ಪಾಕಿಸ್ತಾನ ನಮ್ಮ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ: ಪ್ರಧಾನಿ ಮೋದಿ

ನವದೆಹಲಿ:

    ಅಮೆರಿಕ ಮೂಲದ ಖ್ಯಾತ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಕ್ಷುಬ್ಧ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.ಪಾಕಿಸ್ತಾನವು ಸಾಮರಸ್ಯದ ಸಹಬಾಳ್ವೆಯನ್ನು ಬಯಸುತ್ತಿಲ್ಲ. ಬದಲಾಗಿ ಭಾರತದ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ. ಈ ಪರಿಸ್ಥಿತಿಯು ಸಿದ್ಧಾಂತಗಳಲ್ಲಿನ ವ್ಯತ್ಯಾಸಗಳಿಂದಲ್ಲ, ಬದಲಾಗಿ ಭಯೋತ್ಪಾದಕ ಮನಸ್ಥಿತಿಯಿಂದಾಗಿ ನಡೆಯುತ್ತಿದೆ ಎಂದು ಮೋದಿ ಹೇಳಿದರು.

   ಎರಡೂ ರಾಷ್ಟ್ರಗಳು ಶಾಂತಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದೇ? ಎಂದು ಲೆಕ್ಸ್ ಫ್ರಿಡ್‌ಮನ್ ಅವರು ಕೇಳಿದರು. ಇದ್ದಕ್ಕೆ ಉತ್ತರಿಸಿದ ಮೋದಿ, ಭಾರತ, ಪಾಕ್‌ ವಿಭಜನೆ ಕಥೆ ಮತ್ತು ನಂತರದ ರಕ್ತಪಾತದ ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಂಡರು.

   ಭಾರವಾದ ಹೃದಯದೊಂದಿಗೆ ಭಾರತೀಯರು ನೋವಿನ ವಾಸ್ತವವನ್ನು ಒಪ್ಪಿಕೊಂಡರು. ಗಾಯಗೊಂಡ ಜನರು ಮತ್ತು ಶವಗಳಿಂದ ತುಂಬಿದ ರೈಲುಗಳು ಪಾಕಿಸ್ತಾನದಿಂದ ಬರತೊಡಗಿತು. ಅದು ಭಯಾನಕ ದೃಶ್ಯವಾಗಿತ್ತು. ತಮ್ಮದೇ ಆದ ದಾರಿಯನ್ನು ಕಂಡುಕೊಂಡ ನಂತರ ಅವರು ಬದುಕುತ್ತಾರೆ ಮತ್ತು ಬದುಕಲು ಬಿಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ಸಾಮರಸ್ಯದ ಸಹಬಾಳ್ವೆಯನ್ನು ಆಯ್ಕೆ ಮಾಡಲಿಲ್ಲ ಎಂದು ಉತ್ತರಿಸಿದರು.

   ಕಾಲ ಕಳೆದರೂ, ರಕ್ತಪಾತ ಮತ್ತು ಭಯೋತ್ಪಾದನೆಯಿಂದ ಅಭಿವೃದ್ಧಿ ಹೊಂದುವ ಸಿದ್ಧಾಂತದಿಂದ ಉತ್ತೇಜಿಸಲ್ಪಟ್ಟ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ಮುಂದುವರೆಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಭಾರತ ಹಾಗೂ ಪಾಕಿಸ್ತಾನ ಸಂಬಂಧಗಳನ್ನು ಸುಧಾರಿಸಲು ಮನಸ್ಥಿತಿಯಲ್ಲಿ ಬದಲಾವಣೆ ಮತ್ತು ಫಲಪ್ರದ ಸಂಭಾಷಣೆಯ ಅಗತ್ಯವಿದೆ. ಪಾಕಿಸ್ತಾನ ಈಗ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿದೆ ಎಂದು ಮೋದಿ ಹೇಳಿದ್ದಾರೆ..

   ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಾರೆ ಎಂದು ನಾನು ನಂಬುತ್ತೇನೆ. ಏಕೆಂದರೆ ಅವರು ಸಹ ಕಲಹ ಮತ್ತು ಅಶಾಂತಿಯಲ್ಲಿ ಬದುಕಲು ಬೇಸತ್ತಿರಬೇಕು, ಮುಗ್ಧ ಮಕ್ಕಳನ್ನು ಸಹ ಕೊಲ್ಲುವ ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ನಾಶಮಾಡುವ ನಿರಂತರ ಭಯೋತ್ಪಾದನೆಯಿಂದ ಅವರು ಬೇಸತ್ತಿರಬೇಕು ಎಂದು ಮೋದಿ ಹೇಳಿದರು.

   ಇದು ಸಿದ್ಧಾಂತದ ವಿಷಯವಲ್ಲ, ಬದಲಾಗಿ ರಕ್ತಪಾತದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಭಯೋತ್ಪಾದನೆಯನ್ನು ರಫ್ತು ಮಾಡಲು ಒಂದು ಆಯ್ಕೆಯಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

   ಸೆಪ್ಟೆಂಬರ್ 11 ರಂದು ಅಮೆರಿಕದಲ್ಲಿ ನಡೆದ ದಾಳಿಯ ಉದಾಹರಣೆ ನೀಡಿದ ಮೋದಿ, “ಇದರ ಹಿಂದಿನ ಪ್ರಮುಖ ಸೂತ್ರಧಾರ ಒಸಾಮಾ ಬಿನ್ ಲಾಡೆನ್. ಅವನು ಅಂತಿಮವಾಗಿ ಎಲ್ಲಿದ್ದನು? ಅವನು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದನು. ಒಂದು ರೀತಿಯಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನಸ್ಥಿತಿ ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿದೆ ಎಂದು ಜಗತ್ತು ಗುರುತಿಸಿದೆ ಎಂದರು.

   ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ಸುಧಾರಿಸಲು ತಾವು ಮಾಡಿದ ಪ್ರಯತ್ನಗಳನ್ನು ಹಂಚಿಕೊಂಡ ಮೋದಿ, ಶಾಂತಿಯನ್ನು ಅರಸುತ್ತಾ ನಾನು ವೈಯಕ್ತಿಕವಾಗಿ ಲಾಹೋರ್‌ಗೆ ಪ್ರಯಾಣ ಬೆಳೆಸಿದ್ದೆ. ನಾನು ಪ್ರಧಾನಿಯಾದಾಗ ಪಾಕಿಸ್ತಾನವನ್ನು ನನ್ನ ಪ್ರಮಾಣವಚನ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಿದ್ದೆ. ಈ ಪ್ರಯತ್ನದಿಂದ ನಾವು ಹೊಸ ಪುಟವನ್ನು ತೆರೆಯಬಹುದು ಎಂದು ಆಶಿಸಿದ್ದೆ. ಪಾಕಿಸ್ತಾನವನ್ನು ಆಹ್ವಾನಿಸುವ ಮೂಲಕ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಜಗತ್ತಿಗೆ ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಿತು. ಆದರೆ ನಮಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಬೇಸರ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link