ಕನಕಪುರ:
ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕನಕಪುರ ತಾಲ್ಲೂಕಿನ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ನನ್ನ ಕ್ಷೇತ್ರಕ್ಕೆ ಸುಮಾರು ರೂ.400 ಕೋಟಿಗಳಷ್ಟು ಅನುದಾನ ತಂದಿದ್ದೇನೆ. ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ, ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. ರೂ.250 ಕೋಟಿ ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ” ಎಂದರು.
ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದ ವರೆಗೆ ಸುಮಾರು ರೂ.13 ಕೋಟಿ ವೆಚ್ಚದಲ್ಲಿ ರಸ್ತೆ, ದೊಡ್ಡಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ವೆಚ್ಚದಲ್ಲಿ ರೂ.14.5 ಕಿಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ” ಎಂದು ಹೇಳಿದರು.
ಕನಕಪುರ, ಸಾತನೂರು, ದೊಡ್ಡ ಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ ಇಂದು ಕೆಲಸವನ್ನು ಮಾಡಿ ತೋರಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ ಎಂದು ರೂ.135 ಕೋಟಿ, ಹೊಸಕೆರೆ ತುಂಬಿಸಲು ರೂ.108 ಕೋಟಿ ಖರ್ಚು ಮಾಡಲಾಗುತ್ತಿದೆ.
ಚೀನಾದಿಂದ ರೇಷ್ಮೆ ಆಮದು ಕಡಿಮೆಯಾಗಿದೆ. ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಸಹ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆ ಹೆಚ್ಚಲಿದೆ. ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ” ಎಂದರು.
ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ” ಎಂದರು.
ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಅವರು ಹಾಗೂ ಕುಲದೀಪ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು. ಈ ಸಂದರ್ಭದಲ್ಲಿ ನನಗೆ ಉಂಟಾದ ಸಮಾಧಾನಕ್ಕಿಂತ ಹೆಚ್ಚು ಸಮಾಧಾನವಾಗುತ್ತಿದೆ. ಏಕೆಂದರೆ ಕಾವೇರಿ ಸಂಗಮದಿಂದ ನೀರು ತಂದು ಈ ಭಾಗದ 21 ಕೆರೆಗಳಿಗೆ ತುಂಬಿಸುವ ಯೋಜನೆ ನನಗೆ ತೃಪ್ತಿ ನೀಡುತ್ತಿದೆ” ಎಂದು ಹೇಳಿದರು.
ರೈತರ ಬದುಕನ್ನು ಹಸನು ಮಾಡಬೇಕು ಎಂದು ಸರ್ಕಾರದ ಮೇಲೆ ಪ್ರಭಾವ ಬೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಅಂದಿನ ಹೋಬಳಿ ಉಳಿಸಿ ಹೋರಾಟ ಇಂದಿಗೆ ಫಲ ಕೊಟ್ಟಿದೆ” ಎಂದರು.ಕ್ಷೇತ್ರದ ಅನೇಕ ವಿದ್ಯಾವಂತ ಯುವಕರಿಗೆ ಅನೇಕ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸಲಾಗಿದೆ. ಇನ್ನೂ ಬಾಕಿ ಇದ್ದರೆ ಅವರಿಗೂ ಕೆಲಸ ಕೊಡಿಸಲಾಗುವುದು” ಎಂದರು.








