ವೈಷ್ಣೋದೇವಿ ದೇಗುಲಕ್ಕೆ ಪಿಸ್ತೂಲ್‌ ತಂದ ದೆಹಲಿ ಮಹಿಳೆಯ ಬಂಧನ

ಶ್ರೀನಗರ:

     ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇಗುಲದಲ್ಲಿ  ದೆಹಲಿಯ ಮಹಿಳಾ ಯಾತ್ರಿಕರೊಬ್ಬರ ಬಳಿ ಇದ್ದ ಪಿಸ್ತೂಲ್‌ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದರು. ಆರೋಪಿಯನ್ನು ಜ್ಯೋತಿ ಗುಪ್ತಾ ಎಂದು ಗುರುತಿಸಲಾಗಿದ್ದು, ಆಕೆ ತನನ್ನು ತಾನು ನಿವೃತ್ತ ಪೊಲೀಸ್‌ ಕಾನ್ಸ್ಟೇಬಲ್‌ ಎಂದು ಹೇಳಿಕೊಂಡಿದ್ದಾರೆ. ಮಾರ್ಚ್ 14-15ರ ಮಧ್ಯರಾತ್ರಿ ‘ಭವನ್ ಬಳಿಯ ಚೆಕ್‌ಪಾಯಿಂಟ್‌ನಲ್ಲಿ ಆಕೆಯ ಬಳಿ ಇದ್ದ ಪಿಸ್ತೂಲ್‌ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

   ಗುಪ್ತಾ ಬಳಿ ಪತ್ತೆಯಾದ ಬಂದೂಕಿನ ಪರವಾನಗಿ ಎರಡು ವರ್ಷಗಳ ಹಿಂದೆಯೇ ಅವಧಿ ಮೀರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ರೀತಿಯ ಘಟನೆ ಸೋಮವಾರ ಕೂಡ ನಡೆದಿತ್ತು. ಸೋಮವಾರ ಭವನ ಬಳಿ ಉತ್ತರ ಪ್ರದೇಶದ ಯಾತ್ರಿಕ ಸಂಜಯ್ ಸಿಂಗ್ ಎಂಬ ವ್ಯಕ್ತಿಯ ಚೀಲದಲ್ಲಿ ಎರಡು ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿದ್ದವು. ನಂತರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ವೈಷ್ಣೋ ದೇವಿ ಯಾತ್ರಾ ಸ್ಥಳದ ಬಳಿ ಮದ್ಯ ಸೇವನೆ ಮಾಡಿರುವ ಆರೋಪದ ಮೇಲೆ ಸೋಶಿಯಲ್‌ ಮೀಡಿಯಾ ಸ್ಟಾರ್‌ ಓರ್ಹಾನ್ ಅವತ್ರಮಣಿ, ಅಲಿಯಾಸ್ ಓರ್ರಿ   ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾನುವಾರ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಓರ್ರಿ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವೈಷ್ಣೋದೇವಿ ಯಾತ್ರಾ ಸ್ಥಳದಲ್ಲಿ ಕಟ್ಟುನಿಟ್ಟಾಗಿ ಮದ್ಯ ಹಾಗೂ ಮಾಂಸಹಾರವನ್ನು ನಿಷೇಧಿಸಲಾಗಿದೆ. 

  ಹೋಟೆಲ್ ಆಫ್ ಕತ್ರಾದಲ್ಲಿ ತಂಗಿದ್ದ ಕೆಲವು ಅತಿಥಿಗಳು ಮದ್ಯ ಸೇವಿಸುತ್ತಿರುವುದು ಕಂಡುಬಂದಿರುವ ಬಗ್ಗೆ ಬಂದಿರುವ ದೂರನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 15 ರಂದು ಓರ್ಹಾನ್ ಅವತ್ರಮಣಿ  , ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಾಶಿ ದತ್ತಾ, ರಕ್ಷಿತಾ ಭೋಗಲ್, ಶಗುನ್ ಕೊಹ್ಲಿ ಮತ್ತು ಅನಸ್ತಾಸಿಲಾ ಅರ್ಜಮಸ್ಕಿನಾ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ವೈಷ್ಣೋ ದೇವಿ ಯಾತ್ರಾ ಸ್ಥಳದ ಬಳಿ ಮದ್ಯ ಮತ್ತು ಮಾಂಸಾಹಾರಿ ಆಹಾರವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದ್ದರೂ ಇವರ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ. ಈ ವರೆಗೂ ಓರ್ರಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Recent Articles

spot_img

Related Stories

Share via
Copy link