ವಿಜಯವಾಡ:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಆಂಧ್ರಪ್ರದೇಶ, ತೆಲಂಗಾಣ, ವಿಜಯನಗರಂ, ನೆಲ್ಲೂರು, ಚಿತ್ತೂರು, ಅನಂತಪುರಂ, ಗುಂಟೂರು, ವಿಶಾಖಪಟ್ಟಣಂ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಭಾರೀ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿ ಸಾವನ್ನಪ್ಪಿರುವ ಘಟನೆಯ ನಡೆದಿದೆ.
ವಿಶಾಖಪಟ್ಟಣದ ನರ್ಶಿಪಟ್ನಂ-ತೂನಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆಂದು ವರದಿಗಳು ತಿಳಿಸಿವೆ. ಕಾಕಿನಾಡ ಕರಾವಳಿ ಪ್ರದೇಶದಲ್ಲಿ 17 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕಾಲಕಳೆಯುತ್ತಿದ್ದಂತೆಯ ಇದರ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಾಕಿನಾಡ ಬಳಿಯ ಯಾನಂನಲ್ಲಿ 25 ಸೆಂ.ಮೀ ಮಳೆಯಾಗಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಅಮಲಪುರಂನಲ್ಲಿ 19 ಸೆಂ.ಮೀ, ಪಶ್ಚಿಮ ಗೋದಾವರಿಯ ತನುಕುನಲ್ಲಿ 18 ಸೆಂ.ಮೀ, ವಿಶಾಖಪಟ್ಟಣದ ಭೀಮುನಿಪಟ್ನಂ, ಕೈಕಲೂರು, ಕೃಷ್ಣ ಜಿಲ್ಲೆಯ ತಿರುವೂರು, ಪಲಾಸ ಮತ್ತು ಇಚಾಪುರಂ ಶ್ರೀಕಾಕುಲಂ ಜಿಲ್ಲೆಯಲ್ಲಿ 15 ಸೆಂ.ಮೀ ಮಳೆಯಾಗಿದೆ.
ಶ್ರೀಕಕುಳಂ, ವಿಶಾಖಪಟ್ಟಣಂ, ವಿಜಯನಗರಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಕೃಷ್ಣ ಜಿಲ್ಲೆ, ಮತ್ತು ಕೃಷ್ಣ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದರೆ, ಕರ್ನೂಲ್, ಚಿತ್ತೂರು, ಅನಂತಪುರ, ಮತ್ತು ಕಡಪಾ ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಿದೆ.