ತುಮಕೂರು :

ನಗರದಲ್ಲಿನ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ತುಮಕೂರು ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ನಗರದ 5 ಕಡೆ ವೆಂಡರ್ಝೋನ್ ನಿರ್ಮಿಸಲಾಗುತ್ತಿದೆ.
ಪಾದಚಾರಿ ರಸ್ತೆಗಳಲ್ಲಿ ಹಣ್ಣು, ತರಕಾರಿ, ಹೂವ್ವಿನ ಬುಟ್ಟಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ನಿರ್ದಿಷ್ಟ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡಲು ಈ ವೆಂಡರ್ಝೋನ್ಗಳನ್ನು ನಿರ್ಮಿಸುತ್ತಿದ್ದು, ಕನಿಷ್ಠ ಶುಲ್ಕ ನಿಗದಿ ಮಾಡಿ ತಾತ್ಕಾಲಿಕ ಸ್ಥಳಾವಕಾಶವನ್ನು ವ್ಯಾಪಾರಿಗಳಿಗೆ ಮಾಡಿಕೊಡಲಾಗುತ್ತಿದೆ.
ಸುಮಾರು 4 ಕೋಟಿ ವೆಚ್ಚದಲ್ಲಿ ಜಯನಗರ, ಕೋತಿತೋಪು, ಅಶೋಕನಗರ, ಜೆ.ಸಿ.ರಸ್ತೆ, ಶಿರಾಗೇಟ್ ಭಾಗದಲ್ಲಿ ವೆಂಡರ್ಝೋನ್ ನಿರ್ಮಿಸುತ್ತಿದ್ದು, ಇನ್ನೂ 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಯಿದೆ. 26ನೇ ವಾರ್ಡ್ನ ಅಶೋಕ ನಗರದ ದೋಬಿಘಾಟ್ ಬಳಿಯ ಸ್ಮಶಾನದ ದಕ್ಷಿಣದ ಭಾಗಕ್ಕೆ ನೀರು ಶುದ್ಧೀಕರಣ ಘಟಕದ ಪಕ್ಕದ ಖಾಲಿ ಜಾಗಗಳಲ್ಲಿ 38 ಜನ ಮಾರಾಟಗಾರರಿಗೆ ಅನುಕೂಲವಾಗುವಂತೆ 6*8 ಅಡಿ ವೀಸ್ತೀರ್ಣದ ಮಾರಾಟ ಸ್ಥಳಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಎಸ್ಐಟಿ ಮುಖ್ಯರಸ್ತೆ, ಸೋಮೇಶ್ವರ ಪುರಂ ಮುಖ್ಯರಸ್ತೆ ,ಶೆಟ್ಟಿಹಳ್ಳಿ ಅಂಡರ್ಪಾಸ್ ಹಾಗೂ ವಿವಿ ಎದುರಿನ ಬಿ.ಎಚ್.ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಇಲ್ಲಿ ಒಂದೇ ಸ್ಥಳದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.
ಬಿಸಿಲು-ಮಳೆಯಲ್ಲಿ ನೆನೆಯದಂತೆ ಮೇಲ್ಛಾವಣಿ ವ್ಯವಸ್ಥೆ:
ಬಿಸಿಲು ಮಳೆ ಬಂದಾಗ ಬೀದಿ ಬದಿ ವ್ಯಾಪಾರಸ್ಥರು ತೊಂದರೆಪಡಬಾರದು ಮೇಲ್ಛಾವಣಿ ಹೊದಿಕೆ ಹಾಕಿ ಆತ್ಯಾಧುನಿಕವಾಗಿ ಸ್ಟೆನ್ಸಿಲ್ ಫ್ಯಾಬ್ರಿಕೇಟ್ ಹಾಕಿ ಮಾರುಕಟ್ಟೆ ವಲಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿರುವ 26ನೇ ವಾರ್ಡ್ ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನ್ ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಶಾಶ್ವತ ಮಳಿಗೆಗಳು ಕನಿಷ್ಠ ಸುಂಕ ನಿಗದಿ ಮಾಡಿ ಸ್ಥಳವನ್ನು ಅಲಾಟ್ ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಬಂದು ಅವಕಾಶ ಕೊಟ್ಟಿರುವ ಸ್ಥಳದಲ್ಲಿ ಹಣ್ಣು ತರಕಾರಿ ಇಟ್ಟು ಮಾರಾಟ ಮಾಡಿ ಮತ್ತೆ ಎತ್ತಿಕೊಂಡು ಹೋಗಬೇಕು. ಶಾಶ್ವತವಾಗಿ ಯಾರಿಗೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ತುಮಕೂರು ನಗರದ 5 ಕಡೆ ವೆಂಡರ್ಜೋನ್ಗಳನ್ನು ನಿರ್ಮಿಸುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ನಿರ್ಧಿಷ್ಟ ಸ್ಥಳದಲ್ಲಿ ಸೂಕ್ತ ರಕ್ಷಣೆಯೊಂದಿಗೆ ಕುಳಿತು ವ್ಯಾಪಾರ ಮಾಡಲಿ ಎಂಬುದು ಇದರ ಉದ್ದೇಶ. ಯಾವುದೇ ಶಾಶ್ವತ ಹಂಚಿಕೆ ಮಾಡುವುದಿಲ್ಲ. ಇದರಿಂದ ಪಾದಚಾರಿಗಳು ಸುಗುಮವಾಗಿ ಪುಟ್ಪಾತ್ನಲ್ಲಿ ಸಂಚರಿಸಲು ಅನುಕೂಲವಾಗುತ್ತಿದೆ.
-ರೇಣುಕಾ ಆಯುಕ್ತರು ಮಹಾನಗರಪಾಲಿಕೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಆಡಳಿತ, ಸ್ಮಾರ್ಟ್ಸಿಟಿಯವರು ಜೊತೆಯಾಗಿ ಚರ್ಚಿಸಿ ಮಾದರಿಯಾದ ಯೋಜನೆ ರೂಪಿಸಿ ವೆಂಡರ್ಜೋನ್ ನಿರ್ಮಿಸುತ್ತಿದ್ದು, ಅಶೋಕ ನಗರದ ಸ್ಮಶಾನದ ಹಿಂಭಾಗದ ಖಾಲಿಸ್ಥಳದಲ್ಲಿ 152*22ಅಡಿ ವಿಸ್ತೀರ್ಣದ ಜಾಗದಲ್ಲಿ 6*8 ಅಡಿ ಸ್ಥಳಗಳನ್ನು ವಿಂಗಡಿಸಿ 38 ಬೀದಿ ಬದಿ ವ್ಯಾಪಾರಸ್ಥರಿಗೆ ತಾತ್ಕಾಲಿಕವಾಗಿ ಹಂಚಿಕೆ ಮಾಡಲಾಗುತ್ತದೆ.
-ಎಚ್.ಮಲ್ಲಿಕಾರ್ಜುನ್, 26ನೇ ವಾರ್ಡ್ ಕಾರ್ಪೋರೇಟರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
