ಬೆಂಗಳೂರು:
‘ನಾನು ಪವರ್ ಬೆಗ್ಗರ್ ಗಳ ಬಗ್ಗೆ ಮಾತನಾಡುವುದಿಲ್ಲ. ಎರಡು-ಮೂರು ಪಕ್ಷ ಸುತ್ತಿದವರನ್ನು ಯಡಿಯೂರಪ್ಪನವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಈಗ ಅನುಭವಿಸಲಿ ಬಿಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮದವರು, “ಹಿಂದೆ ಯಡಿಯೂರಪ್ಪ ವಿರುದ್ಧ ದೂರು ನೀಡಲು ಸಚಿವ ಯೋಗೇಶ್ವರ್ ದಿಲ್ಲಿಗೆ ಹೋಗಿದ್ದರು. ಈಗ ಅವರ ವಿರುದ್ಧ ದೂರು ನೀಡಲು ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದಾರೆ” ಎಂದು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.
ಹಿಂದೆ ಯಡಿಯೂರಪ್ಪನವರು ಪಕ್ಷ ಬಿಟ್ಟು, ಪಕ್ಷ ಕಟ್ಟಿ ಏನೆಲ್ಲ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಎರಡು-ಮೂರು ಪಕ್ಷ ಬದಲಿಸಿದವರನ್ನು (ಯೋಗೇಶ್ವರ್) ತಮ್ಮ ಜತೆ ಕರೆದುಕೊಂಡು ಹೋದರು. ಈಗ ಅದಕ್ಕೆ ಅನುಭವಿಸುತ್ತಿದ್ದಾರೆ, ಅನುಭವಿಸಲಿ ಬಿಡಿ. ಹಿಂದೆ ನಾವು ಕೂಡ ಇದೇ ತಪ್ಪು ಮಾಡಿದ್ದೆವು. ಅದಕ್ಕೆ ಪ್ರತಿಫಲ ಅನುಭವಿಸಿದ್ದೇವೆ. ಈಗ ಯಡಿಯೂರಪ್ಪನವರ ಸರದಿ. ಹೀಗೆ ತಪ್ಪು ಮಾಡಿದವರೆಲ್ಲ ಅನುಭವಿಸಲೇಬೇಕು ಎಂದು ಹೇಳಿದರು.
‘ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಕೋರೊನಾ ಸಮಯದಲ್ಲಿ ಜನರ ಜೀವ ಉಳಿಸೋದು ನಮ್ಮ ಕರ್ತವ್ಯ. ಇವರೆಲ್ಲಾ ಪವರ್ ಬೆಗ್ಗರ್ ಗಳು. ಇವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡುವುದು ಬೇಡ ಎಂದರು.
ಇವರು ದೆಹಲಿಗಾದರೂ ಹೋಗಲಿ, ಅಂಡಮಾನ್ ಗಾದರೂ ಹೋಗಲಿ. ಇದು ಎರಡು, ಮೂರು ಪಕ್ಷಗಳ ಸರ್ಕಾರ ಅಂತಾ ಮಾತನಾಡಲು ಅವರಿಗೆ ಶಕ್ತಿ ಕೊಟ್ಟವರು ಯಾರು? ಯಡಿಯೂರಪ್ಪನವರೇ ತಾನೇ..?! ರಾಜಕಾರಣದಲ್ಲಿ ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು.
ಈಗ ನಾವು ಬಡವರ ನೋವು, ಸಮಸ್ಯೆಗೆ ಸ್ಪಂದಿಸಿ, ಅವರ ಧ್ವನಿಯಾಗಿ ಕೆಲಸ ಮಾಡೋಣ. ಅವರ ಜೀವ ಉಳಿಸೋಣ. ಬೇರೆ ವಿಚಾರಗಳು ನಮ್ಮ ಆದ್ಯತೆಯಲ್ಲ’ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/Dk-Shivakumar.jpg)