ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಸೋಂಕು, ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಭಾನುವಾರ ಹೊಸದಾಗಿ 109 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3420ಕ್ಕೆ ಏರಿಕೆಯಾಗಿದೆ.
ಮತ್ತೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ವಯೋವೃದ್ಧರು ಸೋಂಕಿನಿಂದ ಸಾವಿಗೀಡಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ, ನಡುಪ್ರಾಯದ ವಯಸ್ಸಿನವರೂ ಕೋವಿಡ್ನಿಂದ ಮರಣ ಹೊಂದುತ್ತಿರುವುದು ಆತಂಕಕಾರಿ. ತುಮಕೂರಿನ ಸಂತೆಪೇಟೆ ಬಡಾವಣೆಯ 29 ವರ್ಷದ ಮಹಿಳೆ ಹಾಗೂ ಪಾವಗಡ ತಾಲ್ಲೂಕು ಶೈಲಾಪುರದ 35 ವರ್ಷದ ಗಂಡಸು ಸೋಂಕು ತಗುಲಿ ಅಸುನೀಗಿದ್ದಾರೆ. ಮೃತ ತುಮಕೂರು ಮಹಿಳೆ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟೀವ್ ವರದಿ ಬಂದಿತ್ತು. ಇವರು ಈ ತಿಂಗಳ 15ರಂದು ಮೃತರಾದರು.
ಶೈಲಾಪುರದ ವ್ಯಕ್ತಿ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇವರಿಗೂ ಕೊರೊನಾ ಸೋಂಕು ಖಚಿತವಾಗಿತ್ತು, ಇದೇ 15ರಂದು ಅಸುನೀಗಿದರು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 103ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 69 ಜನ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಭಾನುವಾರ ವರದಿಯಾದ 103 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 38, ತುರುವೇಕೆರೆ ತಾಲ್ಲೂಕಿನಲ್ಲಿ 22, ತಿಪಟೂರು ತಾಲ್ಲೂಕಿನ 13, ಕೊರಟಗೆರೆ ತಾಲ್ಲೂಕಿನ 10, ಶಿರಾ ತಾಲ್ಲೂಕಿನ 8, ಪಾವಗಡ ತಾಲ್ಲೂಕಿನಲ್ಲಿ 7, ಗುಬ್ಬಿ ತಾಲ್ಲೂಕಿನಲ್ಲಿ 6, ಕುಣಿಗಲ್ ತಾಲ್ಲೂಕಿನಲ್ಲಿ 3, ಮಧುಗಿರಿ ತಾಲ್ಲೂಕಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 65 ಪುರುಷರು, 44 ಮಹಿಳೆಯರು, ಇಬ್ಬರು ಮಕ್ಕಳು, 60 ವರ್ಷ ಮೇಲ್ಪಟ್ಟ 22 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 3420 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 1296, ಕುಣಿಗಲ್ ತಾ. 356, ಪಾವಗಡ ತಾ. 271, ಶಿರಾ ತಾ. 254, ತಿಪಟೂರು ತಾ. 249, ಮಧುಗಿರಿ ತಾ. 215, ಕೊರಟಗೆರೆ ತಾ. 213 ಗುಬ್ಬಿ ತಾ. 210, ತುರುವೇಕೆರೆ ತಾ. 194, ಚಿಕ್ಕನಾಯಕನಹಳ್ಳಿ ತಾ. 162 ಪ್ರಕರಣ ವರದಿಯಾಗಿವೆ.
ಈವರೆಗೂ ಕೊರೊನಾ ಸೋಂಕು ತಗುಲಿದ 3420 ಜನರಲ್ಲಿ 103 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ತುಮಕೂರು ತಾಲ್ಲೂಕಿನ 69 ಜನ ಸೇರಿದ್ದಾರೆ. ಉಳಿದಂತೆ, ಕುಣಿಗಲ್ ತಾಲ್ಲೂಕಿನ 6, ಶಿರಾ ತಾಲ್ಲೂಕಿನ 5, ತಿಪಟೂರು ಹಾಗೂ ಪಾವಗಡ ತಾಲ್ಲೂಕಿನ ತಲಾ 4, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಮಧುಗಿರಿ ತಾಲ್ಲೂಕಿನ ತಲಾ ಮೂವರು ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ. ಕೊರಟಗೆರೆ, ತುರುವೇಕೆರೆ ಹಾಗೂ ತಾಲ್ಲೂಕಿನ ತಲಾ ಇಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾನುವಾರ ಗುಣಮುಖರಾಗಿ ಆಸ್ಪತ್ರೆಯಿಂದ 165 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 2359 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1017 ಸೋಂಕು ಸಕ್ರಿಯ ಪ್ರಕರಣಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







