ಚೆನ್ನೈ
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಮಂಗಳವಾರ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕತ್ವವು ಎಐಎಡಿಎಂಕೆಯೊಂದಿಗೆ ಮೈತ್ರಿ ಮುಂದುವರಿಸಲು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಿಯೂಷ್ ಗೋಯಲ್ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಅಣ್ಣಾಮಲೈ ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ. ಈ ನಿಲುವುಗಳಿಗೆ ತಾವು ಬದ್ಧರಿರುವುದಾಗಿ ಹೇಳಿದ್ದಾರೆ.
ದ್ರಾವಿಡರ ನಾಡಾದ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ತಾವು ರೂಪಿಸಿರುವ ಯೋಜನೆಗಳು ಮತ್ತು ಕಾರ್ಯತಂತ್ರಗಳ ನೀಲನಕ್ಷೆಯನ್ನು ಬಿಜೆಪಿ ನಾಯಕರಿಗೆ ಅಣ್ಣಾಮಲೈ ನೀಡಿದ್ದಾರೆ.ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳದೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಬೇಕಿದೆ. ಮುಂದಿನ 6 ತಿಂಗಳವರೆಗೆ ನಾವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅಣ್ಣಾಮಲೈ ಬಿಜೆಪಿ ಹೈಕಮಾಂಡ್ಗೆ ತಿಳಿಸಿದ್ದಾರೆ.ತಮಿಳುನಾಡಿನಲ್ಲಿ ಮುಂದಿನ ಆರು ತಿಂಗಳ ಕಾಲ ತಾವು ಅನುಸರಿಸಲಿರುವ ಕಾರ್ಯತಂತ್ರಗಳ ಕುರಿತು ಅಣ್ಣಾಮಲೈ ಬಿಜೆಪಿ ಹೈಕಮಾಂಡ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಣ್ಣಾಮಲೈ ಅವರ ಮುಂದಿನ ಕಾರ್ಯತಂತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ಕುಲಂಕೂಷವಾಗಿ ವಿಚಾರಿಸಲಿದೆ ಎಂದು ತಿಳಿದುಬಂದಿದೆ. ಆ ನಂತರ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ.ಬಿಜೆಪಿ ನಾಯಕರೊಂದಿಗಿನ ಸಭೆಯ ನಂತರ ಅಣ್ಣಾಮಲೈ ಚೆನ್ನೈಗೆ ಮರಳಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಸ್ನೇಹ ಮುರಿದುಕೊಂಡಿದೆ. ಇದಕ್ಕೆ ಕಾರಣ ಅಣ್ಣಾಮಲೈ ಎಂಬುದನ್ನು ಎಐಎಡಿಎಂಕೆ ಆರೋಪಿಸಿದ್ದಾರೆ.ತಮ್ಮ ನಾಯಕರಾದ ಅಣ್ಣಾದೊರೈ ಹಾಗೂ ಜಯಲಲಿತಾ ವಿರುದ್ಧ ಅಣ್ಣಾಮಲೈ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನಮ್ಮೊಂದಿಗೆ ಉತ್ತಮ ಸ್ನೇಹ ಸಂಪರ್ಕವನ್ನು ಅವರು ಹೊಂದಿಲ್ಲ. ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೇ ಹೋದರೆ, ನಾವು ಬಿಜೆಪಿ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳಬೇಕಾಗುತ್ತದೆ ಎಂದು ಎಐಡಿಎಂಕೆ ನಾಯಕರು ಬೆದರಿಕೆ ಹಾಕಿದ್ದರು.
ಈ ಸಂಬಂಧ ದೆಹಲಿಗೆ ಹೋಗಿ ಬಿಜೆಪಿ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿದ್ದರು. ಇದ್ಯಾವುದು ಪ್ರಯೋಜನಕ್ಕೆ ಬರದಿರುವ ಕಾರಣ ಬಿಜೆಪಿ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳುವುದಾಗಿ ಎಐಎಡಿಎಂಕೆ ನಾಯಕರು ಘೋಷಿಸಿದ್ದರು.
ಈ ಬೆಳಗಣಿಗೆಗಳಾದ ಬಳಿಕ ಅಣ್ಣಾಮಲೈರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದೇ ಪ್ರಕಾರ, ದೆಹಲಿಗೆ ತೆರಳಿದ ಅಣ್ಣಾಮಲೈ ಎಐಎಡಿಎಂಕೆ ಜೊತೆ ಮತ್ತೆ ಸ್ನೇಹ ಸಂಬಂಧ ಬೆಳಸಲು ಒಲ್ಲೆ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಒಂದು ನೀವು ಎಐಎಡಿಎಂಕೆ ಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾದರೆ, ನಾನು ರಾಜೀನಾಮೆ ನೀಡಲೂ ಸಿದ್ದವೆಂದು ಬೆದರಿಕೆ ಒಡ್ಡಿದ್ದಾರೆ. ಅಣ್ಣಾಮಲೈರ ಹೊಸ ವರಸೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದಂಗಾಗಿ ಹೋಗಿದ್ದಾರೆಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/06/annamalai.jpg)