ಢಾಕಾ:
ಭಯೋತ್ಪಾದನೆಗೆ ಪ್ರಚೋದನೆ , ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ ವಾಸವಾಗಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರೆಡ್ ಕಾರ್ಪೆಟ್ ಸ್ವಾಗತ ನೀಡಲು ಸಜ್ಜಾಗಿದೆ. ಯೂನಸ್ ನೇತೃತ್ವದ ಆಡಳಿತವು ನಾಯ್ಕ್ಗಾಗಿ ಒಂದು ತಿಂಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸಕ್ಕೆ ಅನುಮೋದನೆ ನೀಡಿದೆ.
ಕಾರ್ಯಕ್ರಮ ಆಯೋಜಕರ ಪ್ರಕಾರ, ನವೆಂಬರ್ 28 ರಿಂದ ಡಿಸೆಂಬರ್ 20, 2025 ರವರೆಗೆ ನಿಗದಿಯಾಗಿರುವ ಈ ಪ್ರವಾಸವನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ ಮತ್ತು ಅಧಿಕಾರಿಗಳು ಇದಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನಾಯ್ಕ್ ತನ್ನ ವಾಸ್ತವ್ಯದ ಸಮಯದಲ್ಲಿ ದೇಶಾದ್ಯಂತ ಸರಣಿ ಧರ್ಮೋಪದೇಶ ನೀಡಲಿದ್ದಾನೆ. ಜುಲೈ 2016 ರ ಢಾಕಾ ಹೋಲೆ ಆರ್ಟಿಸನ್ ಬೇಕರಿ ಭಯೋತ್ಪಾದಕ ದಾಳಿಯ ನಂತರ ಝಾಕಿರ್ ನಾಯ್ಕ್ ಒಡೆತನದ ಪೀಸ್ ಟಿವಿಯನ್ನು ಈ ಹಿಂದಿನ ಶೇಖ್ ಹಸೀನಾ ನೇತೃತ್ವದ ಸರ್ಕಾರ ನಿಷೇಧಗೊಳಿಸಿತ್ತು. ಇದೀಗ ಯೂನಸ್ ಸರ್ಕಾರ ಝಾಕಿರ್ ನಾಯ್ಕ್ಗೆ ಮಾನ್ಯತೆ ನೀಡಿದೆ.
ಭಾರತದಲ್ಲಿ ದ್ವೇಷ ಭಾಷಣ ಮತ್ತು ಕೋಮು ಸೌಹಾರ್ದತೆಯನ್ನು ಕೆರಳಿಸುವ ಆರೋಪಗಳನ್ನು ಈತ ಎದುರಿಸುತ್ತಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಝಾಕಿರ್ ನಾಯ್ಕ್ ಹಸ್ತಾಂತರಕ್ಕೆ ಭಾರತ 2018ರಿಂದ ಮಲೇಷ್ಯಾ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದೆ.
ಕೌಲಾಲಂಪುರದಲ್ಲಿ ಈ ತಿಂಗಳಾಂತ್ಯಕ್ಕೆ ಆಸಿಯಾನ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಮಲೇಷ್ಯಾ ಝಾಕಿರ್ ನಾಯಕ್ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದೆ. ಭಾರತದ ವಿರೋಧ ಹೇಳಿಕೆ, ಉಪದೇಶ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಝಾಕಿರ್ ನಾಯ್ಕ್ 2016ರಲ್ಲಿ ಭಾರತವನ್ನು ತೊರೆದಿದ್ದು, ಬಳಿಕ ಮಲೇಷ್ಯಾದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಝಾಕಿರ್ ನಾಯ್ಕ್ ಪ್ರಕರಣವು ಭಾರತ ಮತ್ತು ಮಲೇಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸಮಸ್ಯೆಯಾಗಿದೆ. ಆತ 2016ರ ಬಾಂಗ್ಲಾದೇಶದ ದಾಳಿಗೆ ಪ್ರಚೋದನೆ ನೀಡಿದ್ದ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2017ರಲ್ಲಿ ಆರೋಪಪಟ್ಟಿ ಸಲ್ಲಿಸಿತು. ಆತನ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ, ಕೋಮು ದ್ವೇಷ, ಅಕ್ರಮ ಹಣ ವರ್ಗಾವಣೆ ಆರೋಪವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪಟ್ಟಿ ಮಾಡಿದೆ.








