ಹುಳಿಯಾರು:
ಪಪಂ ಸಿಬ್ಬಂದಿಯು ಖಾಸಗಿ ಜಮೀನಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಂತರ ಸುರಿದ ತ್ಯಾಜ್ಯವನ್ನು ಪುನಃ ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಹೋದ ಘಟನೆ ಹುಳಿಯಾರು ಸಮೀಪದ ವೈ.ಎಸ್.ಪಾಳ್ಯದ ಬಳಿಯ ತಮ್ಮಡಿಹಳ್ಳಿ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೆಂಕೆರೆಯ ಪುರದ ಮಠದ ಬಳಿ ಸ್ಥಳ ಗುರುತಿಸಲಾಗಿದೆ. ಆದರೇ ಸದರಿ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಪಪಂ ಸಿಬ್ಬಂದಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ.
ಈ ಬಗ್ಗೆ ಅನೇಕ ದೂರುಗಳ ಕೇಳಿ ಬಂದರೂ ಸಹ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಖಾಸಗಿ ಜಮೀನು, ಸರ್ಕಾರಿ ಜಾಗ, ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗೆ ಸೋಮವಾರವೂ ಸಹ ವೈ.ಎಸ್.ಪಾಳ್ಯದಿಂದ ತಮ್ಮಡಿಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಬರದಲೇಪಾಳ್ಯದ ಉಮೇಶ್ ಎಂಬುವವರ ಜಮೀನಿಗೆ ತ್ಯಾಜ್ಯ ಸುರಿದಿದ್ದಾರೆ.
ಎಂದಿನಂತೆ ಹುಳಿಯಾರು ಕಡೆಯಿಂದ ಬರುವಾಗ ಇದನ್ನು ಗಮಿಸಿದ ಜಮೀನು ಮಾಲೀಕ ಉಮೇಶ್ ಪೌರ ಕಾರ್ಮಿಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸುರಿದ ತ್ಯಾಜ್ಯವನ್ನು ಪುನಃ ತುಂಬಿಕೊಂಡು ಹೋಗದಿದ್ದರೆ ಟ್ರ್ಯಾಕ್ಟರ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅಂತಿಮವಾಗಿ ವಿಧಿಯಿಲ್ಲದೆ ಸುರಿದ ಒಂದು ಟ್ರ್ಯಾಕ್ಟರ್ ಲೋಡ್ ತ್ಯಾಜ್ಯವನ್ನು ಇಬ್ಬರೇ ಪೌರ ಕಾರ್ಮಿಕರು ಬರೊಬ್ಬರಿ 1-2 ಗಂಟೆ ಪುನಃ ಟ್ರ್ಯಾಕ್ಟರ್ಗೆ ಲೋಡ್ ಮಾಡಿಕೊಂಡು ಉಮೇಶ್ ಜಮೀನಿನಿಂದ ತೆರಳಿದ್ದಾರೆ. ಆದರೇ ತುಂಬಿಕೊಂಡು ಹೋದ ತ್ಯಾಜ್ಯವನ್ನು ಮತ್ತೆ ಎಲ್ಲಿ ಸುರಿದಿದ್ದಾರೆ ಎಂಬುದು ತಿಳಿಯದಾಗಿದೆ. ಅಧಿಕಾರಿಗಳೂ ಸಹ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ತಿಳಿಸುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/28HULIYAR2.jpg)