ಬೆಂಗಳೂರು:
ಸಿಟಿ ಮಾರ್ಕೆಟ್ ಪೊಲೀಸರು ಮಾರು ವೇಷದ ಕಾರ್ಯಚರಣೆ ನಡೆಸಿ ಐದು ರಾಜ್ಯಗಳ ನಡುವೆ ಹಬ್ಬಿರುವ ಅಕ್ರಮ ಪಿಸ್ತೂಲು ಮಾರಾಟ ಜಾಲ ಬಯಲಿಗೆ ಎಳೆದಿದ್ದಾರೆ.
ರಾಜಸ್ಥಾನ ಹಾಗೂ ಉತ್ತರ ಪ್ರದೇಶದಿಂದ ನಾಡ ಪಿಸ್ತೂಲ್ಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪಶ್ಚಿಮ ವಿಭಾಗದ ಪೊಲೀಸರು ಭೇದಿಸಿದ್ದು, ಜಾಲದಲ್ಲಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 13 ನಾಡ ಪಿಸ್ತೂಲ್ ಹಾಗೂ 52 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ಹೋಟೆಲ್ ಕೋನಾರ್ಕ್ ನಲ್ಲಿ ಯುವಕನೊಬ್ಬ ಅಕ್ರಮವಾಗಿ ಪಿಸ್ತೂಲು ಡೀಲಿಂಗ್ ಮಾಡುತ್ತಿದ್ದಾನೆ ಎಂಬ ಸುಳಿವು ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ‘ಅಕ್ರಮವಾಗಿ ಪಿಸ್ತೂಲ್ ಸಾಗಣೆ ಮಾಡಿಕೊಂಡು ಬಂದಿದ್ದ ಆರೋಪಿ ಕದೀರ್ ಖಾನ್, ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಜಿ.ಪಿ. ಸ್ಟ್ರೀಟ್ನಲ್ಲಿರುವ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ. ಆತನ ಬಳಿ ಪಿಸ್ತೂಲ್ ಹಾಗೂ ಗುಂಡುಗಳು ಇದ್ದು, ಯಾರಿಗೂ ಮಾರಾಟ ಮಾಡಲು ಬಂದಿರುವುದಾಗಿ ಠಾಣೆಗೆ ಮಾಹಿತಿ ಬಂದಿತ್ತು’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
ಮಾಹಿತಿ ಆಧರಿಸಿ ‘ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದ ತಂಡ, ಪಿಸ್ತೂಲು ಖರೀದಿಸುವ ಸೋಗಿನಲ್ಲಿ ಮಾರುವೇಶದಲ್ಲಿ ವಸತಿಗೃಹಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಜಾಲದ ಕೃತ್ಯಗಳು ಬಯಲಾದವು. ಆತ ನೀಡಿದ್ದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಸೆರೆಹಿಡಿಯಲಾಯಿತು’ ಎಂದೂ ತಿಳಿಸಿದರು.
ಆರ್.ಕೆ. ಹೆಗ್ಡೆ ನಗರದ ನಿವಾಸಿ ಬಳಿ ಪಿಸ್ತೂಲು ಖರೀದಿಸುವ ಸೋಗಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎರಡು ಅಕ್ರಮ ಪಿಸ್ತೂಲು ಹೊಂದಿರುವ ಸಂಗತಿ ಬೆಳಕಿಗೆ ಬಂದಿತ್ತು. ಆತನಿಂದ ಎರಡು ಪಿಸ್ತೂಲು ಹಾಗೂ ಎಂಟು ಜೀವಂತ ಗುಂಡು ವಶಪಡಿಸಿಕೊಂಡಿದ್ದರು.
ಮಾರ್ಕೆಟ್ ಠಾಣೆ ಪೊಲೀಸರ ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಶ್ಲಾಘಿಸಿದ್ದು, ಈ ಜಾಲ ಪತ್ತೆ ಮಾಡಿರುವ ಪಶ್ಚಿಮ ವಿಭಾಗದ ಪೊಲೀಸರ ತಂಡಕ್ಕೆ ₹ 75 ಸಾವಿರ ಬಹುಮಾನ ಘೋಷಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
