ತುಮಕೂರು : ಹೆಚ್ಚಾದ ಕೊರೊನಾ ; ಅಂಗಡಿ – ಮುಂಗಟ್ಟುಗಳು ಬಂದ್!!!

ತುಮಕೂರು :

      ಕೋವಿಡ್‍ನಿಂದಾಗಿ ಮೊದಲೇ ವ್ಯಾಪಾರ ಡಲ್ ಎನ್ನುತ್ತಿದ್ದ ಜಿಲ್ಲೆಯ ವ್ಯಾಪಾರಿಗಳಿಗೆ ಗುರುವಾರ ಬೆಳಿಗ್ಗೆ ಬಿಗ್ ಶಾಕ್ ಎದುರಾಯಿತು. ಬೆಳಿಗ್ಗೆ 9-10ಗಂಟೆ ಸುಮಾರಿಗೆ ಅಂಗಡಿ ಮಳಿಗೆಗಳ ಬಳಿ ದಾಂಗುಡಿಯಿಟ್ಟ ಅಧಿಕಾರಿಗಳು ಪೊಲೀಸರು, ಸರಕಾರದ ಪರಿಷ್ಕøತ ಮಾರ್ಗಸೂಚಿಯಂತೆ ಈಗಿನಿಂದಲೇ ಅಗತ್ಯ ಸೇವೆ ಹೊರತಾದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮಚ್ಚಬೇಕೆಂದು ಹೇಳಿ ಬಂದ್ ಮಾಡಿಸತೊಡಗಿದರು.

      ಅಂಗಡಿ –ಮುಂಗಟ್ಟು ತೆರೆದು ಇನ್ನೇನು ಗ್ರಾಹಕರ ಬರುವಿಕೆಗೆ ಎದುರುನೋಡುತ್ತಿದ್ದ ವಿವಿಧ ಅಂಗಡಿ ಮಳಿಗೆಯವರ ಪೊಲೀಸರ ಮಾತು ಕೇಳಿ ಕಕ್ಕಾಬಿಕ್ಕಿಯಾದರು. ಇದೇನು ಲಾಕ್‍ಡೌನ್ ಹೇರಿಕೆ ಮಾಡಲಾಗಿದೆಯಾ ಎಂದು ಗೊಂದಲಕ್ಕೊಳಗಾಗಿ ಸರಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಒಬ್ಬೊಬ್ಬರಾಗಿ ಬೀಗ ಹಾಕಲು ಶುರು ಮಾಡಿದರು. ಕೆಲಸಕ್ಕೆ ಬಂದ ಕಾರ್ಮಿಕರು, ಖರೀದಿಗೆಂದು ಬಂದ ಗ್ರಾಹಕರು ಏನಾಗುತ್ತಿದೆ ಎಂಬುದನ್ನು ತಿಳಿಯದೆ ಗಾಬರಿಗೊಂಡಿದ್ದರು.

      ಅಧಿಕಾರಿಗಳಿಂದ ಪರಿಶೀಲನೆ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಡಿಸಿ ಚನ್ನಬಸಪ್ಪ, ಎಸ್ಪಿಡಾ.ಕೆ.ವಂಸಿಕೃಷ್ಣ, ಆಯುಕ್ತೆ ರೇಣುಕಾ ಮತ್ತಿತರ ಅಧಿಕಾರಿಗಳು ಪ್ರಮುಖ ವಾಣಿಜ್ಯ ರಸ್ತೆಗಳಾದ ಎಂ.ಜಿ.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಅಶೋಕ ರಸ್ತೆ, ಸೋಮೇಶ್ವರಪುರಂ, ಬಿ.ಎಚ್.ರಸ್ತೆ ಭಾಗಗಳಲ್ಲಿ ಸಂಚರಿಸಿ ಬಂದ್ ಮಾಡಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿ, ಕೋವಿಡ್ ನಿಯಂತ್ರಣದ ಸಲುವಾಗಿ ಸರಕಾರದ ಆದೇಶದಂತೆ ಬಂದ್ ಕ್ರಮ ಎಂದು ಸಮಾಜಾಯಿಷಿ ನೀಡುತ್ತಿದ್ದರು.ನಾವೆಲ್ಲ ವೀಕೆಂಡ್ ಕರ್ಪ್ಯೂಗೆ ಸಿದ್ದರೆದ್ದವು. ಆದರೆ ಅದಕ್ಕೆ ಮುಂಚಿತವಾಗಿಯೇ ಏನನ್ನೂ ತಿಳಿಸದೆ ಗುರುವಾರದಿಂದಲೇ ಬಂದ್ ಮಾಡಿಸಿದ ಕ್ರಮ ಸರಿಯಲ.್ಲ ಎಂದು ವರ್ತಕರು ಅಧಿಕಾರಿಗಳೇದುರೇ ವಿರೋಧಿಸಿದರು.

ವರ್ತಕರಿಂದ ತೀವ್ರ ಅಸಮಾಧಾನ:

      ಈ ವೇಳೆ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ವರ್ತಕರು ಮೊದಲಿಗೆ ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕರ್ಪ್ಯೂ ಎಂದಿದ್ದರು. ಅದಕ್ಕೆ ಅಂಗಡಿ ಬಂದ್ ಮಾಡಿ ಸಹಕರಿಸಲು ಸಿದ್ದರಾಗಿದ್ದೆವು. ಈಗ ಏಕಾಏಕಿ ಬಂದು ಅಂಗಡಿ ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಅಗತ್ಯ ಸೇವೆ ಹೆಸರಲ್ಲಿ ಕೆಲವು ಮಳಿಗೆಗಳಿಗೆ ಮಾತ್ರ ವಿನಾಯಿತಿ ಕೊಟ್ಟಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಇಂತಹ ಕ್ರಮ ಸರಿಯಲ್ಲ. ಮೇ.4ರವರೆಗೂ ಈ ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಅಲ್ಲಿಯವರೆಗೂ ಅಂಗಡಿ ಬಂದ್ ಮಾಡಿಯೂ ಮಾಲೀಕರಿಗೆ ಬಾಡಿಗೆ ಕೊಡಬೇಕು. ಎಲ್ಲಿಂದ ತರಬೇಕು? ಎಂ.ಜಿ.ರಸ್ತೆಯಂತಹ ರಸ್ತೆಯಲ್ಲಿ ದಿನಕ್ಕೆ 1000-1500 ಬಾಡಿಗೆ ದರ ಇದೆ. ಪ್ರತೀ ಅಂಗಡಿಯಲ್ಲೂ ಕನಿಷ್ಠ 5-6 ಮಂದಿ ಕೆಲಸ ಮಾಡುತ್ತಿದ್ದರು. ಅವರಿಗೆಲ್ಲ ಬಾಗಿಲು ಮುಚ್ಚಿದರೆ ದಿನದ ದುಡಿಮೆಯೇ ಇರುವುದಿಲ್ಲ. ಜೀವನ ಹೇಗೆ ಸಾಗಿಸಬೇಕು. ಸರಕಾರ ಏಕಾಏಕಿ ಮಾರ್ಗಸೂಚಿ ಹೊರಡಿಸಿ ಬಡವರು, ವರ್ತಕರ ಮೇಲೆ ಕೋವಿಡ್ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ಎಷ್ಟು ದಿನ ಬಂದ್ ಮಾಡವರೋ ಎಂಬ ಚಿಂತೆ?:

       ಏತನ್ಮದ್ಯೆ 10 ಗಂಟೆ ನಂತರ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಬಂದ್ ವಿಷಯ ತಿಳಿಯದೆ ಅಂಗಡಿಗಳು ಬಾಗಿಲು ಮುಚ್ಚಿರುವುದನ್ನು ಕಂಡು ಆತಂಕಕ್ಕೊಳಗಾದರು. ಮಾಲೀಕರಿಗೆ, ಸಹೋದ್ಯೋಗಿಗಳಿಗೆ ಫೋನಾಯಿಸುತ್ತಾ ವಿಚಾರ ಅರಿಯಲು ಮುಂದಾದರು. ಮುಂದೆ ಏನಾಗುವುದೋ ಏನೋ? ಇನ್ನೆಷ್ಟು ದಿನಗಳ ಕಾಲ ಅಂಗಡಿ ಬಂದ್ ಮಾಡುವರೋ? ಕೆಲಸ, ವೇತನವಿಲ್ಲದೇ ಎಷ್ಟು ದಿನ ಬದುಕಬೇಕೋ ಎಂಬ ಚಿಂತೆಯಲ್ಲೇ ಅಂಗಡಿ ಬಾಗಿಲ ಬಳಿ ನಿಂತಿದ್ದ ದೃಶ್ಯ ಮನಕಲಕುವಂತಿತ್ತು.

ಸರಕಾರದ ಧ್ವಂಧ್ವತೆಗೆ ಖಂಡನೆ:

      ಪರಿಷ್ಕøತ ಮಾರ್ಗಸೂಚಿಯಲ್ಲಿ 50 ಜನರಿಗೆ ಸೀಮಿತವಾಗಿ ಮದುವೆ ಮಾಡಲು ಅನುಮತಿ ಕೊಟ್ಟಿರುವ ಸರಕಾರ ಮದುವೆ, ಇತರೆ ಶುಭ ಕಾರ್ಯಗಳಿಗೆ ಬಟ್ಟೆ, ಚಿನ್ನಾಭರಣ ಖರೀದಿಸಬೇಕಾದ ಅಂಗಡಿ ಮಳಿಗೆಗೆ ಅನುಮತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತವಾಯಿತು. ಸರಕಾರದ ಧ್ವಂಧ್ವ, ದಿಢೀರ್ ನಿರ್ಧಾರಗಳು ಶುಭ ಸಮಾರಂಭ, ಸಭೆಗಳನ್ನೇ ಆಧರಿಸಿದ ಹಲವು ಕ್ಷೇತ್ರಗಳವರ ದುಡಿಮೆಯನ್ನೇ ಕಿತ್ತುಕೊಳ್ಳುವಂತಾಗಿದೆ ಎಂದು ಜವಳಿ ವರ್ತಕರೊಬ್ಬರು ಅಸಮಾಧಾನ ಹೊರಹಾಕಿದರು.

      ಅಂಗಡಿ –ಮುಂಗಟ್ಟುಗಳನ್ನು ಮುಚ್ಚಿಸಿದರೂ ಜನ ಸಂಚಾರವೇನೂ ತಡೆಯಲಾಗಿಲ್ಲ. ಅನಾವಶ್ಯಕವಾಗಿ ತಿರುಗಾಡುವವರು ತಿರುಗಾಡುತ್ತಲೇ ಇದ್ದಾರೆ. ವ್ಯಾಪಾರ ವಹಿವಾಟಿಗೆ ಪೂರಕವಾಗಿ ಆದಾಯ ಗಳಿಸುತ್ತಿದ್ದ ಸಾರಿಗೆ ಸಂಚಾರ, ಕೂಲಿಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು ಎಲ್ಲರಿಗೂ ದುಡಿಮೆಗೆ ಪೆಟ್ಟು ಬೀಳುತ್ತದೆ. ಕೆಲಸವಿಲ್ಲದೆ ವಯಸ್ಕರು, ಶಾಲೆಯಿಲ್ಲದೆ ಮಕ್ಕಳು, ಕೊರೊನಾ ಭಯದಿಂದ ಹಿರಿಯ ನಾಗರಿಕರು ಎಲ್ಲರೂ ಒಟ್ಟಿಗೆ ಮನೆಯಲ್ಲಿರುವುದು ಸಹ ನಾನಾ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸ ಮಾರ್ಗಸೂಚಿ ಪ್ರಚಾರವೇ ಇಲ್ಲ:

      ಸರ್ವ ಪಕ್ಷ ಸಭೆ ನಡೆಸಿದ ಬಳಿಕ ಸರಕಾರ ಮೊದಲು ಹೊರಡಿಸಿದ್ದ ಆದೇಶದಲ್ಲಿ ಏ. 21 ರಿಂದ ಮೇ 4ರವರೆಗೆ ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಹಾಗೂ ವಾರದ 3 ದಿನ ಅಂದರೆ ಶುಕ್ರವಾರದಿಂದ ಸೋಮವಾರ ಬೆಳಗಿನವರೆಗೆ ವೀಕ್ ಎಂಡ್ ಕಫ್ರ್ಯೂ ವಿಧಿಸಿತ್ತು. ಪ್ರತಿದಿನ ರಾತ್ರಿವೇಳೆ ಹಾಗೂ ವೀಕ್ ಎಂಡ್ ಅವಧಿಯಲ್ಲಿ ಮಾತ್ರವೇ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಹೇಳಿತ್ತು. ಆದರೆ ಗುರುವಾರ ಬೆಳಿಗ್ಗೆ ನೈಟ್ ಕಫ್ರ್ಯೂ ಹಾಗೂ ವೀಕ್ ಎಂಡ್ ಜೊತೆಗೆ ಏ.21 ರಾತ್ರಿಯಿಂದಲೇ ನಿರ್ಬಂಧಗಳನ್ನು ಜಾರಿಗೊಳಿಸಿರುವ ಅಂಶವನ್ನು ಸರಕಾರ ಸಾರ್ವಜನಿಕರ ಗಮನಕ್ಕೆ ತಂದಿಲ್ಲ. ಮಾಧ್ಯಮಗಳಲ್ಲೂ ಪ್ರಚುರಪಡಿಸಿಲ್ಲ. ಬುಧವಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಮೇ 4ರವರೆಗೂ ಈ ನಿರ್ಬಂಧಗಳು ರಾಜ್ಯದೆಲ್ಲೆಡೆ ಜಾರಿಯಲ್ಲಿರಲಿವೆ. ಸಾರ್ವಜನಿಕರಿಗೆ ಮಾಹಿತಿಯನ್ನೇ ತಿಳಿಸದೆ ನಿರ್ಬಂಧ ಹೇರಿರುವ ಸರಕಾರ ಕ್ರಮ ಎಲ್ಲಾ ವಲಯದಿಂದಲೂ ಟೀಕೆಗೆ ಗುರಿಯಾಗಿದೆ. ಪ್ರಜಾಸತ್ತಾತ್ಮಕ ಸರಕಾರ ಸರ್ವಾಧಿಕಾರಿ ನಡೆಯನ್ನು ಅನುಸರಿಸುತ್ತಿದೆ ಎಂಬ ಆಕ್ಷೇಪಗಳು ಕೇಳಿಬಂದಿದೆ. ಈ ನಿರ್ಬಂಧ ಉಲ್ಲಂಘಿಸದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸು ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ದಿನಕ್ಕೊಂದು ಮಾರ್ಗಸೂಚಿ, ಇದೆಂಥಾ ಆಡಳಿತ?

      ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿರುವ ಸರಕಾರ ಜನಸಾಮಾನ್ಯರು, ವರ್ತಕರ ಮೇಲೆ ಮತ್ತಷ್ಟು ಗದಾಪ್ರಹಾರ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಇಂತಹ ಅವೈಜ್ಞಾನಿಕ ನಿರ್ಧಾರಗಳನ್ನು ನೋಡಿದರೆ ಸರಕಾರ ನಿಜಕ್ಕೂ ಅಸ್ಥಿತ್ವದಲ್ಲಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಒಂದೆಡೆ ಕೋವಿಡ್ ಸೋಂಕಿತರಿಗೆ ಬೆಡ್, ಔಷಧಿ ಆಕ್ಸಿಜನ್ ಸಿಗುತ್ತಿಲ್ಲ. ಮತ್ತೊಂದೆಡೆ ಜನರಿಗೆ ಬದುಕಲು ಬಿಡುತ್ತಿಲ್ಲ. ಮಾಡುವುದಾದರೆ ಪೂರ್ಣ ಲಾಕ್‍ಡೌನ್ ಮಾಡಲಿ. ಕೆಲವರಿಗೆ ವಿನಾಯಿತಿ, ಕೆಲವರಿಗೆ ನಿರ್ಬಂಧ ಇದೆಲ್ಲ ಏನು? ದಿನಕ್ಕೊಂದು ಮಾರ್ಗಸೂಚಿ ಹೊರಡಿಸಿದರೆ ಹೇಗೆ ಕೋವಿಡ್ ಸಂದರ್ಭದಲ್ಲಿ ಸರಕಾರ ಪಾರದರ್ಶಕ ನಡೆಯನ್ನು ಅನುಸರಿಸಬೇಕೆಂಬ ಆಗ್ರಹಗಳು ಆಗ್ರಹಗಳು ಸಾರ್ವಜನಿಕರಿಂದಹೆಚ್ಚಾಗಿ ಕೇಳಿಬಂದಿದೆ.

ಯಾವುದಕ್ಕೆ ನಿರ್ಬಂಧ:

      ಸರಕಾರದ ಹೊಸ ಮಾರ್ಗಸೂಚಿಯನ್ವಯ ಶಾಲಾ ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ, ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಈಜುಕೊಳ, ಕ್ರೀಡಾ ಸಂಕೀರ್ಣ, ಅಮ್ಯೂಸ್‍ಮೆಂಟ್ ಪಾರ್ಕ್, ಸಭಾಂಗಣ, ಅಸೆಂಬ್ಲಿ ಹಾಲ್ ಸೇರು ಎಲ್ಲ ಬಗೆಯ ಧಾರ್ಮಿಕ ಸ್ಥಳ ನಿರ್ಬಂಧವಿದ್ದು, ಪೂಜಾ ಕಾರ್ಯಕ್ಕೆ ಅನುಮತಿ ಇದೆ. ಹೋಟೆಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ. ಲಾಡ್ಜ್‍ಗಳಲ್ಲಿ ಈಗಾಗಲೇ ತುಂಬಿರುವ ಅತಿಥಿಗಳಿಗೆ ಮಾತ್ರ ಅವಕಾಶ. ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿ ಹೊರತುಪಡಿಸಿ ಎಲ್ಲಾ ಆಂಗಡಿಗಳು ಬಂದ್.

ಅನುಮತಿ

       ಪ್ರಾವಿಜನ್ ಸ್ಟೋರ್ಸ್, ರೇಷನ್ ಡಿಪೋ, ಹೋಟೆಲ್ ಮತ್ತು ರೆಸ್ಟೋರೆಂಟ್ (ಪಾರ್ಸಲ್‍ಗೆ ಮಾತ್ರ), ಬಾರ್ಬರ್ ಶಾಪ್, ಸಲೂನ್ ಮತ್ತು ಬ್ಯೂಟಿ ಪಾರ್ಲರ್, ಲಾಡ್ಜ್, ಹಣ್ಣು ತರಕಾರಿ ಮತ್ತು ಹೂವಿನ ಅಂಗಡಿಗಳು ಚಿಕನ್, ಮಟನ್, ಫಿಶ್ ಅಂಗಡಿಗಳು, ಡೈರಿ, ಹಾಲಿನ ಕೇಂದ್ರಗಳು, ಬೇಕರಿ. ಪೌಲ್ಟ್ರಿ ಫೀಡ್ಸ್, ಎಲ್ಲಾ ಖಾಸಗಿ ಕಚೇರಿಗಳು, ಕಂಪನಿ, ಸಂಸ್ಥೆಗಳು, ಎಲ್ಲಾ ಸರ್ಕಾರ ಕಚೇರಿಗಳು, ಕೋರ್ಟ್ ಟಲಿಕಮ್ಯುನಿಕೇಷನ್, ಎಲ್ಲಾ ಬ್ಯಾಂಕ್ ಮತ್ತು ಎಟಿಎಂಗಳು, ಎಲ್ಲಾ ಇನ್ಯೂರೆನ್ಸ್ ಕಚೇರಿಗಳು, ಮಾಧ್ಯಮ ಸಂಸ್ಥೆಗಳು, ಕೋಲ್ಡ್ ಸ್ಟೋರೇಜ್ ಮತ್ತು ವೇರ್‍ಹೌಸ್, ಆಹಾರ ಸಂಸ್ಕರಣ, ಇಂಡಸ್ಟ್ರೀಸ್‍ಗಳು. ಬಂಕ್‍ಗಳು, ಗ್ಯಾಸ್ ಸ್ಟೇಷನ್‍ಗಳು, ಪ್ರೈವೇಟ್ ಸೆಕ್ಯೂರಿಟಿ ಆಫೀಸ್‍ಗಳು, ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಶಾಪ್‍ಗಳು, ವ್ಯವಸಾಯಕ್ಕೆ ಸಂಬಂಧಿಸಿದ ಅಂಗಡಿಗಳು, ಎಲ್ಲಾ ಇಂಡಸ್ಟ್ರೀಸ್‍ಗಳು, ನಿರ್ಮಾಣ ಕೆಲಸಗಳಿಗೆ ಅನುಮತಿ ಇರುತ್ತವೆ.

      ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಮುಕ್ತ ಅವಕಾಶವಿದ್ದು, ಯಾವುದೇ ಪೂರ್ವಾನುಮತಿ ಬೇಕಿಲ್ಲ. ಶನಿವಾರ ಮತ್ತು ಭಾನುವಾರ ದಿನಸಿ, ತರಕಾರಿ, ಹಾಲು, ಅಂಗಡಿಗಳು ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ತೆರೆದಿರುತ್ತವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link