ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ? ಅಭಿಯಾನ ಶುರುಮಾಡಿದ ಚಾಲಕರು

ಬೆಂಗಳೂರು

    ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್ ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೇ ನಿಷ್ಕಾಳಜಿ ತೋರಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಧೋರಣೆ ವಿರುದ್ಧ ಸಮಗ್ರ ಚಾಲಕರ ಒಕ್ಕೂಟದಿಂದ ಸಾಮಾಜಿಕ ಜಾಣಗಳಲ್ಲಿ ಬೃಹತ್ ಪ್ರತಿಭಟನೆ ಪ್ರಾರಂಭವಾಗಿದೆ.

    ಕೆಲಸವಿಲ್ಲದೇ ಮನೆಯಲ್ಲಿಯೇ ಇರುವ ಚಾಲಕರು ಖಾಲಿ ತಪ್ಪಲೆ, ತಟ್ಟೆಗಳ ಮುಂದೆ ಕುಳಿತು ಕಪ್ಪುಪಟ್ಟಿ ಧರಿಸಿ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ವಿನೂತನ ಚಳವಳಿ ಆರಂಭಿಸಿದ್ದಾರೆ.

    ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇಂದಿನಿಂದ ? ಸೆಲ್ಪಿವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ ? ಅಭಿಯಾನ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಚಾಲಕ ಸಂಘಟನೆಗಳು, ಸಮಸ್ತ ಚಾಲಕರು ಈ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

     ಮನೆಗಳಿಂದಲೇ ಚಾಲಕರು ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೆಲ್ಪಿ ತೆಗೆದು ಕೇಂದ್ರ ಮತ್ತು ರಾಜ್ಯ ಸರ್ಕಾರಳಿಗೆ ರವಾನಿಸಬೇಕು. ಫೇಸ್ ಬುಕ್, ವ್ಯಾಟ್ಸ್ ಅಪ್, ಇನ್ಸ್ಟ್ರಾಗ್ರಾಂ, ಟ್ವಿಟರ್, ಟೆಲಿಗ್ರಾಂ ಸೇರಿದಂತೆ ಎಲ್ಲಾ ಬಗೆಯ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಬೇಕು. ಪ್ರತಿಯೊಬ್ಬ ಚಾಲಕರು ತಮ್ಮ ಫೋಸ್ಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟ ಸದಸ್ಯರು, ಶಾಸಕರಿಗೆ ತಲುಪುವಂತೆ ಮಾಡಬೆಕು. ಇವರೆಲ್ಲರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಗೆ ಟ್ಯಾಗ್ ಮಾಡಿ ಚಳವಳಿಯನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಬೇಕು ಎಂದು ಕೋರಿದ್ದಾರೆ.

    ಒಂದೂವರೆ ತಿಂಗಳಿಂದ ಚಾಲಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಬ್ಬ ಚಾಲಕರ ಖಾತೆಗೆ ಹತ್ತು ಸಾವಿರ ರೂ ಹಣ ಹಾಕುವಂತೆ ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ. ದೆಹಲಿಯ ಆಮ್ ಆದ್ಮಿ ಸರ್ಕಾರ, ಮಹಾರಾಷ್ಟ್ರದ ಶಿವಸೇನೆ ? ಕಾಂಗ್ರೆಸ್ ? ಎನ್.ಸಿ.ಪಿ ಸರ್ಕಾರ ಹಾಗೂ ಆಂಧ್ರ ಪ್ರದೇಶದ ವೈ.ಎಸ್.ಆರ್ ಕಾಂಗ್ರೆಸ್ ಸರ್ಕಾರ ಚಾಲಕರ ಖಾತೆಗಳಿಗೆ ಹತ್ತು ಸಾವಿರ ರೂ ಹಣ ಜಮಾ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಚಾಲಕರಿಗೆ ಆರ್ಥಿಕ ನೆರವು ನೀಡುವಂತೆ ಮಾಡಿದ ಮನವಿಗೆ ಕವಡೆಕಾಸಿನ ಕಿಮ್ಮತ್ತು ದೊರೆತಿಲ್ಲ ಎಂದು ಗಂಡಸಿ ಸದಾನಂದ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಸಾರಿಗೆ ಇಲಾಖೆ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ. ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಅವರು ನಾಪತ್ತೆಯಾಗಿದ್ದಾರೆ. ಕನಿಷ್ಠ ಪಕ್ಷ ನಮ್ಮ ನೋವುಗಳಿಗೆ ಪರಿಹಾರ ನೀಡುವುದಿರಲಿ, ನಮ್ಮ ಸಮಸ್ಯೆಗಳನ್ನು ಕೇಳುವ ಸಾಜನ್ಯವನ್ನು ಅವರು ತೋರುತ್ತಿಲ್ಲ. ಸಾರಿಗೆ ಸಚಿವರು ಸಂಕಷ್ಟ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಪರಮ ನಿರ್ಲಕ್ಷ್ಯ ತೋರಿದ್ದಾರೆ ಎಂದು ಟೀಕಿಸಿದ್ದಾರೆ.

     ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ಧಾನ್ಯ ದೊರೆತಿರುವುದು ಬಿಟ್ಟರೆ ಉಳಿದ ಚಾಲಕರಿಗೆ ಸರ್ಕಾರದಿಂದ ಯಾವುದೇ ಅನುಕೂಲವಾಗಿಲ್ಲ. ನಮ್ಮ ನೋವನ್ನು ಆಳುವ ವರ್ಗ ಕೇಳಿಸಿಕೊಂಡರೂ ಸ್ಪಂದಿಸದೇ ನಿರ್ಲಕ್ಷಿಸಿದೆ ಎಂದಿದ್ದಾರೆ.

      ದೇಶದಲ್ಲಿ ಸುಮಾರು 218,288.000ಕ್ಕೂ ಹೆಚ್ಚು ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ವಾಣಿಜ್ಯ ಬಳಕೆ ವಾಹನಗಳ ಚಾಲಕರಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಒಂದು ರೂಪಾಯಿ ದುಡಿಯಲು ನಮಗೆ ಸಾಧ್ಯವಾಗಿಲ್ಲ. ಮಕ್ಕಳ ವಿದ್ಯಾಭ್ಯಾಸ, ಸಾಲ ಪಾವತಿ, ಕುಟುಂಬ ನಿರ್ವಹಣೆಗೆ ಮುಂದೇನು ಎನ್ನುವ ಆತಂಕದಲ್ಲಿದ್ದೇವೆ. ಈಗಾಗಲೇ ಚಾಲಕರ ಸಂಘಟನೆಯ 120ಕ್ಕೂ ಹೆಚ್ಚು ಶಾಖೆಗಳಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನಮ್ಮ ಸಮಸ್ಯೆಗಳನ್ನು ವಿವರಿಸಿದ್ದೇವೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಮಗೆ ನ್ಯಾಯ ದೊರೆತಿಲ್ಲ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link