ಬೆಂಗಳೂರು
ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂಪಾಯಿ ರಾಬರಿ ಪ್ರಕರಣದ ಮಾಸ್ಟರ್ ಮೈಂಡ್, ಗೋವಿಂದಪುರ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ನನ್ನು ಇಲಾಖೆ ಕೆಲಸದಿಂದ ವಜಾ ಮಾಡಲಾಗಿದೆ. ಖದೀಮರ ಜೊತೆ ಸೇರಿ ಪ್ಲಾನ್ ಮಾಡಿದ್ದ ಈತನನ್ನು ಅಮಾನತು ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಆದೇಶ ಹೊರಡಿಸಿದ್ದಾರೆ.
ರಾಬರಿ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ನೇ ಶಾಮೀಲು ಆಗಿರುವುದರಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರಿನ ಎಲ್ಲಾ ಠಾಣೆಯ ಪಿಎಸ್ಐ, ಎಎಸ್ಐ, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ಗಳ ಮಾನಿಟರಿಂಗ್ಗೆ ಸೂಚನೆ ನೀಡಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನಲ್ಲಿ ನಡೆದಿದ್ದ 7.11 ಕೋಟಿ ರೂಪಾಯಿ ರಾಬರಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದುವರೆಗೂ 6 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಬಂಧಿತ ಅಣ್ಣಪ್ಪ ನಾಯ್ಕ್ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಬೀಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಕ್ರೈಮ್ ಟೀಂನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ನಾಯ್ಕ್ನನ್ನು ನಂತರ ಕ್ರೈಂ ಟೀಂನಿಂದ ತೆಗೆದು, ಬೀಟ್ ಡ್ಯೂಟಿಗೆ ಹಾಕಲಾಗಿತ್ತು.
ರೂಪಾಯಿ ದರೋಡೆ ಕೇಸ್ನಲ್ಲಿ ಕಾನ್ಸ್ಟೇಬಲ್ ಭಾಗಿಯಾಗಿರೋದು ಪೊಲೀಸ್ ಇಲಾಖೆಗೆ ಟೆನ್ಶನ್ ತಂದೊಡ್ಡಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ಪಿಎಸ್ಐ, ಎಎಸ್ಐ, ಹೆಡ್ ಕಾನ್ಸ್ ಟೇಬಲ್ ಹಾಗೂ ಕಾನ್ಸ್ ಟೇಬಲ್ಗಳ ಮಾನಿಟರಿಂಗ್ ಮಾಡುವಂತೆ ಕಮಿಷನರ್ ಸೂಚಿಸಿದ್ದಾರೆ. ಆಯಾ ವಿಭಾಗದ ಡಿಸಿಪಿ ಮತ್ತು ಎಸಿಪಿಗಳಿಗೆ ಮೀಟಿಂಗ್ ನಡೆಸಿ, ರಿಪೋರ್ಟ್ ಕೊಡಲು ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ. ಎಲ್ಲರ ಕುರಿತು ಆಂತರಿಕ ವರದಿ ನೀಡುವಂತೆ ಆದೇಶಿಸಿದ್ದಾರೆ.
ಈಗಾಗಲೇ ಎಲ್ಲಾ ಕೆಳ ಹಂತದ ಸಿಬ್ಬಂದಿಯನ್ನು ಆಯಾ ವಿಭಾಗದ ಎಸಿಪಿ ಮತ್ತು ಡಿಸಿಪಿಗಳು ಮೇಲುಸ್ತುವಾರಿ ಮಾಡುತ್ತಿದ್ದಾರೆ. ಇತ್ತೀಚೆಗೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕಾನ್ಸ್ಟೇಬಲ್ಗಳಿಂದ ಸುಲಿಗೆ ಪ್ರಕರಣ ನಡೆದಿತ್ತು. ಇದೀಗ ದರೋಡೆ ಕೇಸ್ನಲ್ಲೂ ಕಾನ್ಸ್ಟೇಬಲ್ ಭಾಗಿಯಾಗಿರೋದು ಪೊಲೀಸ್ ಇಲಾಖೆಗೇ ಆಘಾತ ನೀಡಿದೆ. ಕಿಡ್ನಾಪ್, ಬೆದರಿಕೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಕೆಳ ಹಂತದ ಪೊಲೀಸ್ ಸಿಬ್ಬಂದಿ ಭಾಗಿಯಾಗಿರುವ ಉದಾಹರಣೆಗಳಿವೆ. ಹೀಗಾಗಿ ಕೆಳಹಂತದ ಸಿಬ್ಬಂದಿ ಮೇಲೆ ನಿಗಾವಹಿಸಲು ಇನ್ಸ್ಪೆಕ್ಟರ್ಗಳಿಗೆ ಖಡಕ್ ಸೂಚನೆ ನೀಡಲಾಗಿದೆ.








