ 68 ಎಕರೆ ಹೆಚ್ಚುವರಿ ಭೂಮಿಯನ್ನು ಪಡೆಯಲಾಗಿತ್ತು. ಇದರಲ್ಲಿ ಚಳ್ಳಕೆರೆಯಲ್ಲಿ 54 ಎಕರೆ ಭೂಮಿ ಒತ್ತುವರಿ ಕಂಡುಬಂದಿದ್ದು, ಇದನ್ನು ತೆರವುಗೊಳಿಸಿ ಜಿ.ಪಂ. ವಶಕ್ಕೆ ನೀಡಲು ತಿಳಿಸಲಾಗಿತ್ತು. ಆದರೆ ಇನ್ನೂ ತೆರವು ಕಾರ್ಯ ನಡೆದಿಲ್ಲ. ಈ ಹಿಂದಿನ ವರದಿಯನ್ವಯ ಭೂಮಿ ಮಂಜೂರಾತಿಗಾಗಿ ಬಾಕಿ ಇರುವ ಗ್ರಾಮಗಳು ಹಾಗೂ ಈಗಾಗಲೆ ಹಕ್ಕುಪತ್ರ ನೀಡಲಾಗಿರುವ ಗ್ರಾಮಗಳ ವಿವರವನ್ನು ಮೂರ್ನಾಲ್ಕು ದಿನಗಳೊಳಗಾಗಿ ನೀಡಲಾಗುವುದು ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆ :
ಪ್ರಧಾನಮಂತ್ರಿ ಆವಾಸ್ (ನಗರ) ಯೋಜನೆಯಡಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 26958 ಜನರಿಗೆ ಜಿ+2 ಮನೆಗಳನ್ನು ನಿರ್ಮಿಸಿ ಒದಗಿಸಲು ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಯೋಜನೆಯಲ್ಲಿ ಫಲಾನುಭವಿಗಳು ಮೊದಲಿಗೆ ಅರ್ಜಿಯೊಂದಿಗೆ 10 ಸಾವಿರ ರೂ. ಗಳನ್ನು ತಮ್ಮದೇ ಹೆಸರಿಗೆ ಫಿಕ್ಸೆಡ್ ಡಿಪಾಸಿಟ್ ಮಾಡಿ ದಾಖಲೆ ಸಲ್ಲಿಸಬೇಕು. ಚಳ್ಳಕೆರೆಯಲ್ಲಿ 3120 ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧವಿದ್ದು, ಫಲಾನುಭವಿ ವಂತಿಕೆ ಭರಿಸಲು ತಿಳಿಸಲಾಗಿದೆ.
ಚಿತ್ರದುರ್ಗದಲ್ಲಿ 7252 ಫಲಾನುಭವಿಗಳನ್ನು ಗುರುತಿಸಲಾಗಿದೆ. ಹಿರಿಯೂರಿನಲ್ಲಿ 4150 ಅರ್ಜಿ ಸ್ವೀಕೃತಗೊಂಡಿದ್ದು, ಈವರೆಗೆ 2351 ಫಲಾನುಭವಿಗಳನ್ನು ಗುರುತಿಸಿದೆ. ಜಿಲ್ಲೆಯ ಉಳಿದೆಡೆ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ 126 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ವಿವರ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಯೋಜನೆಯಡಿ ಫಲಾನುಭವಿಗಳಿಗೆ ವಂತಿಕೆ ಭರಿಸುವ ಕುರಿತು ಮನವೊಲಿಸಿ, ಅರಿವು ಮೂಡಿಸುವ ಕಾರ್ಯ ಆಗಬೇಕು. ಸಾಧ್ಯವಾದಲ್ಲಿ ಫಲಾನುಭವಿಗಳೊಂದಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ, ಪ.ಪಂ. ಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








