ತುಮಕೂರು:
ಇಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ| ಎಂಎಲ್ಸಿಗಳಿಗೆ ಹಳೆ ಕಟ್ಟಡದಲ್ಲಿ ಕಚೇರಿ
ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ಅಧಿಕಾರವಧಿ ಈ ತಿಂಗಳು ಕೊನೆಗೊಳ್ಳಲಿದ್ದು, ಮೇಯರ್ ಅಧ್ಯಕ್ಷತೆಯ ಇಂದಿನ ಕಡೆಯ ಸಾಮಾನ್ಯಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ತೀರ್ಮಾನಕ್ಕೆ ಅಜೆಂಡಾ ನಿಗದಿ ಮಾಡಲಾಗಿದೆ.
ವಿಶೇಷವಾಗಿ ಮಹಾನಗರಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧಿಕಾರ ನೀಡುವ ಕುರಿತು ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಿರುವುದು ಗಮನಸೆಳೆದಿದೆ.
ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆ 1976ರ ಕಲಂ 491 ಮತ್ತು 492ರ ಪ್ರಕಾರ ಪಾಲಿಕೆ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೊಡಲು ಸರಕಾರದ ನಿರ್ದೇಶನದಂತೆ (ನಗರಾಭಿವೃದ್ಧಿ ಇಲಾಖೆ ಪತ್ರ ಸಂಖ್ಯೆ: ನಅಇ/09/ಎಂಎನ್ಇ/2020ರಲ್ಲಿ, ದಿ.23.07.2021) ಅಜೆಂಡಾ ವಿಷಯ ಸಂಖ್ಯೆ 19ರಲ್ಲಿ ವಿಷಯ ಪ್ರಸ್ತಾಪಿಸಿದ್ದು,
ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 3064/2020ರ ಆದೇಶ ಹಾಗೂ ಕೆಎಂಸಿ ಕಾಯ್ದೆ 1976ರ ಕಲಂ 492ರ ಪ್ರಕಾರ ಕಾರ್ಪೋರೇಷನ್ ಸೆಕ್ಯೂರಿಟಿ ಫೋರ್ಸ್ ರಚಿಸುವ ಬಗ್ಗೆ ಹಾಗೂ ಕಾಯ್ದೆಯ ಕಲಂ 491 ಮತ್ತು 492ರ ಪ್ರಕಾರ ಪೊಲೀಸ್ ಅಧಿಕಾರ ನೀಡಲು ಸಾಮಾನ್ಯ ಸಭೆ ಅನುಮೋದನೆಗೆ ವಿಷಯ ಮಂಡಿಸಲಾಗಿದೆ, ಕಾರ್ಪೋರೇಷನ್ ಸೆಕ್ಯೂರಿಟ್ ಫೋರ್ಸ್ ಸಂಬಂಧ 17.09.2021ರಲ್ಲೇ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಹ ಪಾಲಿಕೆಯಿಂದ ಸಲ್ಲಿಸಲಾಗಿದೆ.
ಪಾಲಿಕೆ ಹಳೆ ಕಟ್ಟಡದಲ್ಲಿ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ, ರಾಜೇಂದ್ರ ರಾಜಣ್ಣ ಅವರಿಗೆ ಕೊಠಡಿ ಒದಗಿಸುವುದು, ರಾಷ್ಟ್ರೀಕೃತ ಬ್ಯಾಂಕ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ 3000 ಚದರಡಿ ಸ್ಥಳಾವಕಾಶ ಒದಗಿಸುವುದು,
ಕೊಳಗೇರಿ ನಿವಾಸಿಗಳಿಗೆ ಪಿಎಂಎವೈ-ಎಚ್ಎಫ್ಕೆ ಯೋಜನೆಯಡಿ ಮಂಜೂರಾದ ಮನೆಗಳ ಪೈಕಿ ವಂತಿಕೆ ಕಟ್ಟಲು ಅಶಕ್ತರಾದ 188 ಫಲಾನುಭವಿಗಳ ವಂತಿಕೆಯನ್ನು ಪಾಲಿಕೆಯಿಂದ ಭರಿಸುವುದು, ಪಾಲಿಕೆ ಗುರುತಿಸಿರುವ 36 ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚುವುದು, ವಿವಿಧ ಸ್ಥಾಯಿ ಸಮಿತಿಗಳ ನಿರ್ಣಯಗಳನ್ನು ಕೌನ್ಸಿಲ್ ಮುಂದೆ ಮಂಡಿಸುವುದು.
22ನೇ ವಾರ್ಡಿನ ಚಗನ್ಲಾಲ್ ಭವನ್ ರಸ್ತೆಯನ್ನು 30 ಅಡಿಯಿಂದ 40 ಅಡಿಗೆ ವಿಸ್ತರಿಸುವುದು ಸೇರಿದಂತೆ ಹಲವು ಸದಸ್ಯರು ಮಂಡಿಸಿರುವ ವಿಷಯ, ಹೊರಗುತ್ತಿಗೆ ನೇಮಕಾತಿ ಸೇರಿದಂತೆ ಒಟ್ಟು 60 ವಿಷಯಗಳನ್ನು ಸಾಮಾನ್ಯ ಸಭೆ ಮುಂದಿಡಲಾಗಿದೆ.
ಪೊಲೀಸ್ ಪವರ್ ಅಂದರೆ ಕೈಗೆ ಲಾಠಿ ಕೊಡುವುದಲ್ಲ: ಮೇಯರ್
ಪಾಲಿಕೆ ಸಿಬ್ಬಂದಿಗೆ ಪೊಲೀಸ್ ಪವರ್ ಅಂದರೆ ಅವರಿಗೆ ಕೈಗೆ ಲಾಠಿ ಕೊಡುವುದಲ್ಲ. ಅನಧಿಕೃತ ಕಟ್ಟಡಗಳು ಒತ್ತುವರಿ ತೆರವು, ಪಾಲಿಕೆ ಸ್ವತ್ತುಗಳ ಅತಿಕ್ರಮಣ, ತೆರಿಗೆ, ಶುಲ್ಕ ಬಾಕಿ ವಸೂಲಾತಿ, ನಿಯಮ ಉಲ್ಲಂಘನೆ,
ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣದ ವಿಷಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಯಂತ್ರಿಸುವ ಅಧಿಕಾರ ಹಾಗೂ ಹಲ್ಲೆಗೊಳಗಾಗುವ ಸಂದರ್ಭದಲ್ಲಿ ಆತ್ಮರಕ್ಷಣೆಯ ಅಧಿಕಾರವನ್ನು ಪ್ರಾಪ್ತಿಗೊಳಿಸುವುದಾಗಿದೆ.
ಈ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಪಾಲಿಕೆ ರಕ್ಷಣಾ ದಳವನ್ನು ಅಸ್ಥಿತ್ವಕ್ಕೆ ತರಲು ಪಾಲಿಕೆ ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ.
ಸ್ಮಾರ್ಟ್ ಸಿಟಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಕೋಟ್ಯಾಂತರ ವೆಚ್ಚ ಮಾಡಿದ್ದು ಸಮರ್ಪಕ ಮಾಹಿತಿ ಕೇಳಿದರೂ ಕೊಟ್ಟಿರುವುದಿಲ್ಲ. ಮಹಾತ್ಮಗಾಂಧಿ ನಗರವಿಕಾಸ ಯೋಜನೆಯ ಕಾಮಗಾರಿಗಳದ್ದು ಇದೇಸ್ಥಿತಿ. ಪಾಲಿಕೆ ಆಡಳಿತ ವ್ಯವಸ್ಥೆಯ ಲೋಪಗಳ ಬಗ್ಗೆ ಧ್ವನಿ ಎತ್ತಲಾಗುವುದು.
-ಜೆ.ಕುಮಾರ್ಗೌಡ, ಪಾಲಿಕೆ ವಿಪಕ್ಷ ನಾಯಕ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
