ಚಳ್ಳಕೆರೆ
ರಾಜ್ಯ ಸರ್ಕಾರ ರೈತ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆಯಲ್ಲದೆ, ರೈತರು ನೆಮ್ಮದಿಯಿಂದ ಬದುಕಲು ಸಹ ಬಿಡುತ್ತಿಲ್ಲ. ಅನಗತ್ಯವಾಗಿ ರೈತ ಮೇಲೆ ರೈತರ ವಿರುದ್ದ ಕಾನೂನುಗಳನ್ನು ಜಾರಿ ಮಾಡುವ ಮೂಲಕ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ)ರಾಜ್ಯ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ರೈತ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಕೊರೋನಾ ವೈರಾಣು ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಈ ಮದ್ಯೆ ಚೀನಾ ದೇಶದ ಸೈನಿಕರು ತಮ್ಮ ದೇಶದ ಸೈನಿಕರನ್ನು ಬಲಿತೆಗೆದುಕೊಂಡಿರುತ್ತಾರೆ.
ಇಂತಹ ಸ್ಥಿತಿಯಲ್ಲಿ ಎರಡೂ ಸರ್ಕಾರಗಳು ರೈತರ ಹಿತವನ್ನು ಕಾಯದೆ ವಿದೇಶಿ ಕಂಪನಿಗಳನ್ನು ಒಲಿಸಿಕೊಳ್ಳುವ ಉದ್ದೇಶದಿಂದ ರೈತರಿಗೆ ಮಾರಕವಾಗಿರುವ ಭೂಸ್ವಾಧೀನ ಕಾಯ್ದೆ ಮತ್ತು ವಿದ್ಯುತ್ ಮಂಡಳಿಯನ್ನು ಖಾಸಗೀಕರಣಗೊಳಿಸಲು ಹೊರಟಿದ್ದಾರೆ. ಆದರೆ, ರೈತರು ಸರ್ಕಾರದ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರದೆ ರೈತರ ಉಳಿವಿಗಾಗಿ ಹೋರಾಟ ನಡೆಸುತ್ತದೆ. ಸರ್ಕಾರದ ವಿರುದ್ದ ಹೋರಾಟಗಳ ಬಗ್ಗೆ ರಾಜ್ಯ ಕಾರ್ಯಕಾರಿ ಸಮಿತಿ ಶೀಘ್ರದಲ್ಲೇ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದರು.
ರಾಜ್ಯ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಕಳೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೂ ಸಹ ರೈತ ಸಮುದಾಯಕ್ಕೆ ವಿರುದ್ದವಾದ ತೀರ್ಮಾನವನ್ನು ಕೈಗೊಂಡಿತ್ತು. ರಾಜ್ಯದ ರೈತರ ಪರ ನನ್ನ ಧ್ವನಿ ಎಂದು ಹೇಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಸ್ವಾಧೀನ ಕಾಯ್ದೆ ಜಾರಿ ಮೂಲಕ ರೈತರನ್ನು ಕತ್ತಲ ಬಾವಿಗೆ ತಳ್ಳುತ್ತಿದ್ದಾರೆ. ಸರ್ಕಾರ ಕೇವಲ ಐಎಎಸ್ ಅಧಿಕಾರಿಗಳ ಮಾತನ್ನು ಕೇಳದೆ ರಾಜ್ಯದ ಎಲ್ಲಾ ರೈತ ಸಂಘಟನೆಗಳ ಪ್ರಮುಖರನ್ನು ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು.
ಕೊರೋನಾ ಹಿನ್ನೆಲೆಯಲ್ಲಿ ರೈತರೂ ಸೇರಿದಂತೆ ಎಲ್ಲರ ಬದುಕು ಅತಂತ್ರವಾಗಿದೆ. ಸರ್ಕಾರ ಕೆಲವೊಂದು ವರದಿಗಳಿಗೆ ಮಾತ್ರ ಪರಿಹಾರ ಘೋಷಿಸಿದೆ. ರೈತ ಸಮುದಾಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿತ್ತು ಎಂದರು.
ಪ್ರಾರಂಭದಲ್ಲಿ ಸ್ವಾಗತಿಸಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ದೇಶದ ಗಡಿ ರಕ್ಷಣೆ ಸಂದರ್ಭದಲ್ಲಿ ಮೃತಪಟ್ಟ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಲು ಮನವಿ ಮಾಡಿದ್ದು, ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಸಭೆಯಲ್ಲಿ ರೈತ ಸಂಘದ ಹಿರಿಯ ಮುಖಂಡರಾದ ರಾಜಣ್ಣ, ಯರ್ರಿಸ್ವಾಮಿ, ಡಾ.ಪಾಪಣ್ಣನವರ್, ಶಶಿಕುಮಾರ್, ರಾಘವೇಂದ್ರಚಾರ್, ಮಹಲಿಂಗಯ್ಯ, ನಾಗರಾಜ, ತಿಪ್ಪೇಸ್ವಾಮಿ, ನಿವೃತ್ತ ಉಪಾಧ್ಯಾಯ ಕರಿಯಣ್ಣ, ಹನುಮಂತರಾಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ