Muda ಹಗರಣ: ಲೋಕಾಯುಕ್ತಕ್ಕೆ ಪ್ರದೀಪ್ ಕುಮಾರ್ ದೂರು…!

ಮೈಸೂರು:

   ಮುಡಾ ಹಗರಣ ಪ್ರಕಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಅಸ್ತು ಎಂದ ಬೆನ್ನಲ್ಲೇ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಡಾ. ಯತೀಂದ್ರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ದೂರುದಾರರಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ ಅವರು ಬುಧವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

   ಜೆಡಿಎಸ್ ಮುಖಂಡರ ಜೊತೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿದ ಪ್ರದೀಪ್ ಕುಮಾರ್ ಅವರು, ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಮೇಲೆ ಎಫ್‌ಐಆರ್ ಹಾಕಬೇಕು ಎಂದು ದೂರು ನೀಡಿದರು.ಇದೇ ವೇಳೆ ಈ ಹಿಂದಿನ ದೂರುಗಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಹಿಂಬರಹ ನೀಡುವಂತೆ ಪ್ರದೀಪ್ ಕುಮಾರ್ ಒತ್ತಾಯಿಸಿದರು. ಆದರೆ, ಈಗ ಕೊಡಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಹಿಂಬರಹ ಕೊಡುತ್ತೇನೆ ಎಂದು ಲೋಕಾಯುಕ್ತ ಎಸ್‌ಪಿ ತಿಳಿಸಿದ್ದು, ಇದಕ್ಕೆ ಪ್ರದೀಪ್ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

   ಕಾನೂನು ತಜ್ಞರ ಸಲಹೆ ಪಡೆದು ಹಿಂಬರಹ ನೀಡುತ್ತೇವೆ‌‌. ಇದುವರೆಗಿನ ತನಿಖಾ ವರದಿಯ ಕುರಿತು ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ನಾನು ಇನ್ನು 3 ದಿನ ಬಿಟ್ಟು ಮತ್ತೆ ಮೈಸೂರಿಗೆ ಬರುತ್ತೇನೆ. ಮೂರು ದಿನದಲ್ಲಿ ಉತ್ತರ ಬಾರದೆ ಇದ್ದರೆ ಮೈಸೂರು ಲೋಕಾಯುಕ್ತ ಎಸ್ ಪಿ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ. ನಮ್ಮ ದೂರಿಗೆ ಹಿಂಬರಹ ನೀಡಲು ಇಷ್ಟೊಂದು ಸಮಯ ಕೇಳುತ್ತಿದ್ದಾರೆ. ಇನ್ನು ತನಿಖೆ ಯಾವ ರೀತಿ ಮಾಡುತ್ತಾರೆ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

   17ಎ ಅಡಿಯಲ್ಲಿ ತನಿಖಾಧಿಕಾರಿ ಸ್ವತಂತ್ರವಾಗಿ ತನಿಖೆ ಮಾಡಬಹುದು ಎಂದು ಹೇಳಲಾಗಿದೆ. ಈ ಅಂಶದ ಆಧಾರದ ಮೇಲೆ ನನ್ನ ದೂರಿನ ಅನ್ವಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಬಹುದು. ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ಲೋಕಾಯುಕ್ತ ಅಧಿಕಾರಿಗಳ ನಡೆಯನ್ನ ಗಮನಿಸಿದರೆ ಸಿಎಂ ಅವರ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ. ನಾನು ಈ ಬಗ್ಗೆ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸುವ ಚಿಂತನೆಯಲ್ಲಿದ್ದೇನೆಂದು ತಿಳಿಸಿದರು.

Recent Articles

spot_img

Related Stories

Share via
Copy link