ಊಹಾಪೋಹಗಳಿಗೆ ತೆರೆ ಎಳೆದ ರೋಹಿತ್ ಶರ್ಮಾ

ಸಿಡ್ನಿ:

   ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಸರಣಿ ಸಾಗುತ್ತಿದ್ದಂತೆ ಭಾರತ ತಂಡದೊಳಗಿನ ಆಂತರಿಕ ಸಂಘರ್ಷ ಹೆಚ್ಚಾಗಿದೆ. ಈ ನಡುವೆ ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಅವರು ಸ್ಪಷ್ಟನೆ ನೀಡಿದ್ದಾರೆ.ಕಳಪೆ ಫಾರ್ಮ್‌ ನಿಂದಾಗಿ ಸಿಡ್ನಿ ಟೆಸ್ಟ್‌ ಪಂದ್ಯದಿಂದ ನಾಯಕ ರೋಹಿತ್‌ ಶರ್ಮಾ ಅವರು ಹೊರಗುಳಿದಿದ್ದು, ಜಸ್ಪ್ರೀತ್‌ ಬುಮ್ರಾ ಅವರು ನಾಯಕತ್ವ ವಹಿಸಿಕೊಂಡಿದ್ದಾರೆ.

   ಈ ನಡುವೆ ಮೆಲ್ಬರ್ನ್‌ ಪಂದ್ಯವೇ ರೋಹಿತ್‌ ಅವರ ಅಂತಿಮ ಪಂದ್ಯವಾಗಿರಲಿದೆ ಎಂದು ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ರೋಹಿತ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತರೆ ಎಳೆದಿದ್ದಾರೆ.

   ನಾನಾಗಿಯೇ ಪಂದ್ಯದಿಂದ ಹೊರಗುಳಿದೆ, ಕೋಚ್ ಮತ್ತು ಆಯ್ಕೆದಾರರೊಂದಿಗೆ ನಡೆಸಿದ ಮಾತುಕತೆ ತುಂಬಾ ಸರಳವಾಗಿತ್ತು. ನಾನು ಬ್ಯಾಟ್‌ನಿಂದ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾನು ಫಾರ್ಮ್‌ನಲ್ಲಿಲ್ಲ. ಇದು ಪ್ರಮುಖ ಪಂದ್ಯ, ನಮಗೆ ಗೆಲುವಿನ ಅಗತ್ಯವಿತ್ತು. ಅನೇಕ ಆಟಗಾರರು ನನ್ನ ನಿರ್ಧಾರವನ್ನು ಬೆಂಬಲಿಸಲಿಲ್ಲ. ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು. ನಿರ್ಣಾಯಕ ಪಂದ್ಯಕ್ಕೆ ನಮಗೆ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರನ ಅಗತ್ಯವಿತ್ತು. ಹೀಗಾಗಿ ನಾನು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಸದ್ಯ ತಂಡಕ್ಕೆ ಏನು ಬೇಕು ಎಂಬುದೇ ನನ್ನ ಮತ್ತು ತಂಡದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

   ನಾವು ಸಿಡ್ನಿಗೆ ಬಂದ ನಂತರ, ತಂಡದಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡೆ. ಬ್ಯಾಟ್‌ನಿಂದ ಹೆಚ್ಚು ರನ್ ಗಳಿಸದ ಕಾರಣ ನಾನು ಹಿಂದೆ ಸರಿಯುವುದು ಮುಖ್ಯ ಎಂದು ನನ್ನ ಮನಸ್ಸಿನಲ್ಲಿತ್ತು. ಪರ್ತ್‌ ಟೆಸ್ಟ್‌ ಪಂದ್ಯವನ್ನು ನಾವು ಹೇಗೆ ಗೆದ್ದೆವು ಎಂಬುದು ಸ್ಪಷ್ಟವಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ನಮಗೆ 200 ರನ್‌ ಆರಂಭಿಕ ಜೊತೆಯಾಟ ಸಿಕ್ಕಿತು. ಅದುವೇ ನಮಗೆ ಪಂದ್ಯ ಗೆಲ್ಲಲು ನೆರವಾಯ್ತು. ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ನಿಜವಾಗಿಯೂ ಉತ್ತಮವಾಗಿ ಆಡಿದರು. ಮುಂದಿನ 6 ತಿಂಗಳು ಅಥವಾ 4 ತಿಂಗಳುಗಳಲ್ಲಿ ಏನಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಯಾವಾಗಲೂ ವಾಸ್ತವದಲ್ಲಿ ಇರುತ್ತೇನೆ. ಈ ಕ್ಷಣಕ್ಕೆ ಏನು ಮಾಡಬೇಕೆಂದು ಯೋಚಿಸುತ್ತೇನೆಂದು ತಿಳಿಸಿದರು.

   ಇದೇ ವೇಳೆ ನಿವೃತ್ತಿ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು, ಇದು ನಿವೃತ್ತಿಯ ನಿರ್ಧಾರವಲ್ಲ. ನಾನು ಫಾರ್ಮ್‌ನಲ್ಲಿ ಇಲ್ಲದ ಕಾರಣ ಸದ್ಯ ಆಟದಿಂದ ಹೊರಗಿದ್ದೇನೆ. ಜೀವನವು ಪ್ರತಿದಿನ ಬದಲಾಗುತ್ತದೆ. ಹೀಗಾಗಿ ಫಾರ್ಮ್‌ ಸಮಸ್ಯೆ ಶೀಘ್ರದಲ್ಲೇ ಸರಿ ಹೋಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಸದಾ ನಾನಾಗಿರುತ್ತೇನೆ. ವಾಸ್ತವಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

   ನಾನು ಸಂವೇದನಾಶೀಲ, ಪ್ರಬುದ್ಧ ಹಾಗೂ ಇಬ್ಬರು ಮಕ್ಕಳ ತಂದೆ. ಹೀಗಾಗಿ ಯಾವಾಗ ಏನು ಮಾಡಬೇಕೆಂದು ನನಗೆ ಸ್ಪಷ್ಟವಾಗಿ ಗೊತ್ತು. ಭಾರತ ತಂಡಕ್ಕೆ ಏನು ಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ನಾವು ಅದನ್ನು ತಂಡ ಎಂದು ಕರೆಯುತ್ತೇವೆ. ಹೀಗಾಗಿ ತಂಡಕ್ಕೆ ಏನು ಬೇಕು ಎಂಬುದರ ಕುರಿತು ಯಾವಾಗಲೂ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಇದು ನನ್ನ ವೈಯಕ್ತಿಕ ಆಲೋಚನೆ. ನಾನು ನನ್ನ ಕ್ರಿಕೆಟ್ ಬದುಕಿನಲ್ಲಿ ಹೀಗೆಯೇ ಆಡುತ್ತಾ ಬಂದಿದ್ದೇನೆ. ಕ್ರಿಕೆಟ್‌ ಹೊರತಾಗಿಯೂ ನಾನು ಹೀಗೆಯೇ ಇದ್ದೇನೆ. ಒಬ್ಬ ವ್ಯಕ್ತಿಯಾಗಿ ನಾನು ತುಂಬಾ ಪಾರದರ್ಶಕ ಮನುಷ್ಯ ಎಂದರು.

   ಬುಮ್ರಾ ಒಬ್ಬ ಅದ್ಭುತ ಆಟಗಾರ. 2013ರಲ್ಲಿ ನಾನು ಅವರನ್ನು ಮೊದಲ ಬಾರಿಗೆ ನೋಡಿದಂದಿನಿಂದ ಅವರ ಅಂಕಿ-ಅಂಶಗಳ ಗ್ರಾಫ್ ನಿಜವಾಗಿಯೂ ಎತ್ತರಕ್ಕೆ ಹೋಗಿದೆ. ನಾಯಕತ್ವದಲ್ಲಿ ಪ್ರತಿದಿನವೂ ಒಳ್ಳೆಯ ದಿನ ಆಗಿರುವುದಿಲ್ಲ. ಆಲೋಚನೆಗಳು ಮತ್ತು ಮನಸ್ಥಿತಿ ಒಂದೇ ಆಗಿರಬಹುದು. ಆದರೆ, ಕೆಲವೊಮ್ಮೆ ಫಲಿತಾಂಶ ನಮ್ಮ ಪರವಾಗಿ ಕಾರ್ಯನಿರ್ವಹಿಸುವುದಿಲ್ಲ. ಬಹಳಷ್ಟು ಜನರು ನಮ್ಮನ್ನು ನಿರ್ಣಯಿಸುತ್ತಾರೆ ಎಂದು ನಮಗೆ ತಿಳಿದಿದೆ. ಆದರೆ, ನಾನು ನನ್ನನ್ನು ಎಂದಿಗೂ ಅನುಮಾನಿಸುವುದಿಲ್ಲ. ನಾವೆಲ್ಲರೂ ಗೆಲ್ಲುವ ಮನಸ್ಥಿತಿಯೊಂದಿಗೆ ಆಡುತ್ತೇವೆ ಎಂದರು.

Recent Articles

spot_img

Related Stories

Share via
Copy link