ಗುಬ್ಬಿ :
ಪಟ್ಟಣದ ಅಭಿವೃದ್ದಿಗೆ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರದಲ್ಲಿ 15 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸ್ತೆಯ ಡಾಂಬರೀಕರಣ ರಸ್ತೆಯ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಮಾತನಾಡಿದ ಅವರು, ಪಟ್ಟಣಕ್ಕೆ ಕಳೆದರಡು ವರ್ಷಗಳಿಂದ ವಿಶೇಷ ಅನುದಾನ ಮಂಜೂರಾಗಿಲ್ಲ. ಈ ಜತೆಗೆ ಕೋವಿಡ್ ವೈರಸ್ ಹೊಡೆತ ನೀಡಿದ ಹಿನ್ನಲೆ ಒಂದು ವರ್ಷ ಕೆಲಸಗಳು ನಿರೀಕ್ಷೆ ಮಟ್ಟದಲ್ಲಿ ನಡೆದಿಲ್ಲ. ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ಜನಪ್ರತಿನಿಧಿಗಳು ಪಡೆದುಕೊಳ್ಳುವಲ್ಲಿ ಸಾಕಷ್ಟು ತಾಂತ್ರಿಕ ತಡೆಗಳು ಎದುರಾಗಿತ್ತು. ಮುಂದಿನ ದಿನದಲ್ಲಿ ವಿಶೇಷ ಅನುದಾನವನ್ನು ತರುವಲ್ಲಿ ಯಶಸ್ವಿ ಕಾಣುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೇಮಾವತಿ ಕಚೇರಿ ಹಾಗೂ ನ್ಯಾಯಾಧೀಶರ ವಸತಿಗೃಹಗಳಿರುವ ರಸ್ತೆಗೆ 14 ನೇ ಹಣಕಾಸಿನ 16 ಲಕ್ಷ ರೂಗಳನ್ನು ವಿನಿಯೋಗಿಸಿ ಡಾಂಬರೀಕರಣ ಕೆಲಸ ಮಾಡಲಾಗಿ ನನ್ನ ಅವಧಿಯ ಮೊದಲ ಕಾಮಗಾರಿ ನಡೆದಿದೆ. ಇದರ ಗುಣಮಟ್ಟ ಕಾಪಾಡಿಕೊಳ್ಳಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಪಟ್ಟಣದಲ್ಲಿ ಹಿಂದಿನಿಂದಲೂ ಇರುವ ಕಸ ವಿಲೇವಾರಿ ದೂರುಗಳಿಗೆ ಅಂತಿಮ ಕಾಣಿಸಲು ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ನಿಗದಿತ ಸಮಯಕ್ಕೆ ಕಸದ ವಾಹನ ಎಲ್ಲಾ ಬಡಾವಣೆಗೆ ತೆರಳುತ್ತಿದೆ. ಕಸವನ್ನು ಒಣ ಮತ್ತು ಹಸಿ ಎಂದು ವಿಂಗಡಿಸಿ ತ್ಯಾಜ್ಯ ಸಂಗ್ರಹ ಘಟಕ್ಕೆ ಸಾಗಿಸಲಾಗಿದೆ. ಅಲ್ಲಿ ಕಸ ಸಂಸ್ಕರಣೆ ಮಾಡಿ ಗೊಬ್ಬರ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸಲಾಗುವುದು ಎಂದರು.
ಪಟ್ಟಣದ ನಾಗರೀಕರ ಹಿತ ಕಾಯುವ ನಿಟ್ಟಿನಲ್ಲಿ ಉದ್ಯಾನವನಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಅರಣ್ಯ ಇಲಾಖೆ ಜತೆ ಮಾತನಾಡಿ ಪಾರ್ಕ್ಗಳಿಗೆ ಪಟ್ಟಣದ ಪ್ರಮುಖ ರಸ್ತೆಗಳ ಬದಿ ಸಸಿ ನೆಟ್ಟು ಪೋಷಿಸುವ ಕೆಲಸ ಮಾಡಿಸಲಾಗುವುದು. ಚರಂಡಿ ಸ್ವಚ್ಚತೆ, ಫುಟ್ಪಾತ್ ಅಂಗಡಿಗಳು, ಸಂತೆ ಮೈದಾನ ಇವುಗಳತ್ತ ಗಮನಹರಿಸುವ ಜತೆಗೆ ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಬಾಡಿಗೆ ಹಣ ಸಂಗ್ರಹವನ್ನು ತುರ್ತು ನಡೆಸಲಾಗುವುದು ಎಂದ ಅವರು ಕುಡಿಯುವ ನೀರಿನ ಸರಬರಾಜುವಿಗೆ ನಿಗಾವಹಿಸಲಾಗಿದೆ. ಹೇರೂರು ಕೆರೆಯ ಮೂಲಕ ಹರಿಯುವ ಹೇಮೆಯ ನೀರನ್ನು ಶುದ್ದೀಕರಿಸಲು ಜಲ ಸಂಗ್ರಹಗಾರದಲ್ಲಿ ವ್ಯವಸ್ಥಿತವಾಗಿ ಆಲಂ ಮತ್ತು ಕ್ಲೋರಿನ್ ಬಳಕೆಯನ್ನು ಮಾಡಲಾಗುವುದು. ಈ ಜತೆಗೆ ಬಿಜೆಪಿ ಸರ್ಕಾರದಿಂದ ಪಟ್ಟಣದ ಅಭಿವೃದ್ದಿಗೆ ಮತ್ತಷ್ಟು ವಿಶೇಷ ಅನುದಾನ ತರಲು ಸಂಸದರು, ಜಿಲ್ಲಾ ಸಚಿವರೊಟ್ಟಿಗೆ ಚರ್ಚಿಸಿದ್ದೇನೆ. ಶೀಘ್ರದಲ್ಲಿ ಅನುದಾನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಶಶಿಕುಮಾರ್, ಮಹಮದ್ ಸಾದಿಕ್, ಇಂಜಿನಿಯರ್ ಸತ್ಯನಾರಾಯಣ್, ಗುತ್ತಿಗೆದಾರ ವಿಶ್ವಣ್ಣ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
