ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ ನಿಂದ ಹೊಸ ಮಾರ್ಗದಲ್ಲಿ ಸೇವೆ ಆರಂಭ

ಬೆಂಗಳೂರು

    ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾನುವಾರ ಬೆಂಗಳೂರು ಮತ್ತು ಶ್ರೀ ವಿಜಯ ಪುರಂ (ಪೋರ್ಟ್ ಬ್ಲೇರ್) ನಡುವೆ ದೈನಂದಿನ ನೇರ ವಿಮಾನಯಾನ ಸೇವೆಯನ್ನು ಪ್ರಾರಂಭಿಸಿದೆ. ಮೊದಲ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಬೆಳಿಗ್ಗೆ 10:50 ಕ್ಕೆ ಪ್ರಯಾಣ ಬೆಳೆಸಿದೆ.

   ಬೆಂಗಳೂರಿನಿಂದ ಬೆಳಗ್ಗೆ 10:50ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 1:15ಕ್ಕೆ ಶ್ರೀ ವಿಜಯ ಪುರಂನಲ್ಲಿ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 1:50 ಕ್ಕೆ ಶ್ರೀ ವಿಜಯ ಪುರಂನಿಂದ ಟೇಕ್ ಆಫ್ ಆಗುವ ವಿಮಾನ, ಸಂಜೆ 4:20 ಕ್ಕೆ ಬೆಂಗಳೂರು ತಲುಪಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

   ಇದರೊಂದಿಗೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ. ಸಂಸ್ಥೆಯು ನಗರದಿಂದ 374 ವೀಕ್ಲಿ ಫ್ಲೈಟ್​​ಗಳನ್ನು ನಿರ್ವಹಿಸುತ್ತಿದೆ. 25 ದೇಶೀಯ ಮತ್ತು ಪಶ್ಚಿಮ ಏಷ್ಯಾದ ಪ್ರದೇಶಗಳಾದ ಅಬುಧಾಬಿ ಮತ್ತು ದಮ್ಮಾಮ್ ಅನ್ನು ಸಂಪರ್ಕಿಸುವ 2 ವಿಮಾನಯಾನ ಸೇವೆಯನ್ನ ಸಂಸ್ಥೆ ಒದಗಿಸುತ್ತಿದೆ. 

    ದಕ್ಷಿಣ ಅಂಡಮಾನ್ ದ್ವೀಪದಲ್ಲಿರುವ ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ರಾಜಧಾನಿಯಾಗಿದೆ. ಇದು ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ಪ್ರದೇಶವಾಗಿದೆ. ದ್ವೀಪದ ಸಮುದ್ರ ತೀರದಲ್ಲಿರುವ ಸೆಲ್ಯುಲಾರ್ ಜೈಲ್ ಬ್ರಿಟಿಷ್ ವಸಾಹತು ಕಾಲದ ಕುರುಹುಗಳನ್ನು ಹೊಂದಿದ್ದು, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಅಲ್ಲಿ ಇರಿಸಲಾಗುತ್ತಿತ್ತು. ಅಲ್ಲಿ ನೀಡುತ್ತಿದ್ದ ಕಾಲಾ ಪಾನಿ ಅಥವಾ ಕರಿನೀರ ಶಿಕ್ಷೆ ಬಗ್ಗೆ ಇಂದಿಗೂ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರನ್ನೂ ಇದೇ ಜೈಲಿನಲ್ಲಿ ಇರಿಸಲಾಗಿತ್ತು. ಸದ್ಯ ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ಇದಲ್ಲದೆ ಇನ್ನೂ ಅನೇಕ ಪ್ರವಾಸಿ ತಾಣಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿವೆ. 

    ಕರ್ನಾಟಕದಿಂದಲೂ ಸಾವಿರಾರು ಪ್ರವಾಸಿಗರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ಪ್ರವಾಸ ತೆರಳುತ್ತಾರೆ. ಇದೀಗ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನಯಾನ ಸೇವೆ ಆರಂಭಿಸಿರುವುದರಿಂದ ರಾಜ್ಯದ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ.

Recent Articles

spot_img

Related Stories

Share via
Copy link