ಚೆನ್ನೈ:
ಭಾರತ ತಂಡದ ಮಾಜಿ ಆಟಗಾರ ಎಂ.ಸ್. ಧೋನಿ ಅವರ ಐಪಿಎಲ್ ನಿವೃತ್ತಿ ಕುರಿತು ಹಲವು ಬಾರಿ ಚರ್ಚೆಗಳು ನಡೆದಿವೆ. ಇದೀಗ ನಿವೃತ್ತಿ ಬಗ್ಗೆ ಸ್ವತಃ ಧೋನಿಯೇ ಸುಳಿವು ನೀಡಿದ್ದು, ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಆಗುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾರಣ ಬುಧವಾರದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಧೋನಿ ಆಡಿದ ಮಾತುಗಳು. ಹೌದು ಧೋನಿ ಟಾಸ್ ವೇಳೆ “ನಾನು ಮುಂದಿನ ಪಂದ್ಯ ಆಡುತ್ತೇನೋ ಇಲ್ಲವೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಶೀಘ್ರದಲ್ಲೇ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸುವ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಧೋನಿ 2023ರ ಫೈನಲ್ ಗೆದ್ದ ಬಳಿಕ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2024ರ ಆವೃತ್ತಿಯಲ್ಲಿ ಆಡಿದ್ದರು. ಹೀಗಾಗಿ ಧೋನಿ 2024ರ ಆವೃತ್ತಿಯಲ್ಲಿ ಆಡಿ ನಿವೃತ್ತಿ ಘೋಷಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಸಿಸಿಐ ಧೋನಿಗೆ 2025ರ ಆವೃತ್ತಿಯಲ್ಲಿ ಆಡುವಂತೆ ಮನವಿ ಮಾಡಿತ್ತು. ಜತೆಗೆ ಧೋನಿಗಾಗಿ ಬಿಸಿಸಿಐ ಹರಾಜಿಗೂ ಮುನ್ನ ಕೆಲ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಈಗಾಗಲೇ ಚೆನ್ನೈ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇನ್ನುಳಿದ 4ರಲ್ಲಿ ಗೆದ್ದರೂ ಒಟ್ಟು 6 ಪಂದ್ಯ ಗೆದ್ದಂತಾಗುತ್ತದೆ. ಹೀಗಾಗಿ ತಂಡ ಹೊರಬಿದ್ದಿದೆ. ಮೇ 12 ರಂದು ಚೆನ್ನೈ ತಂಡ ರಾಜಸ್ಥಾನ್ ವಿರುದ್ಧ ತವರಿನಲ್ಲಿ ಕೊನೆಯ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಧೋನಿ ತವರಿನ ಅಭಿಮಾನಿಗಳ ಮುಂದೆ ತಮ್ಮ ನಿವೃತ್ತಿ ಪ್ರಕಟಿಸುವ ಸಾಧ್ಯತೆ ಇದೆ.
