ತಿರುವನಂತಪುರ:
ಲಿಯೋನಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫುಟ್ಬಾಲ್ ತಂಡವು ವೇಳಾಪಟ್ಟಿ ಗೊಂದಲದಿಂದಾಗಿ ಕೇರಳ ಪ್ರವಾಸವನ್ನು ರದ್ದುಗೊಳಿಸಿದೆ. ಈ ವಿಚಾರವನ್ನು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಈಗಾಗಲೇ ಖಚಿತಪಡಿಸಿದ್ದಾರೆ. ಅರ್ಜೆಂಟೀನಾ ತಂಡದ ಕೇರಳ ಪ್ರವಾಸ ರದ್ದಾದ ಕಾರಣ ಕೇರಳ ಸರ್ಕಾರಕ್ಕೆ ಬರೋಬ್ಬರಿ 13 ಲಕ್ಷ ರೂ. ನಷ್ಟಗೊಂಡಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೇರಳ ಸರ್ಕಾರ 2024ರಲ್ಲಿ ಲಿಯೋನಲ್ ಮೆಸ್ಸಿಯನ್ನು ಕೇರಳಕ್ಕೆ ಕರೆಯಿಸಲು 13 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದಿದೆ. ಕೇರಳದಲ್ಲಿ ಮೆಸ್ಸಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದ.ಇಲ್ಲಿನ ಜನರ ಆಸಕ್ತಿಗೆ ಅನುಗುಣವಾಗಿ ಮೆಸ್ಸಿ ಆಹ್ವಾನಿಸಲಾಗಿತ್ತು. ಖರ್ಚು ಮಾಡಿರುವ ಆರೋಪ ರಾಜಕೀಯ ಪ್ರೇರಿತ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ. ಆದರೆ ಕೇರಳದ ವಿಪಕ್ಷಗಳು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ವಿಪಕ್ಷಗಳ ಗಂಭೀರ ಆರೋಪ ಕೇಳಿಬಂದ ಕಾರಣ ಕ್ರೀಡಾ ಸಚಿವ ವಿ ಅದ್ಬುರಹಿಮಾನ್, ಮೆಸ್ಸಿಯನ್ನು ಆಹ್ವಾನಿಸಲು ಸ್ಪೇನ್ಗೆ ನಾನೊಬ್ಬನೆ ತೆರಳಿದ್ದೆ. ಆದರೆ ಸರ್ಕಾರದಿಂದ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ತಾವೇ ಸ್ವಂತ ಖರ್ಚಿನಲ್ಲಿ ಹೋಗಿದ್ದಾರ ಅನ್ನೋ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಲಿಯೋನೆಲ್ ಮೆಸ್ಸಿ ಡಿಸೆಂಬರ್ನಲ್ಲಿ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಕೋಲ್ಕತಾ, ಅಹಮದಾಬಾದ್, ಮುಂಬೈ ಹಾಗೂ ದೆಹಲಿಗೆ ಮೆಸ್ಸಿ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 12ರ ರಾತ್ರಿ ಕೋಲ್ಕತಾಕ್ಕೆ ಬಂದಿಳಿಯಲಿರುವ ಮೆಸ್ಸಿ, ಡಿ.13ರಂದು ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದು ವಿಶ್ವದಲ್ಲೇ ಮೆಸ್ಸಿಯ ಅತಿ ದೊಡ್ಡ ಪ್ರತಿಮೆ ಎನ್ನಲಾಗುತ್ತಿದೆ. ಬಳಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಸಂಜೆ ಅಹಮದಾಬಾದ್ನಲ್ಲಿ ಅದಾನಿ ಸಂಸ್ಥೆಯ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.14ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕೆಲ ತಾರಾ ಕ್ರಿಕೆಟಿಗರ ಜತೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಮೆಸ್ಸಿ, ಬಳಿಕ ಭಾರತೀಯ ಫುಟ್ಬಾಲ್ ತಂಡವನ್ನು ಭೇಟಿ ಮಾಡಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಡಿ.15ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ಮೆಸ್ಸಿ, ಅಲ್ಲೂ ಸಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.








