ವೇದಿಕೆಯಲ್ಲೇ ಕನ್ನಡ ಪಾಠ ಮಾಡಿದ ರಶ್ಮಿಕಾ ಮಂದಣ್ಣ!

ಬೆಂಗಳೂರು:

     ನನಗೆ ಕನ್ನಡ ಬರಲ್ಲ, ನಾನು ಹೈದರಾಬಾದ್‌ನವಳು ಎಂಬ ಹೇಳಿಕೆಗಳ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಇದೀಗ ಚಿತ್ರವೊಂದರ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಪರಭಾಷೆಯ ಖ್ಯಾತ ನಟನಿಗೆ ಕನ್ನಡ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ ಕುಬೇರಾ ಬಿಡುಗಡೆಗೆ ಸಿದ್ಧವಾಗಿದೆ.

    ಸದ್ಯ ಈ ಚಿತ್ರದ ಪ್ರಚಾರ ಕಾರ್ಯಗಳು ಆರಂಭವಾಗಿದ್ದು, ಇತ್ತೀಚಿಗೆ ಚೆನ್ನೈನಲ್ಲಿ ನಡೆದ ಕುಬೇರ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ನಟ ನಾಗಾರ್ಜುನಗೆ ಕನ್ನಡ ಮಾತನಾಡಲು ಹೇಳಿದ್ದಾರೆ. ನಟ ನಾಗಾರ್ಜುನ ಭಾಷಣ ಆರಂಭಿಸಿ ತೆಲುಗಿನಲ್ಲಿ, ತಮಿಳಿನಲ್ಲಿ ಹಾಗೂ ಹಿಂದಿಯಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ನಮಸ್ಕಾರ ತಿಳಿಸಿದ್ದರು. ಈ ವೇಳೆ ಹಿಂದೆಯೇ ನಿಂತಿದ್ದ ರಶ್ಮಿಕಾ ಮಂದಣ್ಣ ನಾಗಾರ್ಜುನ ಅವರನ್ನು ಕರೆದು ಕನ್ನಡದಲ್ಲಿಯೂ ನಮಸ್ಕಾರ ಹೇಳುವಂತೆ ತಿಳಿಸಿದ್ದಾರೆ. ಇದನ್ನು ಕೇಳಿ ಕೂಡಲೇ ಪ್ರತಿಕ್ರಿಯಿಸಿದ ನಾಗಾರ್ಜುನ, ಎಲ್ಲರಿಗೂ ನಮಸ್ಕಾರ ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟಿ ರಶ್ಮಿಕಾ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

   ಇನು ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಆಗಾಗ ಒಂದಲ್ಲಾ ಒಂದು ರೀತಿಯಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತಮಿಳುನಾಡಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದ್ದರು. ಅದಕ್ಕೂ ಮೊದಲು ತಮಿಳಿನ ಸುಲ್ತಾನ್ ಸಿನಿಮಾ ಸಮಯದಲ್ಲಿ ನಾನು ತಮಿಳು ನಾಡು ಸೊಸೆಯಾಗಬೇಕು ಅಂದಿದ್ದರು. ಇನ್ನು ಸಿಕಂದರ್ ವೇಳೆ ಐಯಾಮ್ ಫ್ರಮ್ ಹೈದರಾಬಾದ್ ಅಂದಿದ್ದ ರಶ್ಮಿಕಾ ಆನಂತರ ತಮ್ಮ ತಪ್ಪನ್ನ ತಿದ್ದಿಕೊಂಡು ಕರ್ನಾಟಕದ ಬಗ್ಗೆ ಸಲ್ಮಾನ್ ಖಾನ್ ಪಕ್ಕ ಕೂತು ಮಾತನಾಡಿಡಿದ್ದರು. ಇದು ಸಾಲದು ಅಂತ ಮೊನ್ನೆ ಮೊನ್ನೆಯಷ್ಟೆ ನನ್ನ ಬಾಲ್ಯದ ಜೀವನ ಕಳೆದಿದ್ದು ತಮಿಳು ನಾಡಿನಲ್ಲಿ ಎಂದಿದ್ದರು.

   ಇದೀಗ ಕಿರಿಕ್ ಹುಡುಗಿ ನಾಗಾರ್ಜುನಗೆ ಕನ್ನಡ ಹೇಳಿಕೊಡುವ ಮೂಲಕ ಮಾಡಿದ ತಪ್ಪನ್ನು ತಿದ್ದಿ ಕೊಂಡರಾ ಅಥವಾ ವಿವಾದವಾಗದಂತೆ ಎಚ್ಚರಿಕೆ ವಹಿಸಿದರಾ ಎಂಬುವುದು ಚರ್ಚೆಗೆ ಗ್ರಾಸವಾಗಿದೆ.

Recent Articles

spot_img

Related Stories

Share via
Copy link