ಶ್ರೀನಗರ:
ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಸರ್ಕಾರಿ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಜಾಗೊಳಿಸಿದ್ದಾರೆ. ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಇಬ್ಬರನ್ನು ವಜಾಗೊಳಿಸಲಾಗಿದೆ. ರಾಜ್ಯದ ಭದ್ರತೆಗಾಗಿ ಅಗತ್ಯವೆಂದು ಪರಿಗಣಿಸಿದರೆ ಸರ್ಕಾರವು ಸಾರ್ವಜನಿಕ ಸೇವಕರನ್ನು ವಿಚಾರಣೆಯಿಲ್ಲದೆ ತೆಗೆದುಹಾಕಬಹುದಾಗಿದೆ .
ಇದು ಭಯೋತ್ಪಾದನೆಯ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತಾ ನೀತಿಯನ್ನು ಪುನರುಚ್ಚರಿಸುವ, ರಾಜ್ಯ ಭದ್ರತೆಯ ಕಾರಣಗಳಿಗಾಗಿ ವಿಚಾರಣೆಯಿಲ್ಲದೆ ವಜಾಗೊಳಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಉಗ್ರವಾದವನ್ನು ನಿಗ್ರಹಿಸುವ ಮತ್ತು ರಾಜ್ಯ ಸಂಸ್ಥೆಗಳಿಂದ ಭಯೋತ್ಪಾದಕರ ಪ್ರಭಾವವನ್ನು ಬೇರುಸಹಿತ ಕಿತ್ತುಹಾಕುವ ತನ್ನ ತೀವ್ರ ಅಭಿಯಾನದ ಭಾಗವಾಗಿ ಇದೇ ರೀತಿಯ ಆಧಾರದ ಮೇಲೆ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಆದೇಶದ ಪ್ರಕಾರ, ವಜಾಗೊಳಿಸಿದ ನೌಕರರಲ್ಲಿ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿರುವ ಗುಲಾಮ್ ಹುಸೇನ್ ಸೇರಿದ್ದಾರೆ. ಅವರು ಲಷ್ಕರ್-ಎ-ತೈಬಾ ಗಾಗಿ ಓವರ್ ಗ್ರೌಂಡ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗೂ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ರಿಯಾಸಿ ಜಿಲ್ಲೆಯಲ್ಲಿ ನೇಮಕಾತಿ ಮತ್ತು ಹಣಕಾಸು ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿಕ್ಷಕ ಮತ್ತು ಮಾಜಿ ಪ್ರಯೋಗಾಲಯ ಸಹಾಯಕ ಮಜೀದ್ ಇಕ್ಬಾಲ್ ದಾರ್, ರಾಜೌರಿಯಲ್ಲಿ IED ಪ್ಲಾಟ್ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಬಂಧನದ ಸಮಯದಲ್ಲಿಯೂ ಸಹ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮೂಲಕ ಭಯೋತ್ಪಾದನೆಗೆ ಹಣಕಾಸು ಸೇವೆ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರಿ ನೌಕರರ ವಜಾಗೊಳಿಸುವಿಕೆಯಂತಹ ಈ ಕ್ರಮವು ಜಮ್ಮು ಮತ್ತು ಕಾಶ್ಮೀರ ಆಡಳಿತದ ಭಯೋತ್ಪಾದನೆಯ ವಿರುದ್ಧದ ಶೂನ್ಯ-ಸಹಿಷ್ಣುತಾ ನೀತಿಯ ಭಾಗವಾಗಿದೆ ಮತ್ತು ಈ ಪ್ರದೇಶದೊಳಗಿನ ಭಯೋತ್ಪಾದನಾ ವ್ಯವಸ್ಥೆಯನ್ನು ಕೆಡವುದು ಮುಖ್ಯ ಉದ್ದೇಶವಾಗಿದೆ . ದೆಹಲಿ ಪೊಲೀಸ್ ವಿಶೇಷ ಘಟಕವು ಶುಕ್ರವಾರ ಐಸಿಸ್ ಮಾಡ್ಯೂಲ್ ಅನ್ನು ಭೇದಿಸಿದ್ದು, “ಫಿದಾಯೀನ್” (ಆತ್ಮಹತ್ಯಾ) ದಾಳಿಗೆ ತರಬೇತಿ ಪಡೆಯುತ್ತಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ. ದೆಹಲಿಯ ಸಾದಿಕ್ ನಗರ ಮತ್ತು ಭೋಪಾಲ್ನಲ್ಲಿ ನಡೆದ ಸಂಘಟಿತ ಕಾರ್ಯಾಚರಣೆಯ ನಂತರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅದ್ನಾನ್ ಎಂಬ ಹೆಸರಿನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.








