ತುಮಕೂರು :

ಕೋವಿಡ್ ಎರಡನೇ ಅಲೆ ಕಳೆದು ಮೂರನೇ ಅಲೆ ಸಮೀಪಿಸುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಮತ್ತೆ ಯಾವಾಗ ಬೇಕಾದರೂ ಲಾಕ್ಡೌನ್ ಹೇರಬಹುದೆಂಬ ಆತಂಕ ಸಹ ಮನೆ ಮಾಡಿದೆ. ಇಂತಹ ಸ್ಥಿತಿಯಲ್ಲಿ ಕೋವಿಡ್ 2ನೇ ಅಲೆಯಲ್ಲಿ ರಾಜ್ಯ ಸರಕಾರ ಘೋಷಿಸಿದ ಅಸಂಘಟಿತ ಕಾರ್ಮಿಕರ ಪರಿಹಾರ ಪ್ಯಾಕೇಜ್ ರಾಜ್ಯದಲ್ಲಿ ಲಕ್ಷಾಂತರ ಮಂದಿಗೆ ಇನ್ನೂ ಬರಬೇಕಿರುವುದು ಆಡಳಿತ ವ್ಯವಸ್ಥೆಯ ವಿಳಂಬ ದೋರಣೆ, ನಿರ್ಲಕ್ಷ್ಯಕ್ಕೆ ಸಾಕ್ಷಿ ಎನಿಸಿದೆ.
ತುಮಕೂರು ಜಿಲ್ಲೆಯೊಂದರಲ್ಲೇ 54,899 ಮಂದಿಗೆ ಕೋವಿಡ್ ಪರಿಹಾರ ಪಾಕೇಜ್ ಹಣ ಬಾಕಿ ಬರಬೇಕಿದ್ದು, ಲಾಕ್ಡೌನ್ ತೆರವಾಗಿ ಮುಖ್ಯಮಂತ್ರಿಗಳು ಬದಲಾಗಿ ಹೊಸ ಮಂತ್ರಿಮಂಡಲ ಬಂದರೂ ಪರಿಹಾರದ ಹಣ ಖಾತೆಗಳಿಗೆ ಬಾರದಿರುವುದು ಪರಿಹಾರ ಹಣಕ್ಕಾಗಿ ಅರ್ಜಿಹಾಕಿದವರು ಸೇವಾಸಿಂಧು ಸೆಂಟರ್, ಕಾರ್ಮಿಕ ಇಲಾಖೆಯತ್ತ ಎಡತಾಕುವಂತೆ ಮಾಡಿದೆ.
ಕೋವಿಡ್ 2ನೇ ಅಲೆ ತೀವ್ರವಾದ ಏಪ್ರಿಲ್ 3ನೇ ವಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು 1200 ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದ್ದರು. ಅದರಲ್ಲಿ ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರಿಗೂ 2000, 3000ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಈ ಪೈಕಿ ಕುಲಕಸುಬು ಆಧಾರಿತ ವೃತ್ತಿ ಮಾಡುವ ಅಸಂಘಟಿತ ಸಮುದಾಯಗಳಾದ ಕ್ಷೌರಿಕರು, ಅಕ್ಕಸಾಲಿಗರು, ಕಂಬಾರರು, ಕುಂಬಾರರು, ಅಗಸರು, ಹಮಾಲಿಗಳು, ಮೆಕ್ಯಾನಿಕ್ಗಳು, ಹಮಾಲಿಗಳು, ಚಿಂದಿ ಆಯುವವರು, ಪುರಿಭಟ್ಟಿ ಕಾರ್ಮಿಕರು, ಮನೆಗೆಲಸದವರು (ಗೃಹ ಕಾರ್ಮಿಕರು), ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿಗಳನ್ನು ಹಾಕಲು ಕಾರ್ಮಿಕ ಇಲಾಖೆ ಸೂಚಿಸಿತ್ತು. ಜಿಲ್ಲೆಯಲ್ಲಿ ಈ ಸಂಬಂಧ 65,596 ಮಂದಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಈಗಾಗಲೇ ನೋಂದಾವಣಿ ಮಾಡಿಸಿ ಸ್ಮಾರ್ಟ್ ಕಾರ್ಡ್ ಹೊಂದಿದ್ದ 10, 697 ಮಂದಿಗೆ ಪರಿಹಾರ ದೊರೆತಿದ್ದು, ನೋಂದಣಿಕಾರ್ಡ್ ಇಲ್ಲದ 54, 899 ಮಂದಿ ಅರ್ಜಿ ದಾರರಿಗೆ ತಲಾ 2000 ರೂ. ಪರಿಹಾರ ಮೊತ್ತ ಜಮೆಯಾಗದೆ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಕಾರ್ಮಿಕ ಅದಾಲತ್ನಲ್ಲೇ ಪರಿಹಾರದ ಅರ್ಜಿಗಳೇ ಅಧಿಕ: ಇತ್ತೀಚೆಗೆ ಕಾರ್ಮಿಕ ಇಲಾಖೆ ನಡೆಸಿದ ಕಾರ್ಮಿಕ ಅದಾಲತ್ನಲ್ಲಿ ಕೈಗಾರಿಕಾ ವ್ಯಾಜ್ಯ ಪರಿಹಾರದ ಅರ್ಜಿಗಳು, ಕಾರ್ಮಿಕರ ಸೌಲಭ್ಯ ಬಾಕಿಯ ದೂರು ದುಮ್ಮಾನ ವಿಲೆಯ ಅರ್ಜಿಗಳಿಗಿಂತ ಕೋವಿಡ್ 2ನೇ ಅಲೆಯ ಪ್ಯಾಕೇಜ್ ಪರಿಹಾರ ನೀಡಿ ಎಂಬ ಮನವಿಗಳೇ 400 ಸಂಖ್ಯೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು, ಪ್ಯಾಕೇಜ್ ಪರಿಹಾರಕ್ಕಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಎಷ್ಟು ಅವಶ್ಯಕವಾಗಿದೆ ಎಂಬುದಕ್ಕೆ ನಿದರ್ಶನವೆನಿಸಿದೆ.
ಶ್ರಮ, ಹಣ ಎಲ್ಲಾ ಕಳೆದುಕೊಂಡರೂ ಪರಿಹಾರ ಮರೀಚಿಕೆ:
ಮೇ 28ರಿಂದ ಜು.12ರವರೆಗೆ ಕೋವಿಡ್ ಪ್ಯಾಕೇಜ್ ಪರಿಹಾರಕ್ಕಾಗಿ ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸೇವಾ ಸಿಂಧು ಪೋರ್ಟಲ್ ಮೂಲಕವೇ ಆನ್ಲೈನ್ ಅರ್ಜಿಯನ್ನು ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಪ್ರತಿಯನ್ನು ಸ್ಕ್ಯಾನ್ ಮಾಡಿ ಹಾಕಬೇಕಿತ್ತು. ಇದಕ್ಕಾಗಿ ಸಾವಿರಾರು ಮಂದಿ ಸೇವಾ ಸಿಂಧು ಕೇಂದ್ರಗಳು, ಆಧಾರ್ ಕೇಂದ್ರಗಳಿಗೆ ತೆರಳಿ 150, 200, 300 ರೂ.ಗಳವರೆಗೆ ಕೇಂದ್ರಗಳವರು ಕೇಳಿದಷ್ಟು ಹಣವನ್ನು ತೆತ್ತು ಅರ್ಜಿಗಳನ್ನು ಹಾಕಿಕೊಂಡಿದ್ದರು. ಗೆಜೆಟೆಡ್ ಅಧಿಕಾರಿಗಳನ್ನು ಹಿಡಿದು ಸಹಿ ಮಾಡಿಸಿಕೊಂಡು ಬರುವುದು ಸಹ ಅರ್ಜಿದಾರರಿಗೆ ಸವಾಲಿನ ಕೆಲಸವಾಗಿತ್ತು. ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಹಲವು ಬಾರಿ ಎಡತಾಕಿದ್ದಲ್ಲದೇ ಬ್ಯಾಂಕ್ ಖಾತೆ ಆಧಾರ್ ಸೀಡಿಂಗ್ ಮಾಡಿಸಲು ಶ್ರಮ ಪಟ್ಟಿದ್ದಾರೆ. ಇಷ್ಟೆಲ್ಲ ಕಷ್ಟಪಷ್ಟು ನಾಲ್ಕು ತಿಂಗಳು ಕಳೆದರೂ 2 ಸಾವಿರ ಅಲ್ಪಮೊತ್ತದ ಪರಿಹಾರವೂ ಅರ್ಜಿದಾರರಿಗೆ ದುರ್ಲಬವಾಗಿರುವುದು ಸರಕಾರ, ಆಡಳಿತಗಾರರ ಇಚ್ಚಾಶಕ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ.
ಹಳೇ ನೊಂದಾಯಿತರಿಗೂ ಪರಿಹಾರ ಸಿಕ್ಕಿಲ್ಲ :
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೇರ ಅವರ ಖಾತೆಗೆ ಜಮೆ ಆಗಿರುವುದಾಗಿ ಕಾರ್ಮಿಕ ಇಲಾಖೆಯವರು ಹೇಳುತ್ತಾರೆ. ಆದರೆ 2006ರಿಂದಲೇ ನೋಂದಾಯಿತರಿಗೆ ಹಳೇ ಕಾರ್ಮಿಕರಿಗೆ ಪರಿಹಾರ ಜಮೆ ಆಗಿಲ್ಲ ಎಂಬದೂರುಗಳು ಕೇಳಿಬಂದಿವೆ. ಅಲ್ಲದೇ ದಿನಸಿ ಕಿಟ್ಗಳು ಸಹ ಲಾಕ್ಡೌನ್ ತೆರವಿನ ಬಳಿಕ ಕಾರ್ಮಿಕರಿಗೆ ಹಂಚಿಕೆ ಮಾಡುತ್ತಿದ್ದು, ಪರಿಹಾರದ ಹೆಸರಲ್ಲಿ ಕಾರ್ಮಿಕರಿಗೆ ಬರೀ ಕಣ್ಣೊರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಕಾರ್ಮಿಕ ಇಲಾಖೆಯವರು ಹೇಳುವುದೇನು?
ನೋಂದಾಯಿತರಲ್ಲದ ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪ್ಯಾಕೇಜ್ ಪರಿಹಾರ ಬಾಕಿ ಉಳಿದಿರುವ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ್ ಅವರು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದು, ರಾಜ್ಯಾದ್ಯಂತ ಲಕ್ಷಾಂತರ ಮಂದಿ ಕೋವಿಡ್ ಪ್ಯಾಕೇಜ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಈಗಾಗಲೇ ನೋಂದಾಯಿತ ಕಟ್ಟಡ ಕಾರ್ಮಿಕರು, ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಪರಿಹಾರವನ್ನು ಅವರ ಖಾತೆಗೆ ಜಮೆ ಆಗಿದೆ. ನೋಂದಾಯಿತ 40,363 ಕಟ್ಟಡ ಕಾರ್ಮಿಕರು, 10,697 ನೋಂದಾಯಿತ ಕಾರ್ಮಿಕರುಪರಿಹಾರ ಮೊತ್ತವನ್ನು ಈಗಾಗಲೇ ಪಡೆದಿದ್ದು, ನೋಂದಾಯಿತರಲ್ಲದವರಿಗೆ ಪರಿಹಾರ ಜಮೆ ಮಾಡುವ ಪ್ರಕ್ರಿಯೆ ಕಚೇರಿಯಲ್ಲಿ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡುತ್ತಾರೆ.
ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಲ್ಲದ ಅಸಂಘಟಿತ ಕಾರ್ಮಿಕರ ಆನ್ಲೈನ್ ಅರ್ಜಿ ಅನುಮೋದನೆಯಲ್ಲೂ ವಿಳಂಬವಾಗುತ್ತಿದ್ದು, ಸರಕಾರ ಪರಿಹಾರ ಪ್ಯಾಕೇಜ್ಗೆ ಸರಕಾರದ ಮೀಸಲಿಟ್ಟ ಅನುದಾನವೂ ಖಾಲಿಯಾದಂತೆ ಕಾಣುತ್ತಿದೆ. 4 ತಿಂಗಳಿಂದ ಪರಿಹಾರ ಹಣ ಬಾರದೆ ಅಸಂಘಟಿತ ಕಾರ್ಮಿಕರು ಸಂಕಷ್ಟು ಎದುರಿಸುತ್ತಿದ್ದು, ಇರುವ ಆರ್ಥಿಕ, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಬೇಗ ಪರಿಹಾರ ಮೊತ್ತ ಖಾತೆಗಳಿಗೆ ಜಮೆ ಮಾಡಬೇಕು. ಇಲ್ಲವಾದಲ್ಲಿ ಸಂಘಟನೆ ಮೂಲಕ ಪ್ರತಿಭಟನೆ ಮಾಡಲಾಗುವುದು.
-ಸುಬ್ರಹ್ಮಣ್ಯ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
