ನವದೆಹಲಿ:
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಾಗಿರುವ ಉದ್ವಿಗ್ನತೆ ಮಧ್ಯೆ ಬಾಬಾ ವಂಗಾ ಅವರು ಹೇಳಿರುವ ಭವಿಷ್ಯವಾಣಿಯೊಂದು ಭಾರಿ ಸುದ್ದಿ ಮಾಡುತ್ತಿದೆ. ಬಾಬಾ ವಂಗಾ ಅವರು ಹಲವು ದಶಕಗಳ ಹಿಂದೆಯೇ 2025ರಲ್ಲಿ ಏನೆಲ್ಲಾ ನಡೆಯುವ ಸಾಧ್ಯತೆ ಇದೆ ಎನ್ನುವ ಕುರಿತು ಭವಿಷ್ಯ ನುಡಿದಿದ್ದರು. ಇದರಲ್ಲಿ ಅವರು ಯುರೋಪಿಯನ್ ಯುದ್ಧವು ಮಾನವೀಯತೆಯ ಅವನತಿಯ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಬಲ್ಗೇರಿಯಾದಲ್ಲಿ 1911ರಲ್ಲಿ ಜನಿಸಿದ ವಾಂಗೆಲಿಯಾ ಪಾಂಡೇವಾ ಗುಶ್ಟೆರೋವಾ ಅವರು ಬಾಲ್ಯದಿಂದಲೂ ಕುರುಡರಾಗಿದ್ದರು. ಆದರೆ ಅವರು ನುಡಿದಿರುವ ಭವಿಷ್ಯವಾಣಿ ಬಹುತೇಕ ನಿಜವಾಗಿದೆ. ಹೀಗಾಗಿ ಬಾಬಾ ವಂಗಾ ಎಂದೇ ಕರೆಯಲ್ಪಡುವ ಅವರನ್ನು ಬಾಲ್ಕನ್ಸ್ನ ನಾಸ್ಟ್ರಾಡಾಮಸ್ ಎಂದು ಕರೆಯಲಾಗುತ್ತದೆ. 1996 ರಲ್ಲಿ ನಿಧನರಾಗಿರುವ ಇವರು ವಿಶ್ವದ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಅತೀಂದ್ರಿಯ ಶಕ್ತಿಯ ಮೂಲಕ ಬಾಬಾ ವಂಗಾ ಅವರು ಹಲವು ದಶಕಗಳ ಹಿಂದೆ ನುಡಿದಿರುವ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಯಲ್ಲಿದೆ. 2025ರಲ್ಲಿ ಯುರೋಪಿನಾದ್ಯಂತ ಉದ್ವಿಗ್ನತೆ ಹೆಚ್ಚಾಗುತ್ತದೆ ಎಂದು ಅವರು ಮೊದಲೇ ಮುನ್ಸೂಚನೆ ನೀಡಿದ್ದರು. 9/11 ದಾಳಿಗಳು, ಕೋವಿಡ್-19 ಸಾಂಕ್ರಾಮಿಕದಂತಹ ಘಟನೆಗಳ ಬಗ್ಗೆ ನಿಖರವಾಗಿ ನುಡಿದಿದ್ದ ಬಾಬಾ ವಂಗಾ 2025ರಲ್ಲಿ ಯುರೋಪಿಯನ್ ಖಂಡವನ್ನು ಆವರಿಸುವ ವಿನಾಶಕಾರಿ ಯುದ್ಧದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
2025ರ ಯುದ್ಧದಲ್ಲಿ ಭಾಗಿಯಾಗುವ ರಾಷ್ಟ್ರಗಳ ನಿರ್ದಿಷ್ಟ ವಿವರಗಳನ್ನು ಹಂಚಿಕೊಳ್ಳದ ಅವರು ಈ ಯುದ್ಧ ಯುರೋಪಿನ ಅಡಿಪಾಯವನ್ನೇ ಛಿದ್ರಗೊಳಿಸಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಇವರ ಈ ಭವಿಷ್ಯವಾಣಿಗೆ ತಕ್ಕುದಾಗಿ ಈಗ ಯೂರೋಪಿನ ವಿವಿಧ ಭಾಗಗಳಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿರುವುದು ಕಂಡುಬಂದಿದೆ. ಅಲ್ಲದೇ ಯುರೋಪಿಯನ್ ಯುದ್ಧವು ಮಾನವೀಯತೆಯ ಪತನದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿರುವ ವಂಗಾ ಅವರ ಆತಂಕಕಾರಿ ಭವಿಷ್ಯವಾಣಿಯ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ.
2025ರಲ್ಲಿ ಯುದ್ಧ ಮಾತ್ರವಲ್ಲ ಆರ್ಥಿಕ ಅಶಾಂತಿ, ಭೂಕಂಪಗಳ ಬಗ್ಗೆಯೂ ವಂಗಾ ಭವಿಷ್ಯ ನುಡಿದಿದ್ದರು. ವಿಶ್ವದ ಹಣಕಾಸು ವ್ಯವಸ್ಥೆಗಳು ಕುಸಿಯುತ್ತವೆ, ಇದು ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿರುವುದು ನಿಜವಾಗುತ್ತಿದೆ. ಯಾಕೆಂದರೆ ಈಗಾಗಲೇ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕಗಳು ಭವಿಷ್ಯದಲ್ಲಿ ಹೆಚ್ಚಿನ ರಾಷ್ಟ್ರಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವುದು ಖಚಿತವಾಗಿದೆ. ಹೀಗಾಗಿ ಇವರ ಭವಿಷ್ಯವಾಣಿಯು ಹೆಚ್ಚು ಪ್ರಸ್ತುತವಾಗಿದೆ.
2025ರ ನೈಸರ್ಗಿಕ ವಿಕೋಪಗಳ ಬಗ್ಗೆಯೂ ಮುನ್ಸೂಚನೆ ನೀಡಿರುವ ವಂಗಾ ಭೂಕಂಪಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಈಗಾಗಲೇ ಕಳೆದ ಮಾರ್ಚ್ನಲ್ಲಿ, ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ ಸಾಕಷ್ಟು ವಿನಾಶಕ್ಕೆ ಕಾರಣವಾಯಿತು. ಥೈಲ್ಯಾಂಡ್ ಕೂಡ ಇದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈಗಾಗಲೇ ಅರ್ಜೆಂಟಿನಾ, ಚಿಲಿಯಲ್ಲಿ ಭೂಕಂಪನ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ನಡುವೆ ಈಗ ಸುನಾಮಿ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಎಲ್ಲ ಘಟನೆಗಳು ವಂಗಾ ಅವರ ಭವಿಷ್ಯವಾಣಿಯನ್ನು ನಿಜವಾಗಿಸಿದೆ.
