ಉತ್ತರ ಪ್ರದೇಶ ಸರ್ಕಾರ ವಜಾಕ್ಕಾಗಿ ಪ್ರತಿಭಟನೆ

ಚಿತ್ರದುರ್ಗ:

     ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಹತ್ತೊಂಬತ್ತು ವರ್ಷದ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿ ನಂತರ ಇಡೀ ಪ್ರಕರಣವನ್ನು ಮುಚ್ಚಿಹಾಕುವ ದುರುದ್ದೇಶದಿಂದ ಯುವತಿಯನ್ನು ಸುಟ್ಟುಹಾಕಿರುವುದರ ವಿರುದ್ದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಸಿ.ಐ.ಟಿ.ಯು.ಕಾರ್ಯಕರ್ತರು ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ ಸಿ.ಬಿ.ಐ.ತನಿಗೆ ಬದಲಿಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪಿತ ರಾಮನಾಥ್‍ಕೋವಿಂದ್‍ಗೆ ಮನವಿ ಸಲ್ಲಿಸಿದರು.

    ಸೆ.14 ರಂದು ಠಾಕೂರ್ ಜನಾಂಗಕ್ಕೆ ಸೇರಿದ ಸಂದೀಪ್, ರವಿ, ಲವಕುಶ್, ರಾಮು ಇವರುಗಳು ಮನಿಷಾಳ ಮೇಲೆ ಅತ್ಯಾಚಾರವೆಸಗಿ ಅಷ್ಟಕ್ಕೆ ಸುಮ್ಮನಾಗದೆ ನಾಲಿಗೆ ಕತ್ತರಿಸಿ ಬೆನ್ನುಮೂಳೆ ಕೈಕಾಲುಗಳನ್ನು ಮುರಿದು ಕತ್ತು ತಿರುವಿ ರಾಕ್ಷಸಿ ಕೃತ್ಯವೆಸಗಿದ್ದಾರೆ. ಯುವತಿಯ ಪೋಷಕರ ದೂರನ್ನು ಸ್ವೀಕರಿಸದೆ ಅಲ್ಲಿನ ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಕಾಮುಕರು ಎಷ್ಟು ಪ್ರಭಾವಿಗಳಿರಬಹುದೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದಕ್ಕಾಗಿ ಅತ್ಯಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಯುವತಿಯ ಆತ್ಮಕ್ಕೆ ಶಾಂತಿ ದೊರಕಿದಂತಾಗುತ್ತದೆ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

     ಹದಿನಾರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಸೆ.29 ರಂದು ಮೃತಳಾದ ಮನಿಷಾ ವಾಲ್ಮೀಕಿ ಮುಖವನ್ನು ನೋಡದಂತೆ ಅವರ ಪೋಷಕರನ್ನು ಮನೆಯಲ್ಲಿ ಕೂಡಿಹಾಕಿ ಕೊನೆಗೆ ದೇಹವನ್ನು ಸುಟ್ಟುಹಾಕಿರುವ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವುದು ನ್ಯಾಯಾಂಗ ತನಿಖೆಯಿಂದ ಹೊರಬರಬೇಕಾಗಿದೆ. ಉತ್ತರಪ್ರದೇಶ ಸರ್ಕಾರ ಹಾಗೂ ಅಲ್ಲಿನ ಪೊಲೀಸರ ದಬ್ಬಾಳಿಕೆಗೆ ತಕ್ಕ ಶಾಸ್ತಿ ಮಾಡಿದಾಗ ಮಾತ್ರ ಯುವತಿ ಮುನಿಷಾ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

     ಸಿ.ಐ.ಟಿ.ಯು.ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಉಪಾಧ್ಯಕ್ಷ ಎಂ.ಡಿ.ಜಿಕ್ರಿಯಾವುಲ್ಲಾ, ಸಹ ಕಾರ್ಯದರ್ಶಿ ಬಿ.ಸಿ.ಭಾಸ್ಕರಚಾರಿ, ಖಜಾಂಚಿ ಷೇಕ್‍ಖಲೀಂವುಲ್ಲಾ, ಮುಮ್ತಾಜ್ ಬಡಾವಣೆ, ಸಣ್ಣಮ್ಮ, ಅಬ್ದುಲ್ಲಾ, ಹನುಮಂತ, ಸಣ್ಣಈರಪ್ಪ, ಮಲ್ಲಿಕಾರ್ಜುನ್, ದಾದಾಪೀರ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap