ಹುಳಿಯಾರು
ಅತಿವೃಷ್ಟಿ, ಅನಾವೃಷ್ಟಿಯಿಂದ ಮಾತ್ರವಲ್ಲದೆ ಈಗ ಕೊರೊನಾದಿಂದ ಕೂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೂ ಅವರು ಬೆಳೆ ಬೆಳೆಯುವುದು ಬಿಟ್ಟಿಲ್ಲ. ಅಂತಹ ಅನ್ನದಾತರನ್ನು ರಕ್ಷಿಸುವ ಹೊಣೆ ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹೇಳಿದರು.
ಹುಳಿಯಾರಿನ ರಾಮಗೋಪಾಲ್ ಸರ್ಕಲ್ನ ರೈತ ಸಂಘದ ಕಚೇರಿಯಲ್ಲಿ 40 ನೆ “ರೈತ ಹುತಾತ್ಮ ದಿನಾಚರಣೆ’’ ಯಲ್ಲಿ ಅವರು ಮಾತನಾಡಿದರು.ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಬ್ಯಾಂಕ್ ಸೇರಿದಂತೆ ಇನ್ನಿತರ ಸಾರ್ವಜನಿಕ ಕ್ಷೇತ್ರಗಳನ್ನು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಸಗೀಕರಣ ಮಾಡಲು ಹೊರಟಿವೆ. ಇದರಿಂದ ಕೃಷಿಗೆ ಭಾರಿ ಹೊಡೆತ ಬೀಳಲಿದ್ದು, ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕಲಿದೆ. ಹಾಗಾಗಿ ರೈತರು ಸರ್ಕಾರವನ್ನು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಇಲ್ಲದಿದ್ದರೆ ರೈತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಆರ್.ಭೋಜರಾಜ್ ಮಾತನಾಡಿ, ದೇಶದೆಲ್ಲೆಡೆ ಕೊರೊನಾ ವೈರಸ್ನಿಂದ ತತ್ತರಿಸುತ್ತಿದ್ದು, ಅದರಲ್ಲೂ ರೈತರು ಕೊರೊನಾ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಪರದಾಡುವಂತಾಗಿದೆ. ಗ್ರಾಹಕ ಸಿಕ್ಕರೂ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತ ಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸದಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ರೈತ ಸಂಘದ ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ರೈತ ಸಂಘಟನೆಯ ಅಧ್ಯಕ್ಷ ಬೀರಪ್ಪ, ನೀರಾ ಈರಣ್ಣ, ಗಂಗಣ್ಣ, ರಮೇಶ್, ಹೊನ್ನಪ್ಪ ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
