ತುಳುನಾಡ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ…..!

ಮಂಗಳೂರು

     ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡಿನ ದೈವಗಳನ್ನು ಕೆಟ್ಟದಾಗಿ ಅನುಕರಣೆ ಮಾಡಿದ ಬಾಲಿವುಡ್‌ ನಟ ರಣ್‍ವೀರ್ ಸಿಂಗ್  ವಿರುದ್ಧ ದೈವಾರಾಧಕರು ತೀವ್ರ ಬೇಸರ ಹೊರಹಾಕಿದ್ದಾರೆ. ಕಾಂತಾರ ಚಾಪ್ಟರ್‌ 1  ಚಿತ್ರದಲ್ಲಿ ರಿಷಬ್‌ ಶೆಟ್ಟಿ  ಅಭಿನಯವನ್ನು ಕೊಂಡಾಡುವ ಭರದಲ್ಲಿ, ರಿಷಬ್‌ ಸಮ್ಮುಖದಲ್ಲಿಯೇ ಚಾಮುಂಡಿ ದೈವದ ಅವಾಹನೆಯನ್ನು ರಣವೀರ್‌ ಸಿಂಗ್‌ ಅಣಕಿಸಿದ್ದರು.

    ಈ ಘಟನೆಗೆ ತುಳುನಾಡ ದೈವಾರಾಧನೆ ರಕ್ಷಣಾ ಚಾವಡಿ ಸಂಚಾಲಕ ಕಮಲಾಕ್ಷ ಗಂಧಕಾಡು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತುಳುನಾಡಿನ ದೈವಗಳಿಗೆ ನಿರಂತರ ಅವಮಾನ ಮಾಡಲಾಗುತ್ತಿದೆ. ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಇದ್ದರೂ ಅದಕ್ಕೆ ವಿರೋಧಿಸದಿರುವುದು ಖಂಡನೀಯ. ರಣಬೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು. ನಿರ್ದೇಶಕ ರಿಷಬ್ ಶೆಟ್ಟಿ ಈ ಕೂಡಲೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾ ವ್ಯಾಪಕ ಟೀಕೆ ವ್ಯಕ್ತವಾಗಿದೆ. ʼರಿಷಬ್ ಅವರ ಕಾಂತಾರ ಸಿನಿಮಾವನ್ನು ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತುʼ ಅಂತ ರಣವೀರ್‌ ಸಿಂಗ್‌ ಅನುಕರಣೆ ಮಾಡಿದ್ದಾರೆ. ರಣವೀರ್‌ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದಾರೆ. 

    ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ರಣವೀರ್ ಸಿಂಗ್ ನಿರೂಪಕರಾಗಿದ್ದರು. ಕಾಂತಾರ ಸಿನಿಮಾದಲ್ಲಿ ಬರುವ ಚಾಮುಂಡಿ ದೈವವನ್ನು ‘ಹೆಣ್ಣು ದೆವ್ವ’ ಅಂತ ಕರೆದಿದ್ದಾರೆ. ರಣವೀರ್ ಸಿಂಗ್ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾರ್ಯಕ್ರಮ ನಡೆಯುವಾಗ ರಿಷಬ್ ಶೆಟ್ಟಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ರಣವೀರ್ ಅನುಕರಣೆಗೆ ಸ್ವತಃ ರಿಷಬ್ ಅವರೇ ನಕ್ಕಿದ್ದಾರೆ. ಬಾಲಿವುಡ್ ನಟನಿಗೆ ರಿಷಬ್ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದಾರೆ.

Recent Articles

spot_img

Related Stories

Share via
Copy link