ಜಿ7 ಶೃಂಗಸಭೆಗಾಗಿ ಕೆನಡಾಗೆ ತೆರಳಿದ ಪ್ರಧಾನಿ ಮೋದಿ….!

ಒಟ್ಟಾವಾ: 

    ಪ್ರಧಾನಿ ನರೇಂದ್ರ ಮೋದಿ  ಅವರು ಎರಡು ದಿನಗಳ ಸೈಪ್ರಸ್ ಭೇಟಿಯನ್ನು ಮುಗಿಸಿ ಇಂದು  ಕೆನಡಾಗೆ ತೆರಳಿದಿದ್ದಾರೆ. ಕೆನಡಾದಲ್ಲಿ ಅವರು ಕನನಾಸ್ಕಿಸ್‌ನಲ್ಲಿ ನಡೆಯಲಿರುವ 51ನೇ G7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ಕೆನಡಾದ ಕ್ಯಾಲ್ಗರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಅಧಿಕೃತ ಆಹ್ವಾನದ ಮೇರೆಗೆ 2015 ರ ನಂತರ ಪ್ರಧಾನಿ ಮೋದಿ ಅವರು ಕೆನಡಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 2023 ರಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಪ್ರಧಾನಿ ಮೋದಿ ಅವರ ಮೊದಲ ಕೆನಡಾ ಭೇಟಿ ಇದಾಗಿರುವುದರಿಂದ ಈ ಭೇಟಿ ಜಾಗತಿಕ ಗಮನ ಸೆಳೆದಿದೆ.

    ಸೋಮವಾರ ಪ್ರಾರಂಭವಾದ ಎರಡು ದಿನಗಳ G7  ಶೃಂಗಸಭೆಯು, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಇಟಲಿ, ಜರ್ಮನಿ, ಕೆನಡಾ, ಜಪಾನ್ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ವಿಶ್ವದ ಕೆಲವು ಅತ್ಯಂತ ಮುಂದುವರಿದ ಆರ್ಥಿಕತೆಗಳ ನಾಯಕರನ್ನು ಒಟ್ಟುಗೂಡಿಸುತ್ತಿದೆ. ಶೃಂಗಸಭೆಯಲ್ಲಿ ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    23 ಗಂಟೆಗಳ ಪ್ರವಾಸದ ಸಮಯದಲ್ಲಿ, ಪ್ರಧಾನಿಯವರು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಜಿ 7 ಶೃಂಗಸಭೆಯಲ್ಲಿ ಔಟ್ರೀಚ್ ಸೆಷನ್‌ಗಳಲ್ಲಿ ಭಾಗವಹಿಸಲಿದ್ದಾರೆ. ಭಾರತವು G7 ನ ಸದಸ್ಯರಲ್ಲದಿದ್ದರೂ, 2019 ರಿಂದ ಪ್ರಧಾನಿ ಮೋದಿಯವರನ್ನು ನಿರಂತರವಾಗಿ ಈ ಗುಂಪಿನ ಸಭೆಗಳಿಗೆ ಆಹ್ವಾನಿಸಲಾಗುತ್ತಿದೆ. ಈ ಆಹ್ವಾನವು ಕೆನಡಾ ಮತ್ತು ಪ್ರಪಂಚದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. 

    ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದ ಭಾರತ ಹಾಗೂ ಕೆನಡಾ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಭಾರತದ ಹೈಕಮೀಷನ ಅಧಿಕಾರಿಗಳ ಮೇಲೆ ಕೆನಡಾ ಆರೋಪ ಹೊರಿಸಿತ್ತು. ಜಸ್ಟಿನ್ ಟ್ರುಡೊ ಅವರ ಸರ್ಕಾರವು ಕೆನಡಾದ ನೆಲದಿಂದ ಖಲಿಸ್ತಾನಿ ಪರ ಶಕ್ತಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು. 

    ಟ್ರುಡೊ ಅವರ ಉನ್ನತ ಹುದ್ದೆಯಿಂದ ನಿರ್ಗಮಿಸಿದ ನಂತರ, ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ಹೊಸಬರಾದ ಕಾರ್ನಿ ಮಾರ್ಚ್‌ನಲ್ಲಿ ಕೆನಡಾದ ಹೊಸ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಟ್ರುಡೊ ಅವರ ನಿರ್ಗಮನದ ನಂತರ, “ಪರಸ್ಪರ ನಂಬಿಕೆ ಮತ್ತು ಸೂಕ್ಷ್ಮತೆಯ” ಆಧಾರದ ಮೇಲೆ ಕೆನಡಾದೊಂದಿಗೆ ಸಂಬಂಧಗಳನ್ನು ಪುನರ್ನಿರ್ಮಿಸಲು ಆಶಿಸುವುದಾಗಿ ಭಾರತ ಹೇಳಿದೆ.

Recent Articles

spot_img

Related Stories

Share via
Copy link