ಬೆಂಗಳೂರು
ಕರ್ನಾಟಕ ಸರ್ಕಾರದ ಜಾತಿ ಗಣತಿ ಆಡಳಿತಾರೂಢ ಕಾಂಗ್ರೆಸ್ ಒಳಗೆಯೇ ಜಟಾಪಟಿಗೆ ಕಾರಣವಾಗಿದೆ. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ. ಒಂದು ವೇಳೆ ಗೊಂದಲದ ನಡುವೆ ಜಾತಿಗಣತಿ ಮುಂದುವರಿಸಿದರೆ ತೊಂದರೆ ಬರಬಹುದು ಎಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೆಲವು ಮಂದಿ ಸಚಿವರು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಎಂಬಿತ್ಯಾದಿಯಾಗಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಜಾತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿಪರೀತ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲ, ಸಂಪುಟ ಸಭೆಯಲ್ಲಿ ಖುದ್ದು ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ವಿವಾದಗಳ ಮಧ್ಯೆ ಜಾತಿಗಣತಿ ಮಾಡಬೇಕಾ? ಸದ್ಯಕ್ಕೆ ಬೇಡ ಮುಂದೂಡಿ ಎಂದು ಕೆಲವು ಮಂದಿ ಸಚಿವರು ಸಿಎಂಗೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್, ಮುನಿಯಪ್ಪ, ಭೈರತಿ ಸುರೇಶ್ ಮಾತ್ರ ಜಾತಿಗಣತಿಯನ್ನು ಈಗಿನ ರೀತಿಯಲ್ಲೇ ಮುಂದುವರಿಸಲು ಒಲವು ತೋರಿದ್ದಾರೆ. ಬಹುತೇಕ ಸಚಿವರು ಸಮೀಕ್ಷೆ ಮುಂದೂಡಿ ಎಂದು ಆಗ್ರಹಿಸಿದ್ದಾರೆ.
ಸಚಿವರೇ ಹೀಗೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಮಾತಿಗೂ ಅವಕಾಶ ನೀಡದಂತೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ ಗೊಂದಲದ ಬಗ್ಗೆ ಟೇಬಲ್ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಆಕ್ರೋಶಕ್ಕೆ ಸಿಡಿಮಿಡಿಗೊಂಡ ಸಿಎಂ ಕುರ್ಚಿ ಮೇಲಿಂದ ಎದ್ದು ಅತ್ತಿತ್ತ ಓಡಾಡಿದ್ದಾರೆ. ಸಂಪುಟ ಸಭೆಯಲ್ಲಿ ಹೀಗೆ ಎಂದೂ ಸಿದ್ದರಾಮಯ್ಯ ಎದ್ದು ನಿಂತು ಓಡಾಡಿದ್ದೇ ಇಲ್ಲ. ಅಷ್ಟೇ ಅಲ್ಲ, ತಮ್ಮನ್ನು ಜಾತಿವಾದಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಸಿಎಂ ಮುಂದಾಗಿದ್ದಾರೆ.
ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಇವತ್ತು (ಸೆಪ್ಟೆಂಬರ್ 19) ಬೆಳಗ್ಗೆ 10ಗಂಟೆಗೆ ಸಂಪುಟ ಸಹೋದ್ಯೋಗಿಗಳ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ಜಾತಿಗಣತಿ ಗೊಂದಲಗಳ ಬಗ್ಗೆ ಚರ್ಚಿಸಲಿದ್ದಾರೆ. ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆ ಮುಂದುವರಿಸುವ ಬಗ್ಗೆ ಈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಭೈರತಿ ಸುರೇಶ್, ಎಂಬಿ ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಕೆಲ ಸಚಿವರು ಭಾಗಿಯಾಗಲಿದ್ದಾರೆ.
ಜಾತಿ ಗಣತಿ ಸಮೀಕ್ಷೆಯ ಕೈಪಿಡಿಯಲ್ಲಿ 53 ಪ್ರಶ್ನೆಗಳಿತ್ತು. ಇದರಲ್ಲಿ ಕೆಲ ಪ್ರಮುಖ ಅಂಶಗಳನ್ನು ಬದಲಾವಣೆ ಮಾಡಿರುವ ಹಿಂದುಳಿದ ವರ್ಗಗಳ ಆಯೋಗ, ಹೊಸ ಕೈಪಿಡಿಯಲ್ಲಿ 50 ಪ್ರಶ್ನೆಗಳನ್ನು ಉಳಿಸಿದೆ. ಹೀಗಾಗಿ, 2 ಲಕ್ಷ ಜಾತಿಗಣತಿ ಕೈಪಿಡಿಯನ್ನು ತಿಪ್ಪೆಗೆ ಎಸೆದಿದೆ. ಸುಮಾರು 1 ಕೋಟಿ ರೂಪಾಯಿ ಹಣ ವ್ಯಯ ಮಾಡಿ ತಯಾರಿಸಿದ್ದ ಕೈಪಿಡಿ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ. ಅಷ್ಟೇ ಅಲ್ಲ, ಸೆಪ್ಟೆಂಬರ್ 22ರಿಂದ ಜಾತಿಗಣತಿ ಆರಂಭವಾಗಬೇಕಿದೆ. ಅಂದರೆ ಇನ್ನು ಮೂರು ದಿನದಲ್ಲಿ ಶಿಕ್ಷಕರಿಗೆ ಕೈಪಿಡಿ ವಿತರಣೆ ಮಾಡಿ, ಸಮೀಕ್ಷೆ ಆರಂಭ ಮಾಡಲು ಸಾಧ್ಯವಾಗುತ್ತಾ ಎಂಬ ಅನುಮಾನ ಮೂಡಿದೆ.
ಒಟ್ಟಿನಲ್ಲಿ, ಜಾತಿ ಗಣತಿಯೇ ಈಗ ಗೊಂದಲದ ಗೂಡಾಗಿದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ವಿವಾದಿತ ಜಾತಿಗಳ ತೆಗೆಯಲು ಸೂಚಿಸಿದ್ದಾರೆ. ಇಂದು ಸಭೆ ಕೂಡ ನಡೆ ಸುತ್ತಿದ್ದಾರೆ. ಸಭೆಯಲ್ಲಿ ಏನೆಲ್ಲಾ ನಿರ್ಧಾರ ಕೈಗೊಳ್ಳಲಾಗುತ್ತದೆ? ನಿಗದಿಯಂತೆ ಸೋಮವಾರ ಜಾತಿಗಣತಿ ಆರಂಭವಾಗುತ್ತದೆಯಾ ಇಲ್ಲವಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
