ಹುಬ್ಬಳ್ಳಿ
. ರಾಜ್ಯ ಸರ್ಕಾರ ಇನ್ನೂ ಹಸಿರು ಹೈಡ್ರೋಜನ್ ನೀತಿಯನ್ನು ಘೋಷಿಸಿಲ್ಲ. ಪರಿಣಾಮ ರಾಜ್ಯದಲ್ಲಿ 21 ಜಿಲ್ಲೆಗಳು ಪ್ರಧಾನಮಂತ್ರಿ ಸೂರ್ಯಘರ್ ಘಟಕಗಳ ಅಳವಡಿಕೆಯಿಂದ ಗಮನಾರ್ಹ ಎನ್ನುವಂತೆ ಹಿಂದುಳಿದಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ನಿಡೇಕ್ನ ʼಆರ್ಚರ್ಡ್ ಹಬ್ʼ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಸೂರ್ಯಘರ್ ಯೋಜನೆಯ ಶೇ.85ರಷ್ಟು ಸ್ಥಾಪನೆಗಳು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. ಆದರೆ ಇಲ್ಲಿ 21 ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂದು ಹೇಳಿದರು.
ರಾಜ್ಯದಲ್ಲಿ ಸೂರ್ಯಘರ್ ಅಳವಡಿಕೆ ಮತ್ತು ಸ್ಥಾಪನಾ ಪರಿವರ್ತನೆ ಅನುಪಾತ ಕಡಿಮೆಯಿದೆ. ರಾಷ್ಟ್ರೀಯ ಸರಾಸರಿ ಶೇ.20ಕ್ಕೆ ಹೋಲಿಸಿದರೆ ಸರಿಸುಮಾರು ಶೇ.4ರಷ್ಟಿದೆ. ಚೆಸ್ಕಾಂ, ಹೆಸ್ಕಾಂನಂತಹ ಪ್ರಮುಖ ಡಿಸ್ಕಾಂಗಳು ಶೇ.3ಕ್ಕಿಂತ ಕಡಿಮೆ ದಕ್ಷತೆ ಹೊಂದಿವೆ. ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಳಿಗಿಂತ ಬಹಳ ಕಡಿಮೆ ಅನುಪಾತದಲ್ಲಿದೆ. ಇನ್ನು ಸರ್ಕಾರಿ ಕಟ್ಟಡಗಳ ಮೇಲಿನ ಸೌರಶಕ್ತಿಯಲ್ಲಿ 435 MWನಲ್ಲಿ ಕೇವಲ 15 MW ಮಾತ್ರ ಸಾಧಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
2025–26ನೇ ಹಣಕಾಸು ವರ್ಷದಲ್ಲಿ ಡಿಆರ್ಇ ಆರ್ಪಿಒ ಗುರಿ 1.3 ಗಿಗಾವ್ಯಾಟ್ ತಲುಪಲು ಕರ್ನಾಟಕ ದಿನಕ್ಕೆ ಕನಿಷ್ಠ 600 ಸ್ಥಾಪನೆಗಳಿಗೆ ಹೆಚ್ಚಿಸಬೇಕಿದೆ. ಆದರೆ, ಪ್ರಸ್ತುತ ದರ ದಿನಕ್ಕೆ ಕೇವಲ 25 ಸ್ಥಾಪನೆಗಳಲ್ಲಿರುವುದು ಖೇದಕರ ಎಂದರು. ರಾಜ್ಯದಲ್ಲಿ ಪಾವಗಡ ಸೋಲಾರ್ ಪಾರ್ಕ್ (2GW) ಸಂಪೂರ್ಣ ಕಾರ್ಯಾರಂಭಗೊಂಡಿದೆ. ಹಸಿರು ಇಂಧನ ಕಾರಿಡಾರ್ ಹಂತ I ಸಕಾಲಕ್ಕೆ ಪೂರ್ಣಗೊಂಡಿದ್ದು, ಇದಕ್ಕೆ ಕೇಂದ್ರದ ₹326.5 ಕೋಟಿ ಅನುದಾನವನ್ನು ಸಂಪೂರ್ಣ ಬಳಸಿಕೊಳ್ಳಲಾಗಿದೆ. ದೊಡ್ಡ ಗಾಳಿ ಸಾಮರ್ಥ್ಯ (169 GW) ಈಗಾಗಲೇ 8GW ಗಿಂತ ಹೆಚ್ಚು ನಿರ್ವಹಿಸಿದೆ ಎಂದು ಹೇಳಿದರು.
ತ್ಯಾಜ್ಯದಿಂದ ಇಂಧನ (20 ಯೋಜನೆಗಳು, 26.9MW) ಮತ್ತು ಸಣ್ಣ ಜಲವಿದ್ಯುತ್ (1.28 GW) ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ACME, ಪೆಟ್ರೋನಾಸ್, ರೆನ್ಯೂ, JSW, ABC ಕ್ಲೀನ್ಟೆಕ್, ಇತ್ಯಾದಿಗಳೊಂದಿಗೆ ಬಹು ಹಸಿರು ಹೈಡ್ರೋಜನ್ ಒಪ್ಪಂದಗಳು ಒಟ್ಟು ₹1 ಲಕ್ಷ ಕೋಟಿಗಿಂತ ಹೆಚ್ಚು ಯೋಜಿತ ಹೂಡಿಕೆ ರಾಜ್ಯದಲ್ಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.








