ಪರಂ ಸಮ್ಮುಖದಲ್ಲೆ ಡಿಕೆಶಿ ನನಗೆ ಎಂಪಿ ಟಿಕೆಟ್ ತಪ್ಪಿಸಿದರು :ಎಸ್‌ಪಿಎಂ

ತುಮಕೂರು

     ಕಳೆದ ಲೋಕಸಭೆ ಟಿಕೆಟ್ ನೀಡಿಕೆ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳಿಂದಲೂ ಮೋಸಹೋಗಿದ್ದು, ನನ್ನಿಂದ ಪಕ್ಷಕ್ಕೆ ಏನಾದರೂ ಮೋಸ ಆಗಿದ್ದರೆ ಕೈ ನಾಯಕರು ಸಾಬೀತುಪಡಿಸಲಿ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸವಾಲೆಸೆದರು.

     ಅವರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಳ್ಳಗೆರೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಕ್ರಿಯ ಲೋಕಸಭಾ ಸದಸ್ಯನಾಗಿದ್ದ ನಾವು ಯಾವುದೇ ತಪ್ಪು ಮಾಡದೆ 2019ರಲ್ಲಿ ಟಿಕೆಟ್ ತಪ್ಪಿಸುವ ಷಡ್ಯಂತ್ರ ಮಾಡಲಾಯಿತು. ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗರಲ್ಲಿ ನಮ್ಮನ್ನು ಬಿಟ್ಟರೆ ಬೇರೆ ನಾಯಕತ್ವ ಬೆಳೆಯಬಾರದು ಎಂಬ ದುರುದ್ದೇಶದಿಂದ ಆಗ ನೀರಾವರಿ ಸಚಿವರಾಗಿದ್ದ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತೆ ಹೇಳಿದರು.

    ನಾನು ಒಪ್ಪದಿದ್ದಾಗ ತುಮಕೂರು ಲೋಕಸಭೆ ಟಿಕೆಟ್ ಅನ್ನು ಜೆಡಿಎಸ್ ಪಕ್ಷಕ್ಕೆ ಸರೆಂಡರ್ ಮಾಡಿದರು. ಈ ಘಟನೆಗೆ ಸಾಕ್ಷಿಯಾಗಿದ್ದ ಆಗಿನ ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಸಹ ಈ ಬಗ್ಗೆ ಚಕಾರವೆತ್ತಲಿಲ್ಲ. ಜೆಡಿಎಸ್ ಜನತಾ ಜಲಾಧಾರೆ ಸಮಾವೇಶದಲ್ಲಿ ಖುದ್ದು ದೇವೇಗೌಡರೇ, ನಾನು ಬೇಡವೆಂದರು ಕಾಂಗ್ರೆಸ್ ನಾಯಕರೇ ತಮ್ಮನ್ನು ತುಮಕೂರಿಗೆ ಕರೆತಂದು ಸೋಲಿಸಿದರು ಎಂಬ ಮಾತುಗಳನ್ನಾಡಿದ್ದು, ಇದಕ್ಕಿಂತ ಸಾಕ್ಷಿ ಇನ್ನೇನುಬೇಕು ಎಂದು ಮುದ್ದಹನುಮೇಗೌಡರು ಕೈ ನಾಯಕರನ್ನು ಪ್ರಶ್ನಿಸಿದರು.

     ನನಗೆ ಟಿಕೆಟ್ ತಪ್ಪುವ ಸಂದರ್ಭದಲ್ಲಿ ಜೆಡಿಎಸ್ ನವರು ಸಹ ಸಕ್ರಿಯ ಸಂಸದನಿಗೇ ನಾವೇಕೆ ಮೋಸಮಾಡಬೇಕು. ಟಿಕೆಟ್‌ಅನ್ನು ಅವರಿಗೆ ಬಿಡೋಣ ಎಂಬ ಔದಾರ್ಯ ತೋರಲಿಲ್ಲ. 2013ರಲ್ಲಿ ತಾವೂ ಜೆಡಿಎಸ್‌ನಲ್ಲಿದ್ದಾಗ ಕುಣಿಗಲ್ ಕ್ಷೇತ್ರದಲ್ಲಿ ಬಿ.ಫಾರಂ ಪಡೆದಿದ್ದಾಗ್ಯ್ನೂ ಕಡೇ ಘಳಿಗೆಯಲ್ಲಿ ಬದಲಾವಣೆ ಮಾಡಿ ಡಿ.ನಾಗರಾಜಯ್ಯ ಅವರಿಗೆ ಸಿ.ಫಾರಂ ನೀಡಲಾಯಿತು. ನಂತರ ನಾನು ಕಾಂಗ್ರೆಸ್ ಸೇರಿದೆ. ಮರಳಿ ಕಾಂಗ್ರೆಸ್ ಸೇರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾದೆ. ಈ ಆಯ್ಕೆಗೆ ಪರಮೇಶ್ವರ್, ಡಿಕೆಶಿ ಸಹಕರಿಸಿದರು ಎಂದು ನಾನು ಸ್ಮರಿಸುತ್ತೇನೆ.

    ಆದರೆ ಟಿಕೆಟ್ ತಪ್ಪುವಲ್ಲೂ ಅವರೇ ಮುಖ್ಯ ಪಾತ್ರವಹಿಸಿದರು. ಟಿಕೆಟ್ ಕೈ ತಪ್ಪುವಾಗಿ ತಮಗೆ ರಾಜ್ಯಸಭೆ ಇಲ್ಲವೇ ಎಂಎಲ್ಸಿ ಅವಕಾಶ ನೀಡುವ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ. ಇದರಿಂದ ಬೇಸತ್ತಿದ್ದ ನಾನು ಪಕ್ಷ ತೊರೆಯಬೇಕಾಯಿತು ಎಂದು ಮುದ್ದಹನುಮೇಗೌಡರು ಹೇಳಿದರು.

    ತಮ್ಮ ಸ್ಪರ್ಧೆ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೋ ಅಥವಾ ತುಮಕೂರು ಲೋಕಸಭೆಗೋ ಎಂಬ ಪ್ರಶ್ನೆಗೆ ,ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದು, ಸದ್ಯ ಕುಣಿಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದಿಂದ 2 ಬಾರಿ ಶಾಸಕನಾಗಿದ್ದ ನನಗೆ ಅಲ್ಲಿಂದಲೇ ಟಿಕೆಟ್ ಸಿಗುವ ವಿಶ್ವಾಸವಿದೆ. ಎಂಪಿ ಸ್ಪರ್ಧೆ ವಿಚಾರ ಸದ್ಯಕ್ಕೆ ಅಪ್ರಸ್ತುತ ಎಂದರು.

    ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುವುದರೊಂದಿಗೆ ರಾಜ್ಯದಲ್ಲೂ ಅಧಿಕಾರ ಹಿಡಿಯುವುದು ನಿಶ್ಚಿತ. ಗ್ರಾಮಾಂತರ ಕ್ಷೇತ್ರ ಸೇರಿದಂತೆ ಚಿ.ನಾ.ಹಳ್ಳಿ ಜಿಲ್ಲೆಯ ವಿವಿಧೆಡೆಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link