ಬೆಂಗಳೂರು :
ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ದರ್ಶನ್ ಅವರ ಈ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕಾಕತಾಳೀಯ ಎಂಬಂತೆ ಸುಮಲತಾ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ಗಳಲ್ಲಿ ಮಾರ್ಮಿಕವಾಗಿ ಪೋಸ್ಟ್ಗಳನ್ನು ಮಾಡುತ್ತಾ ಬಂದರು. ಈ ಎರಡೂ ಬೆಳವಣಿಗೆ ಮಧ್ಯೆ ಲಿಂಕ್ ಮಾಡಲಾಯಿತು. ದರ್ಶನ್ ಹಾಗೂ ಸುಮಲತಾ ಸಂಬಂಧ ಹಾಳಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಈಗ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’ ಎಂದಿದ್ದಾರೆ.
ದರ್ಶನ್ ಅವರು ಸುಮಲತಾ ಅವರನ್ನು ಮಾತ್ರವಲ್ಲ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಬೇಕು ಎಂದು ಸುಮಲತಾ ಒತ್ತಿ ಹೇಳಿದ್ದಾರೆ. ‘ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದರೆ ಸಂಬಂಧ ಹಾಳಾಗುತ್ತದೆಯೇ? ಈ ವಿಚಾರವನ್ನು ಕೇಳಿ ನಗಬೇಕಾ, ಬೇಸರಗೊಳ್ಳಬೇಕಾ ಗೊತ್ತಾಗುತ್ತಿಲ್ಲ’ ಎಂದು ಟಿವಿ9ಗೆ ಸುಮಲತಾ ಎಕ್ಸ್ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
‘ನನ್ನ ಕೊನೆಯ ಉಸಿರು ಇರುವವರೆಗೂ ದರ್ಶನ್ ನನ್ನ ಮಗನೇ. ದರ್ಶನ್ನ ಗುರಿಯಾಗಿಸಿಕೊಂಡು ನಾನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಲ್ಲ. ದರ್ಶನ್ ಇನ್ಸ್ಟಾಗ್ರಾಂನಲ್ಲಿ ಯಾರನ್ನೂ ಸಹ ಫಾಲೋ ಮಾಡುತ್ತಿಲ್ಲ. ವಿನೀಶ್ನನ್ನು ಕೂಡ ಅನ್ಫಾಲೋ ಮಾಡಿದ್ದಾರೆ’ ಎಂದಿದ್ದಾರೆ ಸುಮಲತಾ.
‘ಎಲ್ಲರೂ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಅನ್ನಿಸುತ್ತದೆ. ಆದರೆ, ನಾನು ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ. ಸೋಶಿಯಲ್ ಮೀಡಿಯಾ ಯೂಸ್ಫುಲ್ ಟೂಲ್. ಅದೇ ರೀತಿ ಇದು ಡೇಂಜರಸ್ ವೆಪನ್ ಕೂಡ ಹೌದು’ ಎಂದು ಸುಮಲತಾ ಹೇಳಿದ್ದಾರೆ.
‘ನನ್ನ ಸಾಮಾಜಿಕ ಖಾತೆಯಲ್ಲಿ ದರ್ಶನ್ನ ಫಾಲೋ ಮಾಡ್ತಿದ್ದೇನೆ. ನಾನು ಯಾರನ್ನೋ ಗುರಿಯಾಗಿಸಿ ಪೋಸ್ಟ್ ಮಾಡಿರಲಿಲ್ಲ. ನಾನು ಹಾಕಿದ್ದ ಪೋಸ್ಟ್ಗೂ ದರ್ಶನ್ಗೂ ಸಂಬಂಧವಿಲ್ಲ. ಇದೊಂದು ಸಿಲ್ಲಿ ವಿಚಾರ ಎಂದು ನನಗೆ ಅನಿಸುತ್ತದೆ. ನಮ್ಮ ಪ್ರೀತಿ ವಿಶ್ವಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನನ್ನ ಜೀವನದಲ್ಲಿ ಋಣಾತ್ಮಕ ಚಿಂತನೆಗಳಿಗೆ ಜಾಗವಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದವರಿಗೂ ಒಳ್ಳೆಯದಾಗಲಿ ಎಂದು ಬಯಸುವವನು ನಾನು. ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ’ ಎಂದು ಅವರು ಹೇಳಿದ್ದಾರೆ.
