ತುರುವೇಕೆರೆ
ಸರ್ಕಾರದ ಆದೇಶದಂತೆ ತಾಲ್ಲೂಕಿನಲ್ಲಿ ಕರೊನಾ ಸಂಕಷ್ಟಕ್ಕೆ ಸಿಲುಕಿದ್ದ ಹಾವೇರಿ, ಬೀದರ್, ವಿಜಯಪುರ ಮತ್ತು ಗದಗ ಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.
ತಾಲ್ಲೂಕಿನಲ್ಲಿ ರಸ್ತೆ ಕೆಲಸ ನಿರ್ವಹಿಸುತ್ತಿದ್ದ ಹಾವೇರಿ-ಗದಗ ಜಿಲ್ಲೆಯವರೆನ್ನಲಾದ 19 ಕಾರ್ಮಿಕರು, ಬೀದರ್ ಜಿಲ್ಲೆಯ 29 ಕಾರ್ಮಿಕರು ಹಾಗೂ ವಿಜಯಪುರ ಜಿಲ್ಲೆಯ 32 ಕಾರ್ಮಿಕರು ತಾಲ್ಲೂಕಿನ ಮಾಚೇನಹಳ್ಳಿ ಶ್ರೀ ಬಾಪೂಜಿ ಕೇಂದ್ರೀಯ ಪ್ರ್ರೌಢಶಾಲೆ, ಮಾಯಸಂದ್ರ ಹಾಗೂ ಪಟ್ಟಣದ ವಿವಿಧೆಡೆ ವಾಸ್ತವ್ಯ ಹೂಡಿದ್ದರು. ತಾಲ್ಲೂಕು ಆಡಳಿತವು ಕಾರ್ಮಿಕರ ವಾಸ್ತವ್ಯಕ್ಕೆ ಅಗತ್ಯ ವಸ್ತುಗಳನ್ನು ಕಲ್ಪಿಸಿಕೊಟ್ಟಿತ್ತು.
ಆದರೂ ಅವರು ಪ್ರತಿದಿನ ನಮ್ಮನ್ನು ನಮ್ಮೂರಿಗೆ ಕಳುಹಿಸಿಕೊಡಿ. ಊರಲ್ಲಿ ವಯಸ್ಸಾದವರಿದ್ದು ಅವರ ಯೋಗಕ್ಷೇಮ ನೋಡಿಕೊಳ್ಳುವವರು ಯಾರೂ ಇಲ್ಲ. ನಮ್ಮಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆ ಮಾಡುವ ಸಮಯ ಎಂದೆಲ್ಲಾ ಲಾಕ್ ಡೌನ್ ಆದಾಗಿನಿಂದಲೂ ಒಂದೇ ಸಮನೆ ಗೋಗರೆಯುತ್ತಿದ್ದರು.
ಅದೃಷ್ಟವೆಂಬಂತೆ ಸ್ವಗ್ರಾಮಗಳಿಗೆ ತೆರಳಲು ರಾಜ್ಯದ ಆದೇಶ ಬಂದ ಹಿನ್ನೆಲೆಯಲ್ಲಿ, ಶನಿವಾರ ಬೆಳಗ್ಗೆ ತಹಸೀಲ್ದಾರ್ ನಯೀಂ ಉನ್ನೀಸಾ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಟ್ಟರು. ಕಾರ್ಮಿಕರು ತಮ್ಮೂರಿಗೆ ಹೊರಡುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಮಗೆ ಅನ್ನ, ಬಟ್ಟೆ ನೀಡಿ ಯೋಗಕ್ಷೇಮ ವಿಚಾರಿಸಿದ ತಾಲ್ಲೂಕು ಆಡಳಿತ, ಗ್ರಾಮದ ಜನತೆ ಹಾಗೂ ದಾನಿಗಳಿಗೆ ಮನದಲ್ಲೇ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಲೋಕೇಶ್ ಹಾಗೂ ಆರೋಗ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ