ದಾವಣಗೆರೆ:
ರಾಮಾಯಣದ ಕರ್ತೃ, ವಿಶ್ವ ಗುರು ಮಹರ್ಷಿ ವಾಲ್ಮೀಕಿ ಒಬ್ಬ ಅಸ್ಪೃಶ್ಯ, ವಾಲ್ಮೀಕಿ ಹುಟ್ಟಿದ ಜಾತಿಯನ್ನು ಕೆಳ ಜಾತಿ ಎಂಬ ಪದ ಬಳಸಿ, ಓರ್ವ ಐತಿಹಾಸಿಕ ಮಹಾ ಪುರುಷ, ದಲಿತ, ಶೋಷಿತ, ಪರಿಶಿಷ್ಟ ಸಮುದಾಯಗಳಲ್ಲಿ ಒಂದಾದ ನಾಯಕ ಸಮಾಜವನ್ನು ನಿಂದಿಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇಲ್ಲಿನ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣದಡಿ ದೂರು ದಾಖಲಾಗಿದೆ.
ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ವೇಳೆ ಶುಕ್ರವಾರ ವಿಜಯಪುರ ಜಿಲ್ಲೆಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಮಹರ್ಷಿ ವಾಲ್ಮೀಕಿಯನ್ನು ಒಬ್ಬ ಅಸ್ಪೃಶ್ಯ ಎಂಬುದಾಗಿ, ವಿಶ್ವ ಗುರು ವಾಲ್ಮೀಕಿ ಹುಟ್ಟಿದ ಜಾತಿಯನ್ನು ಕೆಳ ಜಾತಿ ಎಂಬ ಪದವನ್ನು ಬಳಕೆ ಮಾಡಿ, ವಾಲ್ಮೀಕಿ ಹಾಗೂ ಇಡೀ ನಾಯಕ ಸಮಾಜವನ್ನು ಯತ್ನಾಳ್ ನಿಂದಿಸಿದ್ದಾರೆ ಎಂದು ನಾಯಕ ಸಮಾಜದ ಯುವ ಮುಖಂಡ ರಾಘು ದೊಡ್ಮನಿ ದೂರಿನಲ್ಲಿ ತಿಳಿಸಿದ್ದಾರೆ.
ಯತ್ನಾಳ್ ಮಾತುಗಳು ಕೇವಲ ಒಂದು ಜಾತಿ, ಸಮುದಾಯವನ್ನಷ್ಟೇ ಅವಮಾನಿಸಿಲ್ಲ. ಸರ್ವ ಜಾತಿ-ಜನಾಂಗ-ಧರ್ಮೀಯರನ್ನ ಅಪಮಾನಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಮೇಲೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಕಾಯ್ದೆ 1980ರಡಿ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಯಕ ಸಮಾಜದ ಯುವ ಮುಖಂಡ ಗಣೇಶ ಹುಲ್ಮನಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ, ಜಿ.ಜಿ.ರಾಕೇಶ, ಎನ್ಎಸ್ಯುಐ ಮುಖಂಡ ಮಹಮ್ಮದ್ ಮುಜಾಹಿದ್ ಪಾಷಾ, ಭೀಮ್ ಕೇಸರಿಯ ಉಮೇಶ್, ಆರ್.ದೇವೇಂದ್ರಪ್ಪ, ಟಿ.ವಿ.ಗಿರಿಧರ್, ಎಚ್.ಕರಿಯಪ್ಪ, ಕೆ.ಬಾಲು ಇತರರು ಬಡಾವಣೆ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಯತ್ನಾಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
