ನವದೆಹಲಿ:
ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಹುದ್ದೆಯ ನೇಮಕದ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದು, ಸರ್ಕಾರ ಈ ದಿಸೆಯಲ್ಲಿ ಸಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಎನ್ಡಿಎ ಈ ಹುದ್ದೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವುದೋ ಅಥವಾ INDIA ಬಣದ ಅಭ್ಯರ್ಥಿಗೆ ಹಂಚುವುದೋ ಎಂಬ ಆಯ್ಕೆಯನ್ನು ತನ್ನ ಹತ್ತಿರದಲ್ಲಿಯೇ ಇಟ್ಟುಕೊಂಡಿದೆ.
ಸದನದ ಕಲಾಪ ನಡೆಸಲು ನೆರವಾಗಲು ಸಮಿತಿಯ ಮುಖ್ಯಸ್ಥರನ್ನು ಸ್ಪೀಕರ್ ಓಂ ಬಿರ್ಲಾ ಸೋಮವಾರ ನೇಮಕ ಮಾಡಿದ್ದು, ಡೆಪ್ಯುಟಿ ಸ್ಪೀಕರ್ ನೇಮಕ ಮಾಡಲು ಸರ್ಕಾರ ಬಯಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸದನವನ್ನುದ್ದೇಶಿಸಿ ಮಾತನಾಡಿದ ಬಿರ್ಲಾ, ಬಿಜೆಪಿ ಜಗದಾಂಬಿಕಾ ಪಾಲ್ , ಪಿ ಸಿ ಮೋಹನ್, ಸಂಧ್ಯಾ ರೇ, ದಿಲೀಪ್ ಸೈಕಿಯಾ, ಕಾಂಗ್ರೆಸ್ ಪಕ್ಷದ ಕುಮಾರಿ ಸೆಲ್ಜಾ, ಡಿಎಂಕೆಯ ಎ ರಾಜಾ, ಡಾ ಕಾಕೋಲಿ ಘೋಷ್ ದಸ್ತಿದಾರ್ (ಟಿಎಂಸಿ), ಕೃಷ್ಣ ಪ್ರಸಾದ್ ತೆನ್ನೆಟಿ (ಟಿಡಿಪಿ) ಮತ್ತು ಎಸ್ ಪಿಯ ಅವಧೇಶ್ ಪ್ರಸಾದ್ ಅವರ ಹೆಸರನ್ನು ಸಮಿತಿಯ ಸದಸ್ಯರಾಗಿ ಹೆಸರಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಫೈಜಾಬಾದ್ ಸಂಸದ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಕುರಿತು ಇಂಡಿಯಾ ಬಣ ಒಮ್ಮತಕ್ಕೆ ಬಂದಿದೆ ಎಂಬ ಊಹಾಪೋಹಗಳ ಮಧ್ಯೆ ಈ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಇಂಡಿಯಾ ಬಣ ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ, ಬಿಜೆಪಿ ವಿರೋಧಿಸುವುದು ಕಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯಲ್ಲಿನ ಕಲಾಪ ನಿಯಮಗಳ ಪ್ರಕಾರ, ಸ್ಪೀಕರ್ ಇಲ್ಲದಿದ್ದಾಗ ಡೆಪ್ಯೂಟಿ ಸ್ಪೀಕರ್ ಸದನದ ಕಲಾಪಗಳ ಅಧ್ಯಕ್ಷತೆ ವಹಿಸುತ್ತಾರೆ. ಅವರಿಗೆ ಸ್ಪೀಕರ್ಗೆ ನೀಡಲಾದ ಎಲ್ಲಾ ಅಧಿಕಾರಗಳನ್ನು ನೀಡಲಾಗುತ್ತದೆ. ಪ್ರಸಾದ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರತಿಪಕ್ಷಗಳು ಉತ್ತರ ಪ್ರದೇಶದ ದಲಿತ ಮತದಾರರಿಗೆ ಸಂದೇಶ ರವಾನಿಸಲು ಯತ್ನಿಸುತ್ತಿವೆ. ಪ್ರಸಾದ್ ಅವರ ಉಮೇದುವಾರಿಕೆಯನ್ನು ವಿರೋಧಿಸುವ ಮೂಲಕ ಸರ್ಕಾರ ತಪ್ಪು ಸಂದೇಶ ಕಳುಹಿಸಲು ಬಯಸುವುದಿಲ್ಲ ಎಂದು ಎನ್ಡಿಎ ನಾಯಕರೊಬ್ಬರು ಹೇಳಿದರು.