ಗಂಗಾವತಿ
ಹಿರೇಬೆಣಕಲ್ ಮೋರೆರ ಬೆಟ್ಟದಲ್ಲಿ ಅಧ್ಯಯನ ಮಾಡಿ, ಜಾಗತಿಕ ಪಾರಂಪರಿಕ ಸ್ಥಳ ಮಾಡಲು ಪ್ರಯತ್ನ ಮಾಡುತ್ತೇವೆ. ಈ ಸ್ಥಳವು ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಬಂದಿದೆ. ಮುಂದೆ ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ತಾಲೂಕಿನ ಹಿರೇಬೆಣಕಲ್ ಮೋರೆರ ಬೆಟ್ಟದ ಕೆಳಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಬೆಣಕಲ್ ಬಗ್ಗೆ ಜಪಾನ್, ಜರ್ಮನ್ ದೇಶದವರಿಗೆ ಮಾಹಿತಿ ಗೊತ್ತಾದರೆ, ಐದಾರು ತಿಂಗಳಲ್ಲಿ ಬರುತ್ತಾರೆ. ಜಗತ್ತಿನ ಪ್ರವಾಸಿಗರಿಕೆ ಆಕರ್ಷಣೀಯ ಸ್ಥಳ ಮಾಡಲು ದೃಢ ಹೆಜ್ಜೆ ಇಡಲು ಸರ್ಕಾರ ನಿರ್ಧರಿಸಿದೆ. ಸ್ಮಾರಕ ಕಂಡುಬಂದರೆ ಇಲಾಖೆಗೆ ಮುಟ್ಟಿಸಬೇಕು. ಅದು ಇತಿಹಾಸದ ಸ್ವರೂಪ ಆಗುತ್ತದೆ. ಶಿಲಾಶಾಸನ, ಕಲ್ಲು, ಇತರ ವಸ್ತುಗಳಿದ್ದರೆ ಸರ್ಕಾರಕ್ಕೆ ಒಪ್ಪಿಸಬೇಕು ಎಂದರು.
ಹಿರೇಬೆಣಕಲ್ ಮೋರೆರ ಬೆಟ್ಟಗಳಲ್ಲಿನ ಗವಿ ವರ್ಣಚಿತ್ರಗಳ ಭಾವಚಿತ್ರ ಸೆರೆಹಿಡಿಯಬೇಕು. ಈ ಚಿತ್ರಗಳನ್ನು ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯಲ್ಲಿ ವಸ್ತು ಪ್ರದರ್ಶನಕ್ಕೆ ಇಡಬೇಕು. ವರ್ಣಚಿತ್ರಕ್ಕೆ ಬಳಸಿದ ಬಣ್ಣವನ್ನು ಅಧ್ಯಯನ ಮಾಡಬೇಕು. ಈ ಕುರಿತು ಚರ್ಚೆ ಆಗಬೇಕು ಎಂದು ತಿಳಿಸಿದರು.
