ಬೆಂಗಳೂರು:
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನವು ಇಂದು ಸೋಮವಾರ ಆರಂಭವಾಗುತ್ತಿದ್ದು, ಹಗರಣಗಳ ಅಸ್ತ್ರದೊಂದಿಗೆ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿಯೂ ಏಕ ಕಾಲಕ್ಕೆ ಹೋರಾಟ ನಡೆಸಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿವೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ, ಮುಡಾ ಹಗರಣ, ವಕ್ಫ್ ಬೋರ್ಡ್ ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣ, ಬೆಲೆ ಏರಿಕೆ, ಸದ್ದು, ಗದ್ದಲದ ನಡುವೆ ಇಂದು ಮುಂಗಾರು ಅಧಿವೇಶನ ಆರಂಭವಾಗುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಉಭಯ ಸದನಗಳಲ್ಲಿ ವಾಕ್ಸಮರಕ್ಕೆ ಸಜ್ಜಾಗಿದೆ. ಇದೇ ತಿಂಗಳ 26ರವರೆಗೆ 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ 187 ಹಗರಣ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ.
ಅಧಿವೇಶನದಲ್ಲಿ ಮುಡಾ ಸೈಟ್ ಹಂಚಿಕೆ, ವಾಲ್ಮೀಕಿ ನಿಗಮ ಹಗರಣ ವಿಷಯಗಳ ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೂ ಹೋರಾಟ ಮುಂದಾಗಿವೆ. ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಕೆ, ಬೆಲೆ ಏರಿಕೆ, ಡೆಂಗ್ಯೂ ಜ್ವರ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ವಿಷಯಗಳನ್ನು ಸನ್ನಿವೇಶ ಆಧಾರಿತವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸದನದಲ್ಲಿ ಯಾವುದೇ ವಿಷಯಕ್ಕೆ ಆರಂಭದಲ್ಲೇ ಪ್ರತಿಭಟನೆ ಬೇಡ. ವಿಷಯಗಳನ್ನು ಪ್ರಸ್ತಾಪಿಸಿದ ಬಳಿಕವೇ ಕೊನೆಯಲ್ಲಿ ಪ್ರತಿಭಟನೆ ಮಾಡಲು ತಂತ್ರ ರೂಪಿಸಿವೆ.
ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಆರೋಪ, ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಶೇ 40 ಕಮಿಷನ್ ಆರೋಪ, ಕೊರೋನಾ ಕಾಲದ ಹಗರಣ, ಬಿಟ್ ಕಾಯಿನ್ ಹಗರಣ ಹಾಗೂ ದೇವರಾಜ ಅರಸು ಟ್ರಕ್ ಟರ್ಮಿನಲ್ನಲ್ಲಿ 47ಕೋಟಿ ರೂಪಾಯಿ ಹಗರಣದಲ್ಲಿ ಬಿಜೆಪಿಯ ಮಾಜಿ ಶಾಸಕ ವೀರಯ್ಯನನ್ನು ಬಂಧಿಸಲಾಗಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.